Kerala Name Change: ಕೇರಳ ಅಲ್ಲ ಕೇರಳಂ; ರಾಜ್ಯದ ಹೆಸರು ಬದಲಾಯಿಸುವ ನಿರ್ಣಯಕ್ಕೆ ಅಂಗೀಕಾರ, ಕೇಂದ್ರದ ಅನುಮೋದನೆ ಬಾಕಿ
ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಈ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಿದ್ದು, ರಾಜ್ಯದ ಹೆಸರು ಬದಲಾವಣೆ ಆಗಬೇಕಾದರೆ ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಬೇಕು. ಈ ಹಿಂದೆಯೂ ಕೇರಳ ಇದೇ ರೀತಿ ನಿರ್ಣಯ ಮಂಡಿಸಿ ಕೇಂದ್ರಕ್ಕೆ ಕಳುಹಿಸಿದ್ದು, ಕೇಂದ್ರ ತಿದ್ದುಪಡಿಗಳನ್ನು ಸೂಚಿಸಿ ಅದನ್ನು ಹಿಂತಿರುಗಿಸಿತ್ತು.

ತಿರುನಂತಪುರಂ ಜೂನ್ 25: ಕೇರಳದ (Kerala) ಹೆಸರನ್ನು ಅಧಿಕೃತವಾಗಿ ‘ಕೇರಳಂ’ (Keralam) ಎಂದು ಬದಲಾಯಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ಎರಡನೇ ನಿರ್ಣಯವನ್ನು ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ. ರಾಜ್ಯ ವಿಧಾನಸಭೆಯು (state Assembly) ಇದೇ ರೀತಿಯ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿದ ಸುಮಾರು ಒಂದು ವರ್ಷದ ನಂತರ ಇದು ಬಂದಿದೆ. ಈ ಹಿಂದೆ ತಿದ್ದುಪಡಿಗಾಗಿ ಕೇಂದ್ರ ಸರ್ಕಾರ ಅದನ್ನು ಹಿಂದಿರುಗಿಸಿತ್ತು. ನಿರ್ಣಯವನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ಕೇರಳ ಸರ್ಕಾರ ಹೇಳಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ, ಕೇಂದ್ರ ಗೃಹ ಸಚಿವಾಲಯವು ಕೇರಳ ಸರ್ಕಾರದ ನಿರ್ಣಯವನ್ನು ಪರಿಶೀಲಿಸಿದ್ದು, ರಾಜ್ಯದ ಹೆಸರನ್ನು ಬದಲಾಯಿಸಲು “ತಕ್ಷಣದ ಕ್ರಮಗಳನ್ನು” ವಿನಂತಿಸಿದ್ದಕ್ಕೆ ಕೆಲವು ತಾಂತ್ರಿಕ ಮಾರ್ಪಾಡುಗಳನ್ನು ಮಾಡುವಂತೆ ಶಿಫಾರಸು ಮಾಡಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಸ್ತಾಪಿಸಿದ ನಿರ್ಣಯವು ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳಲ್ಲಿ ಕೇರಳದ ಹೆಸರನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.
ನಿರ್ಣಯವನ್ನು ಮಂಡಿಸಿದ ಕೇರಳ ಸಿಎಂ, ರಾಜ್ಯವನ್ನು ಮಲಯಾಳಂ ಭಾಷೆಯಲ್ಲಿ ‘ಕೇರಳಂ’ ಎಂದು ಕರೆಯುತ್ತಾರೆ. ಮಲಯಾಳಿ ಭಾಷಿಕರಿಗಾಗಿ ಅಖಂಡ ಕೇರಳದ ಬೇಡಿಕೆ ದೇಶದ ಸ್ವಾತಂತ್ರ್ಯ ಹೋರಾಟದಿಂದಲೂ ಪ್ರಬಲವಾಗಿದೆ ಎಂದು ಹೇಳಿದ್ದಾರೆ. ನಮ್ಮ ರಾಜ್ಯದ ಹೆಸರನ್ನು ಸಂವಿಧಾನದ ಮೊದಲ ಶೆಡ್ಯೂಲ್ನಲ್ಲಿ ಕೇರಳ ಎಂದು ಬರೆಯಲಾಗಿದೆ. ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಧಾನಸಭೆ ವಿನಂತಿ ಮಾಡುತ್ತಿದೆ” ಎಂದು ವಿಜಯನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಆಡಳಿತಾರೂಢ ಎಲ್ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಎರಡೂ ಸದಸ್ಯರು ನಿರ್ಣಯವನ್ನು ಬೆಂಬಲಿಸಿದರು. ಯುಡಿಎಫ್ ಶಾಸಕ ಎನ್ ಶಂಸುದ್ದೀನ್ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದು ಸರ್ಕಾರ ಅದನ್ನು ನಿರಾಕರಿಸಿತು. ತರುವಾಯ, ಸ್ಪೀಕರ್ ಎಎನ್ ಶಂಸೀರ್ ಅವರು ನಿರ್ಣಯವನ್ನು ವಿಧಾನಸಭೆಯ ಸರ್ವಾನುಮತದ ಅಂಗೀಕಾರವನ್ನು ಘೋಷಿಸಿದರು.
ರಾಜ್ಯದ ಹೆಸರನ್ನು ಬದಲಾಯಿಸಬಹುದೇ?
1947 ರಲ್ಲಿ ಸ್ವಾತಂತ್ರ್ಯದ ನಂತರ, ನೂರಕ್ಕೂ ಹೆಚ್ಚು ಭಾರತೀಯ ನಗರಗಳು ಮತ್ತು ಹಲವಾರು ರಾಜ್ಯಗಳು ತಮ್ಮ ಹೆಸರನ್ನು ಬದಲಾಯಿಸಿವೆ. ಉತ್ತರಾಂಚಲವು 2007 ರಲ್ಲಿ ಉತ್ತರಾಖಂಡವಾಯಿತು. ಬದಲಾದ ಹೆಸರು ಉತ್ತರಾಖಂಡ ಆಂದೋಲನ ಚಳುವಳಿಯನ್ನು ಗೌರವಿಸುತ್ತದೆ ಎಂದು ನಂಬಲಾಗಿದೆ, ಇದು 2000 ರಲ್ಲಿ ಉತ್ತರ ಪ್ರದೇಶದಿಂದ ಈ ರಾಜ್ಯವನ್ನು ವಿಭಜಿಸಲಾಗಿತ್ತು. ಒರಿಸ್ಸಾ (ಹೆಸರಿನ ಬದಲಾವಣೆ) ಕಾಯಿದೆಯ ನಂತರ, ಒರಿಸ್ಸಾವನ್ನು 2011 ರಲ್ಲಿ ಒಡಿಶಾ ಎಂದು ಮರುನಾಮಕರಣ ಮಾಡಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ