ಉತ್ತರ ಪ್ರದೇಶದ ಅಭಿವೃದ್ಧಿಯ ಜಾಹೀರಾತಿನಲ್ಲಿ ಕೊಲ್ಕತ್ತಾದ ಫೋಟೋಗಳು; ಯೋಗಿ ಸರ್ಕಾರದ ವಿರುದ್ಧ ಟಿಎಂಸಿ ಲೇವಡಿ

ಮಮತಾ ಬ್ಯಾನರ್ಜಿ ಸರ್ಕಾರ ನಿರ್ಮಿಸಿರುವ ಕೊಲ್ಕತ್ತಾ ಫ್ಲೈಓವರ್ (ಮಾ ಫ್ಲೈಓವರ್), ಕೊಲ್ಕತ್ತಾದ ಬೃಹತ್ ಕಟ್ಟಡಗಳನ್ನು ಯೋಗಿ ಸರ್ಕಾರದ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಅಭಿವೃದ್ಧಿಯ ಜಾಹೀರಾತಿನಲ್ಲಿ ಕೊಲ್ಕತ್ತಾದ ಫೋಟೋಗಳು; ಯೋಗಿ ಸರ್ಕಾರದ ವಿರುದ್ಧ ಟಿಎಂಸಿ ಲೇವಡಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Updated By: ಸುಷ್ಮಾ ಚಕ್ರೆ

Updated on: Sep 12, 2021 | 3:47 PM

ಕೊಲ್ಕತ್ತಾ: ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ತೋರಿಸಲು ಪತ್ರಿಕೆಗಳ ಮುಖಪುಟದಲ್ಲಿ ಬೃಹತ್ ಜಾಹೀರಾತು ನೀಡಲಾಗಿತ್ತು. ಆ ಜಾಹೀರಾತಿನಿಂದ ಬಿಜೆಪಿಗೆ ಈಗ ಭಾರೀ ಮುಖಭಂಗ ಅನುಭವಿಸುವಂತಾಗಿದೆ. ಇಡೀ ಪುಟದಲ್ಲಿ ನೀಡಲಾಗಿದ್ದ ಜಾಹೀರಾತಿನಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳ ಫೋಟೋ ಬದಲಾಗಿ ಪಶ್ಚಿಮ ಬಂಗಾಳದ ಕೆಲವು ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತನ್ನ ಸರ್ಕಾರದ ಜಾಹೀರಾತಿನಲ್ಲಿ ಹಾಕಿಸಿಕೊಂಡಿರುವ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟಿಎಂಸಿ ಭಾರೀ ಲೇವಡಿ ಮಾಡಿದೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನೀಡಿರುವ ಜಾಹೀರಾತು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ನಿರ್ಮಿಸಿರುವ ಕೊಲ್ಕತ್ತಾ ಫ್ಲೈಓವರ್ (ಮಾ ಫ್ಲೈಓವರ್), ಕೊಲ್ಕತ್ತಾದ ಬೃಹತ್ ಕಟ್ಟಡಗಳನ್ನು ಯೋಗಿ ಸರ್ಕಾರದ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತಿತರ ನಾಯಕರು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕಟ್ಟಡ, ಕಾಮಗಾರಿಗಳ ಫೋಟೋವನ್ನು ಉತ್ತರ ಪ್ರದೇಶ ಸರ್ಕಾರ ಕದ್ದಿದೆ ಎಂದು ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೃಷ್ಟಿಯಲ್ಲಿ ಅಭಿವೃದ್ಧಿ ಅಥವಾ ಬದಲಾವಣೆ ಎಂದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳ ಫೋಟೋಗಳನ್ನು ಕದಿಯುವುದಾಗಿದೆ. ಆ ಫೋಟೋಗಳನ್ನು ಕದಿಯುವುದಷ್ಟೇ ಅಲ್ಲದೆ ಅದು ತನ್ನದೇ ಸಾಧನೆ ಎಂದು ಪತ್ರಿಕೆಗಳಲ್ಲಿ ಬಿಂಬಿಸಿಕೊಳ್ಳುವುದೇ ಯೋಗಿ ಆದಿತ್ಯನಾಥ್ ಅವರ ಸಾಧನೆ. ಬಿಜೆಪಿಯ ಪ್ರಭಾವಶಾಲಿ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಮಾಡೆಲ್ ಸರ್ಕಾರ ವಿಫಲವಾಗಿದೆ ಎಂಬುದನ್ನು ಇದು ಸಾರಿ ಹೇಳುತ್ತಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷಏಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಸಚಿವರು, ಸಂಸದರು, ಟಿಎಂಸಿ ನಾಯಕರು ಕೂಡ ಈ ಜಾಹೀರಾತಿನ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಬಿಜೆಪಿಯ ಕಾಲೆಳೆದಿದ್ದಾರೆ. ಈಗಾಗಲೇ ಆ ಇಂಗ್ಲಿಷ್ ಪತ್ರಿಕೆಯ ಡಿಜಿಟಲ್ ಪ್ಲಾಟ್​ಫಾರ್ಮ್ ಹಾಗೂ ಇ-ಪೇಪರ್​ಗಳಲ್ಲಿ ಜಾಹೀರಾತಿನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್​​ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಜೀಜ್​ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಅಮಿತಾಭ್ ಠಾಕೂರ್ ಸ್ಪರ್ಧೆ ಸಾಧ್ಯತೆ

(Kolkata Flyover In Uttar Pradesh CM Yogi Adityanath Development Advertisement TMC Criticize)