
ಆಂಧ್ರಪ್ರದೇಶ, ಆಗಸ್ಟ್ 14: ಶಾಂತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಜ್ಜೆ ಇಟ್ಟ ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ವಿಶೇಷತೆಯಿದೆ. ಶತಮಾನದ ಹಿಂದೆ ಆಂಧ್ರಪ್ರದೇಶದಲ್ಲಿ ಅವರು ನಡೆಸಿದ ಪ್ರವಾಸವು ಚಾರಿತ್ರಿಕ ಘಟ್ಟವಾಗಿ ಮಾರ್ಪಟ್ಟಿದೆ. ಅದರಲ್ಲಿಯೂ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಗರವು ಗಾಂಧೀಜಿಯವರ ಭೇಟಿಯಿಂದ ಹೊಸ ಚೈತನ್ಯವನ್ನು ಪಡೆದುಕೊಂಡಿತ್ತು.
1921 ಏಪ್ರಿಲ್ 3 ರಂದು ಮಹಾತ್ಮ ಗಾಂಧೀಜಿ ಹಾಗೂ ಕಸ್ತೂರ್ಬಾ ಗಾಂಧೀಜಿ ಏಲೂರಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ವೇಳೆ ಗಾಂಧೀಜಿಯವರು ಸ್ವದೇಶಿ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಏಲೂರಿನ ಅಗ್ರಹಾರ ಪ್ರದೇಶದಲ್ಲಿದ್ದ ಮಾರ್ಕಂಡೇಯ ಸ್ವಾಮಿ ದೇವಾಲಯದ ಬಳಿ ‘ಆಂಧ್ರ ಜಾತೀಯ ಮಹಾ ವಿದ್ಯಾಲಯ’ಕ್ಕೆ (ಶ್ರೀ ಗಾಂಧಿ ಜಾತೀಯ ವಿದ್ಯಾಲಯ) ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಸ್ತೂರ್ಬಾ ಗಾಂಧೀಜಿಯವರು ಸ್ಥಳೀಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ, ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಗಾಂಧೀಜಿಯವರು ತಮ್ಮ ಕೈಯಾರ ಒಂದು ಮೇಡಿ (ಅತ್ತಿ) ಗಿಡವನ್ನು ನೆಟ್ಟಿದ್ದರು.
ಗಾಂಧೀಜಿ ನೆಟ್ಟಿದ್ದ ಆ ಅತ್ತಿ ಗಿಡವು ಕಾಲಕ್ರಮೇಣ ಬೃಹತ್ ವೃಕ್ಷವಾಗಿ ಬೆಳೆದು, ಸುಮಾರು 100 ವರ್ಷಗಳ ಕಾಲ ಪೀಳಿಗೆಯ ವಿದ್ಯಾರ್ಥಿಗಳಿಗೆ ತಂಪಾದ ನೆರಳನ್ನು ನೀಡಿತು. ಗಾಂಧೀಜಿಯವರ ಸ್ಪರ್ಶದ ನೆನಪನ್ನು ಹೊತ್ತ ಆ ಮರದಡಿ ಕುಳಿತು ಓದುವುದನ್ನು ಸ್ಥಳೀಯ ವಿದ್ಯಾರ್ಥಿಗಳು ಹೆಮ್ಮೆಯಿಂದ ಭಾವಿಸುತ್ತಿದ್ದರು. ಆದರೆ, ವಯೋಸಹಜ ಕಾರಣಗಳಿಂದ ಮತ್ತು ಪ್ರಕೃತಿಯ ವೈಪರೀತ್ಯಗಳಿಂದಾಗಿ 2022 ರ ವೇಳೆಗೆ ಈ ಐತಿಹಾಸಿಕ ವೃಕ್ಷವು ಒಣಗಿಹೋಯಿತು.
ಅತ್ತಿ ಮರ ಒಣಗಿಹೋದರೂ ಅದೇ ಸ್ಥಳದಲ್ಲಿ, ಒಣಗಿದ ಮರದ ಪಕ್ಕದಲ್ಲೇ ಸ್ವಾಭಾವಿಕವಾಗಿ ಬೆಳೆದ ಬೇವಿನ ಮರವು ಇಂದು ದಟ್ಟವಾಗಿ ಬೆಳೆದು ನಿಂತಿದೆ. ಪ್ರಸ್ತುತ ಆ ಬೇವಿನ ಮರದ ಕೆಳಗೆ ಸಿಮೆಂಟ್ ಪೀಠವನ್ನು ನಿರ್ಮಿಸಲಾಗಿದ್ದು, ಸಾಯಂಕಾಲದ ವೇಳೆ ವಿದ್ಯಾರ್ಥಿಗಳು ಸಾಲಾಗಿ ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ. ಗಾಂಧೀಜಿ ನೆಟ್ಟ ಮರದ ಜಾಗದಲ್ಲಿ ಬೆಳೆದು ನಿಂತಿರುವ ಈ ಬೇವಿನ ಮರವು ಇಂದು ರಾಷ್ಟ್ರೀಯ ವಿದ್ಯಾಲಯದ ಆವರಣದಲ್ಲಿ ಗಾಂಧೀಜಿಯವರ ನೆನಪನ್ನು ಸಜೀವವಾಗಿರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Fri, 14 August 26