ನನ್ನ ಅಮ್ಮನಿಗೂ ವಯಸ್ಸಾಗಿದೆ; ರಾಷ್ಟ್ರಪತಿ ಕುರಿತ ಸೋನಿಯಾ ಗಾಂಧಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಸಮರ್ಥನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಒಳಗಾಗಿದೆ. ಸೋನಿಯಾ ಗಾಂಧಿ ರಾಷ್ಟ್ರಪತಿಗಳಿಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ರಾಷ್ಟ್ರಪತಿ ಭವನ ಕೂಡ ಸೋನಿಯಾ ಗಾಂಧಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಪ್ರಕಟಣೆ ಬಿಡುಗಡೆ ಮಾಡಿದೆ. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ತಾಯಿಯ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನನ್ನ ಅಮ್ಮನಿಗೂ ವಯಸ್ಸಾಗಿದೆ; ರಾಷ್ಟ್ರಪತಿ ಕುರಿತ ಸೋನಿಯಾ ಗಾಂಧಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಸಮರ್ಥನೆ
Priyanka Gandhi Vadra

Updated on: Jan 31, 2025 | 9:40 PM

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್​ನಲ್ಲಿ ಮಾಡಿದ ಭಾಷಣದ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದಿನ ಭಾಷಣದಲ್ಲಿ ದ್ರೌಪದಿ ಮುರ್ಮು ಬಹಳ ದಣಿದಿದ್ದರು. ಪಾಪ, ಅವರಿಗೆ ಮಾತನಾಡಲು ಕೂಡ ಕಷ್ಟವಾಗಿತ್ತು. ಪೂರ್​ಥಿಂಗ್ಸ್​ ಎಂದು ಹೇಳಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದಕ್ಕೆ ಕಾರಣವಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ತಮ್ಮ ತಾಯಿ ಸೋನಿಯಾ ಗಾಂಧಿ ನೀಡಿದ ಹೇಳಿಕೆಗಳಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟನೆ ನೀಡಿದ್ದಾರೆ. ತಮ್ಮ ತಾಯಿಯನ್ನು ಸಮರ್ಥಿಸಿಕೊಂಡ ಪ್ರಿಯಾಂಕಾ ಗಾಂಧಿ, ನನ್ನ ತಾಯಿ 78 ವರ್ಷ ವಯಸ್ಸಿನ ಮಹಿಳೆ. ಹೀಗಾಗಿ, ರಾಷ್ಟ್ರಪತಿಗಳ ಬಗ್ಗೆ ಕಾಳಜಿಯಿಂದ ಅವರು ಇಷ್ಟು ದೀರ್ಘ ಭಾಷಣವನ್ನು ಓದಿ ಸುಸ್ತಾಗಿರಬಹುದು, ಅಯ್ಯೋ ಪಾಪ ಎಂದು ಹೇಳಿದ್ದರೇ ವಿನಃ ಅವಮಾನಿಸುವ ಉದ್ದೇಶದಿಂದಲ್ಲ ಎಂದಿದ್ದಾರೆ.

ಸೋನಿಯಾ ಗಾಂಧಿ ದ್ರೌಪದಿ ಮುರ್ಮು ಅವರನ್ನು ಬಹಳ ಗೌರವಿಸುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಒತ್ತಿ ಹೇಳಿದರು. ಮಾಧ್ಯಮಗಳು ಅವರ ಹೇಳಿಕೆಗಳನ್ನು ತಿರುಚಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈ ರೀತಿಯ ವಿಷಯವನ್ನು ಮಾಧ್ಯಮಗಳು ತಿರುಚಿರುವುದು ತುಂಬಾ ದುರದೃಷ್ಟಕರ. ಅವರಿಬ್ಬರೂ ನಮಗಿಂತ ಹಿರಿಯರು. ಅಮ್ಮ ಎಂದಿಗೂ ರಾಷ್ಟ್ರಪತಿಗಳಿಗೆ ಅಗೌರವವನ್ನು ಸೂಚಿಸುವುದಿಲ್ಲ ಎಂದು ಪ್ರಿಯಾಂಕಾ ಹೇಳಿದರು.

ಇದನ್ನೂ ಓದಿ: ಬುಡಕಟ್ಟು ಜನರಿಗಾದ ಅವಮಾನ; ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಸೋನಿಯಾ ಗಾಂಧಿ ಹೇಳಿಕೆಗೆ ಮೋದಿ ಆಕ್ಷೇಪ

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ರಾಷ್ಟ್ರಪತಿಗಳು ಕೊನೆಯಲ್ಲಿ ಬಹಳ ದಣಿದಿದ್ದರು. ಆಕೆ ಕಷ್ಟಪಟ್ಟು ಮಾತನಾಡುತ್ತಿದ್ದರು, ಅವರಿಗೆ ಬಹಳ ಸುಸ್ತಾಗಿತ್ತು. ಅಯ್ಯೋ ಪಾಪ… ಅವರನ್ನು ನೋಡಿದರೆ ಬೇಸರವಾಯಿತು. ದ್ರೌಪದಿಯವರ ಭಾಷಣ ತುಂಬ ಬೋರಿಂಗ್​ ಆಗಿತ್ತು, ಅವರು ಹೇಳಿದ್ದನ್ನೇ ಹೇಳುತ್ತಿದ್ದರು ಎಂದರು ಎಂದು ಸೋನಿಯಾ ಗಾಂಧಿ ಟೀಕಿಸಿದ್ದರು.


ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಟೀಕೆಯನ್ನು ತಳ್ಳಿಹಾಕಿರುವ ರಾಷ್ಟ್ರಪತಿ ಭವನವು ಈ ಹೇಳಿಕೆ “ಸತ್ಯಕ್ಕೆ ದೂರವಾಗಿದೆ ಮತ್ತು ಇದು ರಾಷ್ಟ್ರಪತಿ ಕಚೇರಿಯ ಘನತೆಗೆ ಧಕ್ಕೆ ತಂದಿದೆ” ಎಂದು ಹೇಳಿದೆ. ಇಂದು ಭಾಷಣ ಮಾಡುವಾಗ ರಾಷ್ಟ್ರಪತಿಗಳು ಯಾವುದೇ ಹಂತದಲ್ಲಿಯೂ ದಣಿದಿರಲಿಲ್ಲ. ವಾಸ್ತವವಾಗಿ, ಅವರು ತಮ್ಮ ಭಾಷಣದ ಮಾಡುವಾಗ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರಿಗಾಗಿ ಮಾತನಾಡುವುದು ಎಂದಿಗೂ ದಣಿವುಂಟುಮಾಡುವುದಿಲ್ಲ ಎಂದು ನಂಬಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ