ಮಿಷನ್ ಸುದರ್ಶನ ಚಕ್ರ; AK-630 ವಾಯು ರಕ್ಷಣಾ ಬಂದೂಕುಗಳನ್ನು ಖರೀದಿಸಿ ಪಾಕ್ ಗಡಿಯಲ್ಲಿ ನಿಯೋಜಿಸಲಿದೆ ಸೇನೆ

ಮಿಷನ್ ಸುದರ್ಶನ ಚಕ್ರದ ಭಾಗವಾಗಿ ಭಾರತೀಯ ಸೇನೆ AK-630 ವಾಯು ರಕ್ಷಣಾ ಬಂದೂಕು ವ್ಯವಸ್ಥೆಗಳನ್ನು ಖರೀದಿಸಲಿದೆ. ಇದು 4 ಕಿ.ಮೀ. ವರೆಗೆ ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ನಿಮಿಷಕ್ಕೆ 3,000 ಸುತ್ತುಗಳವರೆಗೆ ಗುಂಡಿನ ದಾಳಿ ನಡೆಸಲಿವೆ. ಪಾಕಿಸ್ತಾನದ ಗಡಿಯಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಇದನ್ನು ನಿಯೋಜನೆ ಮಾಡಲಾಗುವುದು.

ಮಿಷನ್ ಸುದರ್ಶನ ಚಕ್ರ; AK-630 ವಾಯು ರಕ್ಷಣಾ ಬಂದೂಕುಗಳನ್ನು ಖರೀದಿಸಿ ಪಾಕ್ ಗಡಿಯಲ್ಲಿ ನಿಯೋಜಿಸಲಿದೆ ಸೇನೆ
Rajnath Singh

Updated on: Oct 04, 2025 | 6:38 PM

ನವದೆಹಲಿ, ಅಕ್ಟೋಬರ್ 4: ಮಿಷನ್ ಸುದರ್ಶನ ಚಕ್ರದ (Mission Sudarshan Chakra) ಅಡಿಯಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಮುನ್ನಡೆಸುವ ಪ್ರಮುಖ ಹೆಜ್ಜೆಯಾಗಿ, ಪಾಕಿಸ್ತಾನದ ಗಡಿಯ ಬಳಿ ಇರುವ ನಾಗರಿಕ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಬಲಪಡಿಸುವ ಗುರಿಯೊಂದಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ 6 AK-630 30mm ವಾಯು ರಕ್ಷಣಾ ಬಂದೂಕುಗಳನ್ನು ಖರೀದಿಸಲು ಭಾರತೀಯ ಸೇನೆಯು ಟೆಂಡರ್ ಹೊರಡಿಸಿದೆ.

ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನಲ್ಲಿ ನಾಗರಿಕರು ಮತ್ತು ಧಾರ್ಮಿಕ ಕಟ್ಟಡಗಳ ಮೇಲೆ ಪಾಕಿಸ್ತಾನಿ ಸೇನೆ ನೇರ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆ ಆಪರೇಷನ್ ಸಿಂಧೂರ್‌ ಆರಂಭಿಸಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನದ ಗಡಿಯಲ್ಲಿ ರಕ್ಷಣಾ ಸೌಕರ್ಯವನ್ನು ಹೆಚ್ಚಿಸಲು ಸೇನೆ ಈ ಟೆಂಡರ್ ಕರೆದಿದೆ.

ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥ ಆಸಿಮ್​ರನ್ನು ಸೇಲ್ಸ್​ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ ಪಾಕಿಸ್ತಾನ ಜನ

ಮಿಷನ್ ಸುದರ್ಶನ ಚಕ್ರ:

ಮಿಷನ್ ಸುದರ್ಶನ ಚಕ್ರವು 2035ರ ವೇಳೆಗೆ ಸಮಗ್ರ, ಸ್ಥಳೀಯ ಭದ್ರತಾ ಗುರಾಣಿಯನ್ನು ರಚಿಸುವ ಭಾರತದ ಯೋಜನೆಯಾಗಿದ್ದು, ಪ್ರಮುಖ ಸ್ಥಾಪನೆಗಳನ್ನು ವಿವಿಧ ಶತ್ರುಗಳ ದಾಳಿಯಿಂದ ರಕ್ಷಿಸಲು ಕಣ್ಗಾವಲು, ಸೈಬರ್ ಭದ್ರತೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಂಯೋಜಿಸುತ್ತದೆ. ಈ ಬಾರಿಯ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಈ ಮಿಷನ್, ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.


ಇದನ್ನೂ ಓದಿ: ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಭೂಪಟದಿಂದಲೇ ಮಾಯವಾಗುತ್ತೀರಿ; ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ

ನಿನ್ನೆ (ಶುಕ್ರವಾರ) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. ಆಪರೇಷನ್ ಸಿಂಧೂರ್ 2.0ನಲ್ಲಿ ಭಾರತ ಈ ಹಿಂದಿನಂತೆ ಪಾಕಿಸ್ತಾನದ ವಿರುದ್ಧ ಯಾವುದೇ ತಾಳ್ಮೆ ಅಥವಾ ಅನುಕಂಪವನ್ನು ತೋರಿಸುವುದಿಲ್ಲ ಎಂದಿದ್ದ ದ್ವಿವೇದಿ ವಿಶ್ವದ ಭೂಪಟದಲ್ಲಿ ಪಾಕಿಸ್ತಾನಕ್ಕೂ ಜಾಗ ಬೇಕೆಂದರೆ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ