ಊಟದ ತಟ್ಟೆಯಿಂದ ಅನ್ನವೇ ಔಟ್, ಹೈ-ಪ್ರೋಟೀನ್ ಡಯಟ್ ಮೊರೆಹೋದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ದಿನಚರಿ, ಅದ್ಭುತ ಫಿಟ್ನೆಸ್ ಮತ್ತು ಕಟ್ಟುನಿಟ್ಟಾದ ಆಹಾರ ಪದ್ಧತಿಯ ಬಗ್ಗೆ ದೊಡ್ಡ ಚರ್ಚೆಯೊಂದು ದೇಶಾದ್ಯಂತ ಆರಂಭವಾಗಿದೆ. ತಮ್ಮ ಇಮೇಜ್ ಅನ್ನು ಕೇವಲ ಒಬ್ಬ ಮುತ್ಸದ್ದಿ ನಾಯಕನಾಗಿ ಮಾತ್ರವಲ್ಲದೆ, ಆರೋಗ್ಯ ಪ್ರಜ್ಞೆಯುಳ್ಳ ರೋಲ್ ಮಾಡೆಲ್ ಆಗಿಯೂ ಅವರು ಬಿಂಬಿಸಿಕೊಳ್ಳುತ್ತಿದ್ದಾರೆ. ಸಿಎಂ ಚಂದ್ರಬಾಬು ಅವರ ಆ 'ಹೈಟೆಕ್ ಪ್ರೋಟೀನ್ ಸೂತ್ರದ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಅಮರಾವತಿ, ಮೇ 20: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಅತ್ಯುತ್ತಮ ಆರೋಗ್ಯ ಮತ್ತು ಫಿಟ್ನೆಸ್ ದಿನಚರಿಯನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೆಲ್ಲೂರು ಜಿಲ್ಲೆಯಲ್ಲಿ ನಡೆದ ‘ಮತ್ಸ್ಯಕರ ಸೇವಾಲೋ’ (ಮೀನುಗಾರರ ಸೇವಾ ಕಾರ್ಯಕ್ರಮ) ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ಬಹಿರಂಗಪಡಿಸುವ ಮೂಲಕ ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.
ಊಟದ ತಟ್ಟೆಯಿಂದ ಅನ್ನವೇ ಔಟ್, ಮೀನಿಗೆ ಮೊದಲ ಆದ್ಯತೆ ಚಂದ್ರಬಾಬು ನಾಯ್ಡು ಅವರು ಕಾರ್ಬೋಹೈಡ್ರೇಟ್ಗಳನ್ನು, ವಿಶೇಷವಾಗಿ ದಕ್ಷಿಣ ಭಾರತದ ಪ್ರಧಾನ ಆಹಾರವಾದ ಬಿಳಿ ಅಕ್ಕಿಯ (ಅನ್ನ) ಸೇವನೆಯನ್ನು ತಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ಹೊರಗಿಡುವ ದೊಡ್ಡ ನಿರ್ಧಾರವನ್ನು ತಗೆದುಕೊಂಡಿದ್ದಾರೆ. ಅವರ ದೈನಂದಿನ ಆಹಾರವು ಈಗ ಮುಖ್ಯವಾಗಿ ಪ್ರೋಟೀನ್ ಆಧಾರಿತವಾಗಿದೆ.
ಪ್ರೋಟೀನ್ ಭರಿತ ಆಹಾರವು ಮಧುಮೇಹವನ್ನು (Diabetes) ನಿಯಂತ್ರಣದಲ್ಲಿಡಲು ಮತ್ತು ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿ ಎಂದು ನಂಬಿರುವ ಅವರು ಜತೆಗೆ ಆಹಾರದಲ್ಲಿ ಎಣ್ಣೆ ಮತ್ತು ಉಪ್ಪಿನ ಬಳಕೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡಲು ಅವರು ಸದಾ ಸೂಚಿಸುತ್ತಾರೆ.
ತಂತ್ರಜ್ಞಾನದ ಮೂಲಕ ನಡೆಯುತ್ತೆ ಡಯಟ್ ಲೆಕ್ಕಾಚಾರ ಚಂದ್ರಬಾಬು ನಾಯ್ಡು ಅವರ ಆರೋಗ್ಯ ನಿರ್ವಹಣೆಯು ಕೇವಲ ಸಾಮಾನ್ಯ ಆಹಾರ ಪದ್ಧತಿಯನ್ನು ಅವಲಂಬಿಸಿಲ್ಲ, ಬದಲಿಗೆ ಅದು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದ ಲೆಕ್ಕಾಚಾರದ ಮೇಲೆ ನಡೆಯುವ ವ್ಯವಸ್ಥೆಯಾಗಿದೆ!
ಸಿಎಂ ಚಂದ್ರಬಾಬು ಅವರು ತಮ್ಮ ಬೆರಳಿಗೆ ವಿಶೇಷವಾದ ‘ಆರೋಗ್ಯ ಟ್ರ್ಯಾಕಿಂಗ್ ರಿಂಗ್’ (Health Tracking Ring) ಒಂದನ್ನು ಧರಿಸುತ್ತಾರೆ. ಈ ಸ್ಮಾರ್ಟ್ ರಿಂಗ್ ಅವರ ದೇಹದ ನಿದ್ರೆಯ ಪ್ರಮಾಣ, ಪ್ರೋಟೀನ್ ಮಟ್ಟಗಳು ಮತ್ತು ದೈಹಿಕ ಚಟುವಟಿಕೆಗಳನ್ನು ಸೆಕೆಂಡ್ ಸೆಕೆಂಡಿಗೆ ಟ್ರ್ಯಾಕ್ ಮಾಡುತ್ತದೆ. ಅವರು ದಿನದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ಅವರ ದೇಹದಲ್ಲಿ ಪ್ರೋಟೀನ್ ಮಟ್ಟ ಕಡಿಮೆಯಾದರೆ, ಈ ಹೈಟೆಕ್ ರಿಂಗ್ ತಕ್ಷಣವೇ ಅವರಿಗೆ ಎಚ್ಚರಿಕೆಯ ಸಂದೇಶವನ್ನು (Alert) ರವಾನಿಸುತ್ತದೆ. ಆ ಅಲರ್ಟ್ ಬಂದ ತಕ್ಷಣವೇ ಅವರು ತಮ್ಮ ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾರೆ.
ಮತ್ತಷ್ಟು ಓದಿ: ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?
ಆರೋಗ್ಯಕರ ಜೀವನಶೈಲಿಯ ಹೊಸ ಸಂದೇಶ ಸಂಕ್ಷಿಪ್ತವಾಗಿ ಹೇಳುವುದಾದರೆ, ಚಂದ್ರಬಾಬು ನಾಯ್ಡು ಅವರು ಆಂಧ್ರದ ಜನತೆಗೆ ಹೊಸ ಮಾದರಿಯ ಜೀವನಶೈಲಿಯ ಸಂದೇಶವನ್ನು ನೀಡುತ್ತಿದ್ದಾರೆ. ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ, ಪ್ರೋಟೀನ್ ಭರಿತ ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕ ಹೇಗೆ ಆರೋಗ್ಯವಾಗಿರಬಹುದು ಎಂಬುದನ್ನು ಸ್ವತಃ ತಾವೇ ಪಾಲಿಸಿ ತೋರಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

