AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತ್ಯಕ್ರಿಯೆ ನಡೆಸಿ ಕಣ್ಣೀರಿಡುತ್ತಿದ್ದ ಪತ್ನಿ ಎದುರು ಪ್ರತ್ಯಕ್ಷನಾದ ಪತಿ: ಕುಟುಂಬದಲ್ಲಿ ಹರ್ಷ, ಸುಟ್ಟ ಶವ ಯಾರದ್ದು ಎಂಬುದೇ ನಿಗೂಢ

ಒಡಿಶಾದ ಧೆಂಕನಾಲ್‌ನಲ್ಲಿ ಕಾಣೆಯಾಗಿದ್ದ ಯುವಕನನ್ನು ಮೃತನೆಂದು ಭಾವಿಸಿ ಕುಟುಂಬ ಅಂತ್ಯಕ್ರಿಯೆ ನಡೆಸಿತ್ತು. ಆದರೆ ಸುಮಾರು ಒಂದು ತಿಂಗಳ ಬಳಿಕ ಆತ ಜೀವಂತವಾಗಿ ಮನೆಗೆ ಮರಳಿದ್ದಾನೆ. ಇದರಿಂದ ಕುಟುಂಬದಲ್ಲಿ ಹರ್ಷ ಮೂಡಿದರೆ, ದಹನ ಮಾಡಲಾದ ಅಪರಿಚಿತ ಶವ ಯಾರದ್ದು ಎಂಬ ಪ್ರಶ್ನೆ ಪೊಲೀಸರ ತನಿಖೆಗೆ ಹೊಸ ನಿಗೂಢವಾಗಿ ಪರಿಣಮಿಸಿದೆ.

ಅಂತ್ಯಕ್ರಿಯೆ ನಡೆಸಿ ಕಣ್ಣೀರಿಡುತ್ತಿದ್ದ ಪತ್ನಿ ಎದುರು ಪ್ರತ್ಯಕ್ಷನಾದ ಪತಿ: ಕುಟುಂಬದಲ್ಲಿ ಹರ್ಷ, ಸುಟ್ಟ ಶವ ಯಾರದ್ದು ಎಂಬುದೇ ನಿಗೂಢ
ಪೊಲೀಸ್ ಠಾಣೆ Image Credit source: Timesnow
ನಯನಾ ರಾಜೀವ್
|

Updated on: Sep 03, 2026 | 8:00 AM

Share

ಭುವನೇಶ್ವರ, ಸೆಪ್ಟೆಂಬರ್ 03: ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ನಂಬಲಸಾಧ್ಯವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಶವವೊಂದನ್ನು ಕಾಣೆಯಾಗಿದ್ದ ತಮ್ಮ 29 ವರ್ಷದ ಮಗನೆಂದು ಭಾವಿಸಿ ಕುಟುಂಬಸ್ಥರು ಅಂತಿಮ ಸಂಸ್ಕಾರ, ಸಾಂಪ್ರದಾಯಿಕ ಶ್ರಾದ್ಧ ಹಾಗೂ ಉತ್ತರಕ್ರಿಯೆಗಳನ್ನು ನೆರವೇರಿಸಿದ್ದರು. ಆದರೆ, ಅಂತ್ಯಕ್ರಿಯೆ ಮುಗಿದ ಸುಮಾರು ಒಂದು ತಿಂಗಳ ನಂತರ ಆ ವ್ಯಕ್ತಿ ಜೀವಂತವಾಗಿ ಮನೆಗೆ ಮರಳಿದ್ದಾನೆ.

ಸನಾತನ್ ನಾಯಕ್ ಎಂಬಾತ ಜೀವಂತವಾಗಿ ವಾಪಸಾಗುತ್ತಿದ್ದಂತೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರಾದರೂ, ಕುಟುಂಬವು ಅಂದು ದಹನ ಮಾಡಿದ್ದು ಯಾರ ಮೃತದೇಹವನ್ನು ಎಂಬ ಪ್ರಶ್ನೆ ಈಗ ಸ್ಥಳೀಯ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಘಟನೆಯ ಹಿನ್ನೆಲೆ ಮತ್ತು ನಡೆದಿದ್ದೇನು?

ಜುಲೈ 27 ರಂದು ನಾಪತ್ತೆ: ಧೆಂಕನಾಲ್‌ನ ನಿವಾಸಿ ಸನಾತನ್ ನಾಯಕ್ ಜುಲೈ 27 ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ. ಕುಟುಂಬಸ್ಥರು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ.

ಭತ್ತದ ಗದ್ದೆಯಲ್ಲಿ ಕೊಳೆತ ಶವ: ಹತ್ತು ದಿನಗಳ ನಂತರ ಸ್ಥಳೀಯ ಭತ್ತದ ಗದ್ದೆಯ ನೀರಿನಲ್ಲಿ ತೀವ್ರವಾಗಿ ಕೊಳೆತು ಗುರುತು ಸಿಗದ ಸ್ಥಿತಿಯಲ್ಲಿದ್ದ ಶವವೊಂದು ಪೊಲೀಸರಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ, ಆ ಮೃತದೇಹದ ಮೇಲಿದ್ದ ಪ್ಯಾಂಟ್-ಶರ್ಟ್ ನೋಡಿ ಅದು ಸನಾತನ್ ನಾಯಕ್‌ನದ್ದೇ ಎಂದು ಕುಟುಂಬಸ್ಥರು ನಂಬಿ ಸ್ವೀಕರಿಸಿದ್ದರು.

ಮತ್ತಷ್ಟು ಓದಿ: ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ

ಹಿಂದೂ ಸಂಪ್ರದಾಯದಂತೆ ಮೃತದೇಹದ ದಹನ ಸಂಸ್ಕಾರ ಮುಗಿಸಿ, ಕುಟುಂಬಸ್ಥರು 11 ದಿನಗಳ ಶುದ್ಧಿಕಾರ್ಯಗಳನ್ನು ಪೂರೈಸಿದ್ದರು. ಸನಾತನ್‌ನ ಪತ್ನಿ ಬಿಳಿ ಸೀರೆಯುಟ್ಟು ವಿಧವೆಯಂತೆ ಶೋಕಾಚರಣೆ ಆರಂಭಿಸಿದ್ದರು.

ಅನಿರೀಕ್ಷಿತ ತಿರುವು ಹಾಗೂ ಮಗ ಪ್ರತ್ಯಕ್ಷ

ಪೊಲೀಸರಿಂದ ಕರೆ: ಅಂತಿಮ ವಿಧಿವಿಧಾನಗಳು ಮುಗಿದು ಒಂದು ತಿಂಗಳು ಕಳೆಯುತ್ತಿದ್ದಂತೆ, ಸನಾತನ್ ನಾಯಕ್ ಸಮೀಪದ ಪಟ್ಟಣವೊಂದರಲ್ಲಿ ಜೀವಂತವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದರು.

ಕಣ್ಣೀರಿನ ಪುನರ್ಮಿಲನ: ಸಂಬಂಧಿಕರು ತಕ್ಷಣ ಧಾವಿಸಿ ಆತನನ್ನು ಮನೆಗೆ ಕರೆತಂದರು. ಸತ್ತನೆಂದು ನಂಬಿದ್ದ ಪತಿ ಮನೆಗೆ ಕಾಲಿಡುತ್ತಿದ್ದಂತೆ ಪತ್ನಿ ಹಾಗೂ ತಾಯಿ ಮಂಜು ನಾಯಕ್ ಅವರ ಆನಂದಭಾಷ್ಪ ಮುಗಿಲುಮುಟ್ಟಿತ್ತು. ಸನಾತನ್ ಈ ದಿನಗಳಲ್ಲಿ ಎಲ್ಲಿಗೆ ಹೋಗಿದ್ದ, ಯಾಕೆ ಸಂಪರ್ಕಕ್ಕೆ ಸಿಗಲಿಲ್ಲ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ದಹನವಾದ ಶವ ಯಾರದ್ದು?: ಸನಾತನ್ ನಾಯಕ್ ಮನೆಗೆ ಮರಳಿದ ಬೆನ್ನಲ್ಲೇ ಗ್ರಾಮದಲ್ಲಿ ಹೊಸ ಆತಂಕ ಶುರುವಾಗಿದೆ. ಕುಟುಂಬವು ಅಂದು ಅಂತ್ಯಕ್ರಿಯೆ ನಡೆಸಿದ ಅಪರಿಚಿತ ವ್ಯಕ್ತಿ ಯಾರು? ಆತನದ್ದು ಕೊಲೆಯೋ ಅಥವಾ ಆಕಸ್ಮಿಕ ಸಾವೋ? ಎಂಬುದು ನಿಗೂಢವಾಗಿಯೇ ಉಳಿದಿದೆ.

ಡಿಎನ್‌ಎ ಪರೀಕ್ಷೆಯ ಲೋಪ: ಸಾಮಾನ್ಯವಾಗಿ ಗುರುತಿಸಲಾಗದ ಅಥವಾ ತೀವ್ರವಾಗಿ ಕೊಳೆತ ಶವಗಳು ಪತ್ತೆಯಾದಾಗ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಡಿಎನ್‌ಎ ಪರೀಕ್ಷೆ ನಡೆಸಿ ಗುರುತು ದೃಢಪಡಿಸಿಕೊಳ್ಳುವುದು ಕಡ್ಡಾಯ. ಕೇವಲ ಬಟ್ಟೆಗಳ ಆಧಾರದ ಮೇಲೆ ಶವವನ್ನು ಹಸ್ತಾಂತರಿಸಿದ ಸ್ಥಳೀಯ ಪೊಲೀಸ್ ಮತ್ತು ಆಸ್ಪತ್ರೆ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಈಗ ಕಾಣೆಯಾದ ವ್ಯಕ್ತಿಗಳ ಪಟ್ಟಿಯನ್ನು ಮರುಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us