3.5 ತಿಂಗಳ ನಂತರ ಮನೆಗೆ ಮರಳಿದ ಸಾಕುನಾಯಿ: ಅಂಬಾಜಿ ದೇವಿ ಹರಕೆ ತೀರಿಸಲು 60 ಕಿ.ಮೀ ನಡೆದ ಮಾಲೀಕ

ಗುಜರಾತ್‌ನಲ್ಲಿ ಮೂರೂವರೆ ತಿಂಗಳ ನಂತರ ಕಾಣೆಯಾಗಿದ್ದ 'ಟೈಗರ್' ಎಂಬ ಸಾಕುನಾಯಿ ಮಾಲೀಕನ ಬಳಿ ಮರಳಿದ ಹೃದಯಸ್ಪರ್ಶಿ ಘಟನೆ. ನಾಯಿ ಸಿಕ್ಕರೆ ಅಂಬಾಜಿ ದೇವಿ ದೇವಸ್ಥಾನಕ್ಕೆ 60 ಕಿ.ಮೀ ಪಾದಯಾತ್ರೆ ಮಾಡುವ ಹರಕೆ ಹೊತ್ತಿದ್ದ ಮಾಲೀಕ, ನಾಯಿ ವಾಪಸ್ ಬಂದ ನಂತರ ತನ್ನ ಸಿಬ್ಬಂದಿಯೊಂದಿಗೆ 60 ಕಿ.ಮೀ ನಡೆದು ಹರಕೆ ತೀರಿಸಿದ್ದಾನೆ. ಇದು ಮಾಲೀಕ ಮತ್ತು ಸಾಕುಪ್ರಾಣಿ ನಡುವಿನ ಅತೂಟ ಸಂಬಂಧಕ್ಕೆ ಸಾಕ್ಷಿಯಾಗಿದೆ.

3.5 ತಿಂಗಳ ನಂತರ ಮನೆಗೆ ಮರಳಿದ ಸಾಕುನಾಯಿ: ಅಂಬಾಜಿ ದೇವಿ ಹರಕೆ ತೀರಿಸಲು 60 ಕಿ.ಮೀ ನಡೆದ ಮಾಲೀಕ
ನಾಯಿ

Updated on: Aug 04, 2026 | 9:42 AM

ಅಹಮದಾಬಾದ್, ಆಗಸ್ಟ್​ 04: ಸಾಕುಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ಮುರಿಯಲಾಗದ ಪ್ರೀತಿ ಹಾಗೂ ನಂಬಿಕೆಗೆ ಸಾಕ್ಷಿಯಾಗುವ ಹೃದಯಸ್ಪರ್ಶಿ ಘಟನೆಯೊಂದು ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಮೂರೂವರೆ ತಿಂಗಳಿನಿಂದ ಕಾಣೆಯಾಗಿದ್ದ ‘ಟೈಗರ್’ ಹೆಸರಿನ ಲ್ಯಾಬ್ರಡಾರ್ ತಳಿಯ ಸಾಕು ನಾಯಿ(Dog) ಅಚ್ಚರಿಯ ರೀತಿಯಲ್ಲಿ ಮನೆಗೆ ಮರಳಿದ್ದು, ಹರಕೆ ತೀರಿಸಲು ಮಾಲೀಕ ಹಾಗೂ ಸಿಬ್ಬಂದಿ ಪ್ರಸಿದ್ಧ ಅಂಬಾಜಿ ದೇವಸ್ಥಾನಕ್ಕೆ 60 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಪಾದಯಾತ್ರೆ ನಡೆಸಿದ್ದಾರೆ.

ಮೂರು ತಿಂಗಳ ಶೋಧ ಮತ್ತು ಹರಕೆ
ಹೋಟೆಲ್ ಮಾಲೀಕರಾಗಿದ್ದ ಬನಸ್ಕಾಂತ ನಿವಾಸಿಯೊಬ್ಬರ ಪ್ರೀತಿಯ ನಾಯಿ ‘ಟೈಗರ್’ ಮೂರು ತಿಂಗಳ ಹಿಂದೆ ದಿಢೀರ್ ಕಣ್ಮರೆಯಾಗಿತ್ತು. ಮಾಲೀಕರು ಆ ಪ್ರದೇಶದಾದ್ಯಂತ ಹುಡುಕಾಟ ನಡೆಸಿದರೂ ನಾಯಿ ಪತ್ತೆಯಾಗಿರಲಿಲ್ಲ. ಕೊನೆಗೆ ಭರವಸೆ ಕಳೆದುಕೊಳ್ಳದ ಮಾಲೀಕರು, ಪ್ರಸಿದ್ಧ ಶ್ರೀ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನನ್ನ ಪ್ರೀತಿಯ ನಾಯಿ ಸುರಕ್ಷಿತವಾಗಿ ಮರಳಿ ಬಂದರೆ ಹೋಟೆಲ್ ಸಿಬ್ಬಂದಿಯೊಂದಿಗೆ 60 ಕಿ.ಮೀ ನಡೆದುಕೊಂಡು ಬಂದು ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದರು.

ಮಾಲೀಕರ ಧ್ವನಿ ಕೇಳಿ ಓಡಿ ಬಂದ ‘ಟೈಗರ್‘: ಇತ್ತೀಚೆಗೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ರಿಕ್ಷಾವೊಂದರಲ್ಲಿದ್ದ ಟೈಗರ್, ತನ್ನ ಮಾಲೀಕರ ಧ್ವನಿಯನ್ನು ಗುರುತಿಸಿ ತಕ್ಷಣವೇ ಕೆಳಗಿಳಿದು ನೇರವಾಗಿ ಮಾಲೀಕರ ಬಳಿಗೆ ಓಡಿಬಂದಿದೆ. ತಿಂಗಳುಗಳ ನಂತರ ನಡೆದ ಈ ಅದ್ಭುತ ಮರುಮಿಲನ ಕುಟುಂಬಸ್ಥರಲ್ಲಿ ಸಂತಸ ತಂದಿದೆ.

ಮತ್ತಷ್ಟು ಓದಿ: Video: ಲಿಫ್ಟ್​ ಒಳಗೆ ಯುವತಿಯರ ಮೇಲೆ ಸಾಕು ನಾಯಿ ದಾಳಿ

ಕೊಟ್ಟ ಮಾತಿನಂತೆ ಹೋಟೆಲ್ ಮಾಲೀಕರು ತಮ್ಮ ಸಮಸ್ತ ಸಿಬ್ಬಂದಿ ಹಾಗೂ ಮರಳಿ ಬಂದ ನಾಯಿ ‘ಟೈಗರ್’ ಜೊತೆ ಅಂಬಾಜಿ ದೇವಸ್ಥಾನಕ್ಕೆ 60 ಕಿ.ಮೀ ಪಾದಯಾತ್ರೆ ಕೈಗೊಂಡರು. ದಾರಿಯುದ್ದಕ್ಕೂ ಸ್ಪೀಕರ್‌ಗಳಲ್ಲಿ ಭಕ್ತಿಗೀತೆಗಳನ್ನು ಹಾಕಿ, ನಾಯಿಯೊಂದಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಾ ಸಾಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ.

ಗುಜರಾತ್‌ನ ಅರಾವಳಿ ಪರ್ವತ ಶ್ರೇಣಿಯಲ್ಲಿರುವ ‘ಅಂಬಾಜಿ ದೇವಾಲಯ’ವು ಭಾರತದ ಪ್ರಮುಖ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಪಾದಯಾತ್ರೆ (Padayatra) ನಡೆಸಿ ತಮ್ಮ ಹರಕೆ ತೀರಿಸುತ್ತಾರೆ. ಲ್ಯಾಬ್ರಡಾರ್ ತಳಿಯ ನಾಯಿಗಳು ತಮ್ಮ ಮಾಲೀಕರ ಧ್ವನಿ, ವಾಸನೆ ಮತ್ತು ವರ್ತನೆಯನ್ನು ವರ್ಷಗಳ ಕಾಲ ನೆನಪಿಟ್ಟುಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿರುತ್ತವೆ ಎಂಬುದಕ್ಕೆ ಈ ಘಟನೆ ಜೀವಂತ ನಿದರ್ಶನವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us