Breaking News: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಪ್ರಸಾದ್ ಯಾದವ್ ಸೇರಿ 15 ಜನರ ವಿರುದ್ಧ ಸಿಬಿಐ ಚಾರ್ಜ್​ಶೀಟ್ ಸಲ್ಲಿಕೆ

Land for Job Scam: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ ಮತ್ತು ಇತರ 13 ಜನರ ವಿರುದ್ಧ ಸಿಬಿಐ ಇಂದು ಚಾರ್ಜ್ ಶೀಟ್ ಸಲ್ಲಿಸಿದೆ.

Breaking News: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಪ್ರಸಾದ್ ಯಾದವ್ ಸೇರಿ 15 ಜನರ ವಿರುದ್ಧ ಸಿಬಿಐ ಚಾರ್ಜ್​ಶೀಟ್ ಸಲ್ಲಿಕೆ
ಲಾಲು ಪ್ರಸಾದ್ ಯಾದವ್
Follow us
| Updated By: ಸುಷ್ಮಾ ಚಕ್ರೆ

Updated on: Oct 07, 2022 | 9:07 PM

ಪಾಟ್ನಾ: ತಮ್ಮ ಅಧಿಕಾರಾವಧಿಯಲ್ಲಿ ನಡೆದ ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ (Land for Job Scam) ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav), ಅವರ ಪತ್ನಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ ಮತ್ತು ಇತರ 13 ಜನರ ವಿರುದ್ಧ ಸಿಬಿಐ (CBI) ಇಂದು ಚಾರ್ಜ್ ಶೀಟ್ ಸಲ್ಲಿಸಿದೆ. ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ರೈಲ್ವೆ ಇಲಾಖೆಯ ಮಾಜಿ ಜನರಲ್ ಮ್ಯಾನೇಜರ್ ಸೌಮ್ಯ ರಾಘವನ್ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 2021ರ ಸೆಪ್ಟೆಂಬರ್ 23 ರಂದು ಪ್ರಾಥಮಿಕ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಈ ಆರೋಪಿಗಳು ತಮ್ಮ ಹೆಸರಿನಲ್ಲಿ ಅಥವಾ ಅವರ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಭೂಮಿಗೆ ಬದಲಾಗಿ ರೈಲ್ವೆ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಚಾರ್ಜ್ ಶೀಟ್​ನಲ್ಲಿ ಆರೋಪಿಸಲಾಗಿತ್ತು. ಈ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಮಾಜಿ ಸಿಎಂ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಭಾರತಿ ಮತ್ತು ಹೇಮಾ ಯಾದವ್ ಅವರ ಹೆಸರಿನಲ್ಲಿ ದಾಖಲೆಗಳ ಮೂಲಕ ಭೂಮಿ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಲಾಲು ಪ್ರಸಾದ್ ಯಾದವ್ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಕಾಲದಿಂದಲೂ ನಡೆದ ಉದ್ಯೋಗಕ್ಕಾಗಿ ಭೂಮಿ ಹಗರಣವು ಅತಿದೊಡ್ಡ ವಂಚನೆಗಳಲ್ಲಿ ಒಂದಾಗಿ ಹೊರಹೊಮ್ಮಬಹುದು ಎಂದು ಸಿಬಿಐ ಮೂಲಗಳು ಹೇಳಿವೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಕಾಂಗ್ರೆಸ್-ಆರ್​ಜೆಡಿ ನಡುವೆ ಮತ್ತಷ್ಟು ಬಿರುಕು, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ವ್ಯಂಗ್ಯವಾಡಿದ ಲಾಲು ಪ್ರಸಾದ್ ಯಾದವ್

ಸಿಬಿಐ ತನಿಖೆ ವೇಳೆ ಮಹತ್ವದ ದಾಖಲೆಗಳಿರುವ ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇದು ಉದ್ಯೋಗಕ್ಕೆ ಬದಲಾಗಿ ತಮ್ಮ ಭೂಮಿಯನ್ನು ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಿದ 1,458 ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿದೆ ಎನ್ನಲಾಗಿದೆ. ಈ ಪಟ್ಟಿಯನ್ನು ಲಾಲು ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ಅವರೇ ಸಿದ್ಧಪಡಿಸಿದ್ದರು ಎನ್ನಲಾಗಿದೆ.

ಉದ್ಯೋಗಾಂಕ್ಷಿಗಳ ಜಮೀನನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡ ನಂತರ, ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ 1,458 ಪ್ರಕರಣಗಳ ಪೈಕಿ 16 ಪ್ರಕರಣಗಳನ್ನು ಈಗಾಗಲೇ ಸಿಬಿಐ ತನಿಖೆಯಲ್ಲಿ ಪರಿಶೀಲಿಸಲಾಗಿದೆ. ತಪ್ಪು ಮಾಹಿತಿ ಮತ್ತು ಪ್ರಮಾಣಪತ್ರಗಳ ಹೊರತಾಗಿಯೂ ನೇಮಕಗೊಂಡಿರುವ ಈ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಬಿಐ ಮುಂದಾಗಿತ್ತು.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ; ತೇಜಸ್ವಿ ಯಾದವ್ ವಿರುದ್ಧ ಸಿಬಿಐಗೆ ಪ್ರಬಲ ಸಾಕ್ಷಿ ಲಭ್ಯ; ಡಿಸಿಎಂಗೆ ಬಂಧನ ಭೀತಿ

ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಈ ಉದ್ಯೋಗ ಹಗರಣ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಸಿಬಿಐ ಎಂಎಲ್‌ಸಿ ಸುನೀಲ್ ಸಿಂಗ್, ರಾಜ್ಯಸಭಾ ಸಂಸದರಾದ ಅಶ್ಫಾಕ್ ಕರೀಂ ಮತ್ತು ಫಯಾಜ್ ಅಹ್ಮದ್ ಮತ್ತು ಮಾಜಿ ಎಂಎಲ್‌ಸಿ ಸುಬೋಧ್ ರೈ ಸೇರಿದಂತೆ ಹಲವಾರು ಆರ್‌ಜೆಡಿ ನಾಯಕರ ಸ್ಥಳಗಳ ಮೇಲೆ ದಾಳಿ ನಡೆಸಿದೆ. 200ಕ್ಕೂ ಹೆಚ್ಚು ಮಾರಾಟ ಪತ್ರಗಳನ್ನು ಕೇಂದ್ರ ತನಿಖಾ ಸಂಸ್ಥೆಯು ದಾಳಿಯ ಸಮಯದಲ್ಲಿ ವಶಪಡಿಸಿಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ