Mohammed Zubair: ಮೊಹಮ್ಮದ್ ಜುಬೇರ್ ಕ್ರಿಮಿನಲ್ ಪ್ರಕ್ರಿಯೆಯ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ; ಸುಪ್ರೀಂ ಕೋರ್ಟ್​

ಕೇವಲ ಆರೋಪಗಳ ಆಧಾರದ ಮೇಲೆ ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಶಿಕ್ಷಿಸಬಾರದು. ಕಾನೂನನ್ನು ಪರಿಗಣಿಸದೆ ಬಂಧಿಸುವ ಅಧಿಕಾರವನ್ನು ಚಲಾಯಿಸಿದಾಗ ಅದು ಅಧಿಕಾರದ ದುರುಪಯೋಗವಾಗುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

Mohammed Zubair: ಮೊಹಮ್ಮದ್ ಜುಬೇರ್ ಕ್ರಿಮಿನಲ್ ಪ್ರಕ್ರಿಯೆಯ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ; ಸುಪ್ರೀಂ ಕೋರ್ಟ್​
ಮೊಹಮ್ಮದ್ ಜುಬೇರ್
Image Credit source: NDTV
Updated By: ಸುಷ್ಮಾ ಚಕ್ರೆ

Updated on: Jul 26, 2022 | 12:22 PM

ನವದೆಹಲಿ: ಕಳೆದ ವಾರ ಜಾಮೀನು ಪಡೆದಿರುವ ಆಲ್ಟ್​ ನ್ಯೂಸ್ ಸಹ ಸಂಸ್ಥಾಪಕ ಮತ್ತು ಫ್ಯಾಕ್ಟ್​ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ಕ್ರಿಮಿನಲ್ ಪ್ರಕ್ರಿಯೆಯ ವಿಷವರ್ತುಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಪ್ರಕ್ರಿಯೆಯೇ ಅವರಿಗೆ ಶಿಕ್ಷೆಯಾಗಿ ಪರಿಣಮಿಸಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಮೊಹಮ್ಮದ್ ಜುಬೇರ್ ವಿರುದ್ಧ ದಾಖಲಾಗಿದ್ದ ದಾಖಲಾಗಿದ್ದ ಎಲ್ಲ ಎಫ್​ಐಆರ್​​ಗಳಲ್ಲೂ ಸುಪ್ರೀಂ ಕೋರ್ಟ್​ ಕೆಲವು ದಿನಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಮೊಹಮ್ಮದ್ ಜುಬೇರ್ ಅವರನ್ನು ಜೈಲಿನಲ್ಲಿಡಲು ಯಾವುದೇ ಕಾರಣವಿಲ್ಲ ಎಂದು ಕೋರ್ಟ್​ ಹೇಳಿತ್ತು.

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ “ತರಾತುರಿಯ ಮತ್ತು ವಿವೇಚನಾರಹಿತ ಅರೆಸ್ಟ್​, ಜಾಮೀನು ಪಡೆಯುವಲ್ಲಿ ತೊಂದರೆ ಮತ್ತು ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಕಾರಾಗೃಹವಾಸ”ದ ಬಗ್ಗೆ ಟೀಕೆ ಮಾಡಿದ ಬೆನ್ನಲ್ಲೇ 1 ತಿಂಗಳಿಗೂ ಹೆಚ್ಚು ಕಾಲದ ಜೈಲು ವಾಸದ ನಂತರ, ಕಳೆದ ವಾರ ಮೊಹಮ್ಮದ್ ಜುಬೇರ್ ಜಾಮೀನು ಪಡೆದು ಹೊರಗೆ ನಡೆದಿದ್ದರು.

“ಕೇವಲ ಆರೋಪಗಳ ಆಧಾರದ ಮೇಲೆ ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಶಿಕ್ಷಿಸಬಾರದು. ಕಾನೂನನ್ನು ಪರಿಗಣಿಸದೆ ಬಂಧಿಸುವ ಅಧಿಕಾರವನ್ನು ಚಲಾಯಿಸಿದಾಗ ಅದು ಅಧಿಕಾರದ ದುರುಪಯೋಗವಾಗುತ್ತದೆ” ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಇದನ್ನೂ ಓದಿ: Breaking ನಾನು ಮಾಡುತ್ತಿದ್ದ ಕೆಲಸ ಮುಂದುವರಿಸುವೆ: ಜೈಲಿನಿಂದ ಬಿಡುಗಡೆಯಾದ ನಂತರ ಮೊಹಮ್ಮದ್ ಜುಬೇರ್ ಮಾತು

ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಪ್ರಕರಣಗಳ ನಂತರ ಪರಿಹಾರ ಕೋರಿದ್ದ ಮೊಹಮ್ಮದ್ ಜುಬೇರ್ ಅವರನ್ನು ಶೀಘ್ರ ಬಿಡುಗಡೆ ಮಾಡಲು ಜುಲೈ 20ರಂದು ನ್ಯಾಯಾಲಯವು ಆದೇಶದ ಆಪರೇಟಿವ್ ಭಾಗವನ್ನು ಬಿಡುಗಡೆ ಮಾಡಿತ್ತು.

ಜುಲೈ 20ರಂದು, ಸುಪ್ರೀಂ ಕೋರ್ಟ್​ ಮೊಹಮ್ಮದ್ ಜುಬೇರ್ ಅವರಿಗೆ ಜಾಮೀನು ನೀಡಿತ್ತು. ಉತ್ತರ ಪ್ರದೇಶದಲ್ಲಿ ವಿಶೇಷ ತನಿಖೆಯನ್ನು ರದ್ದುಗೊಳಿಸಿತು. ಬಳಿಕ ಉತ್ತರ ಪ್ರದೇಶದ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿತು. ಮೊಹಮ್ಮದ್ ಜುಬೇರ್ ಟ್ವೀಟ್ ಮಾಡುವುದನ್ನು ನಿಲ್ಲಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದರು.