
ಮುಂಬೈ, ಆಗಸ್ಟ್ 21: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಬೆಟ್ಟದ ಅಂಚಿನಲ್ಲಿ ನಿಂತು ನಾನು ಜಿಗಿಯುತ್ತೇನೆ ಎಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದ 18 ವರ್ಷದ ಯುವಕನನ್ನು ರಕ್ಷಿಸಲು ಮುಂದಾದ ತಂದೆ-ತಾಯಿ ಸಹ ಮಗನ ಜೊತೆ ಕಣಿವೆಗೆ ಬಿದ್ದು ಮೃತಪಟ್ಟಿದ್ದಾರೆ. ಖಾವ್ಡಾ ಬೆಟ್ಟದಲ್ಲಿ ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದ್ದು, ಸುಮಾರು ಮೂರು ಗಂಟೆಗಳ ಕಾಲ ಪೋಷಕರು, ಗ್ರಾಮಸ್ಥರು ಹಾಗೂ ಪೊಲೀಸರು ಯುವಕನನ್ನು ಸುರಕ್ಷಿತ ಸ್ಥಳಕ್ಕೆ ಬರಲು ಮನವೊಲಿಸಲು ಪ್ರಯತ್ನಿಸಿದ ಹೊರತಾಗಿಯೂ ದುರಂತ ಸಂಭವಿಸಿದೆ.
ಬೆಳಿಗ್ಗೆ ಸುಮಾರು 10 ಗಂಟೆಗೆ ದೇವ್ಲಾಯಿ ಪ್ರದೇಶದ ನಿವಾಸಿಯಾಗಿದ್ದ 18 ವರ್ಷದ ಯುವಕ ಬೆಟ್ಟದ ಅಂಚಿಗೆ ತೆರಳಿ ಜಿಗಿಯುವುದಾಗಿ ಹೇಳತೊಡಗಿದ್ದ. ಮುಂದಿನ ಮೂರು ಗಂಟೆಗಳ ಕಾಲ ತಾಯಿ ಹಾಗೂ ಗ್ರಾಮಸ್ಥರು ಆತನ ಭವಿಷ್ಯ, ಪೋಷಕರ ಬಗ್ಗೆ ಯೋಚಿಸುವಂತೆ ಮನವಿ ಮಾಡಿದ್ದರು. ಹೀಗಿದ್ದರೂ ಆತ ಮಾತ್ರ ತನ್ನ ನಿರ್ಧಾರ ಬದಲಿಸಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಹೋಂವರ್ಕ್ ಮಾಡಿಲ್ಲವೆಂದು ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!
ಕೊನೆಯ 15-20 ನಿಮಿಷಗಳಲ್ಲಿ ಇದುವರೆಗೆ ಕೆಳಗಿನಿಂದ ಮನವಿ ಮಾಡುತ್ತಿದ್ದ ತಂದೆ ಬೆಟ್ಟದ ಮೇಲಕ್ಕೆ ಹತ್ತಿದರು. ಮಧ್ಯಾಹ್ನ ಸುಮಾರು 1 ಗಂಟೆಗೆ, ಮಗನನ್ನು ಅಂಚಿನಿಂದ ದೂರ ಎಳೆಯಲು ಯತ್ನಿಸಿದ ವೇಳೆ ಇಬ್ಬರೂ ಸಮತೋಲನ ಕಳೆದುಕೊಂಡು ಕಣಿವೆಗೆ ಬಿದ್ದಾರೆ. ಈ ದೃಶ್ಯ ಕಂಡು ಗಾಬರಿಗೊಂಡ ತಾಯಿಯೂ ಕೆಲವೇ ಕ್ಷಣಗಳಲ್ಲಿ ಕಣಿವೆಗೆ ಬಿದ್ದಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೋಷಕರು ಮತ್ತು ಗ್ರಾಮಸ್ಥರು ಆತನನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರು. ತಾಯಿ ನಿರಂತರವಾಗಿ ಜಿಗಿಯಬೇಡ ಎಂದು ಬೇಡಿಕೊಳ್ಳುತ್ತಿದ್ದರು. ಪೊಲೀಸರು ಸಹ ಸ್ಥಳದಲ್ಲೇ ಇದ್ದರು ಎಂದು ಪ್ರತ್ಯಕ್ಷದರ್ಶಿ ಸಂಜಯ್ ಜಾಧವ್ ಎಂಬವರು ತಿಳಿಸಿರೋದಾಗಿ ಎನ್ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.