ಪತ್ನಿಯ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ, ಅಪ್ಪ ಮಾಡಿದ್ದನ್ನ ಕಣ್ಣಾರೆ ಕಂಡು ಸತ್ಯ ಬಿಚ್ಚಿಟ್ಟ 4 ವರ್ಷದ ಮಗ

ಒಡಿಶಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಡಿತದ ಅಮಲಿನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ. ಆದರೆ, ತಂದೆಯ ಈ ಕ್ರೂರ ಕೃತ್ಯವನ್ನು ಕಣ್ಣಾರೆ ಕಂಡ 4 ವರ್ಷದ ಮಗನೇ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಈ ದುರಂತದಿಂದ ಮಕ್ಕಳು ಅನಾಥರಾಗಿದ್ದು, ಕುಟುಂಬದ ಸಂಭ್ರಮವು ಶೋಕಕ್ಕೆ ತಿರುಗಿದೆ.

ಪತ್ನಿಯ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ  ಪತಿ, ಅಪ್ಪ ಮಾಡಿದ್ದನ್ನ ಕಣ್ಣಾರೆ ಕಂಡು ಸತ್ಯ ಬಿಚ್ಚಿಟ್ಟ 4 ವರ್ಷದ ಮಗ
ಸಾವು
Image Credit source: iStock

Updated on: Apr 14, 2026 | 10:04 AM

ಒಡಿಶಾ, ಏಪ್ರಿಲ್ 14: ಕುಡಿತದ ಅಮಲು ಮತ್ತು ಅನಗತ್ಯ ಸಂಶಯ ಒಂದು ಸಂಸಾರವನ್ನು ಹೇಗೆ ಬೀದಿಪಾಲು ಮಾಡುತ್ತದೆ ಎಂಬುದಕ್ಕೆ ಒಡಿಶಾದ ಬೋರ್ಗಾನ್ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೆಂಡತಿಯ ನಡತೆಯ ಮೇಲೆ ಸಂಶಯಪಟ್ಟ ವ್ಯಕ್ತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ(Murder) ಮಾಡಿ, ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ. ಆದರೆ, ತಾನು ಮಾಡಿದ್ದನ್ನು ಯಾರಿಗೂ ತಿಳಿಯದಂತೆ ಬಚ್ಚಿಡಬಹುದು ಅಂದುಕೊಂಡಿದ್ದ ಹಂತಕನಿಗೆ ತನ್ನ 4 ವರ್ಷದ ಮಗನೇ ಸಾಕ್ಷಿಯಾಗುತ್ತಾನೆ ಎಂದು ತಿಳಿದಿರಲಿಲ್ಲ.

ಸಂಭ್ರಮದ ಬೆನ್ನಲ್ಲೇ ಸಂಭವಿಸಿದ ದುರಂತ
ಬೋರ್ಗಾನ್ ಗ್ರಾಮದ ಸುಬಾಶ್ ಗೊಂಡ್ ಮತ್ತು ಮನೈ ಗೊಂಡ್ ದಂಪತಿ ಏಪ್ರಿಲ್ 11 ರಂದು ತಮ್ಮ ಮಕ್ಕಳೊಂದಿಗೆ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳಿದ್ದರು. ಮದುವೆಯ ಸಂಭ್ರಮ ಮುಗಿಸಿ ಬಂದ ಪತಿ ಸುಬಾಶ್ ಕುಡಿದ ಮತ್ತಿನಲ್ಲಿದ್ದ. ಮನೆಗೆ ಬಂದ ನಂತರ ಪತ್ನಿಯ ಚಾರಿತ್ರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿ ಜಗಳ ಆರಂಭಿಸಿದ. ವಾಗ್ವಾದ ತಾರಕಕ್ಕೇರಿ ಸುಬಾಶ್ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯಿಂದಾಗಿ ಮನೈ ಗೊಂಡ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪತ್ನಿ ಸತ್ತಿದ್ದಾಳೆ ಎಂದು ತಿಳಿದ ತಕ್ಷಣ ಗಾಬರಿಗೊಂಡ ಸುಬಾಶ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ. ಮೃತದೇಹವನ್ನು ಯಾರಿಗೂ ಕಾಣದಂತೆ ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಏನೂ ಅರಿಯದವನಂತೆ ನಾಟಕವಾಡಿದ್ದಾನೆ. ಮನೆಯಲ್ಲಿ ತಾಯಿ ಕಾಣದಿದ್ದಾಗ ನೆರೆಹೊರೆಯವರು ವಿಚಾರಿಸಿದಾಗ ಆತ ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ.

ಮತ್ತಷ್ಟು ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ಅಪ್ಪನ ಕ್ರೌರ್ಯ ಬಿಚ್ಚಿಟ್ಟ ಮಗ
ತಂದೆ ತನ್ನ ತಾಯಿಯನ್ನು ಹೊಡೆದದ್ದು ಮತ್ತು ಆಕೆಯ ದೇಹವನ್ನು ಗುಂಡಿಗೆ ಎಸೆದದ್ದನ್ನು 4 ವರ್ಷದ ಮಗ ಕಣ್ಣಾರೆ ಕಂಡಿದ್ದ. ಮುಗ್ದ ಮಗುವಿಗೆ ತನ್ನ ತಾಯಿ ಮತ್ತೆ ಬರುವುದಿಲ್ಲ ಎಂಬ ಅರಿವಿಲ್ಲದಿದ್ದರೂ, ಅಪ್ಪ ಮಾಡಿದ ಕೃತ್ಯವನ್ನು ಸಂಬಂಧಿಕರಿಗೆ ವಿವರಿಸಿದ್ದಾನೆ. ಮಗುವಿನ ಮಾತು ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು ಸುಬಾಶ್​ನನ್ನು ಹಿಡಿದು ವಿಚಾರಿಸಿದಾಗ ಮೊದಲು ಆತ ಮೊಂಡಾಟ ಮಾಡಿದರೂ, ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅಂತಿಮವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್ ತನಿಖೆ
ತಕ್ಷಣ ಸ್ಥಳಕ್ಕೆ ಧಾವಿಸಿದ ನಬರಂಗ್‌ಪುರ ಪೊಲೀಸರು ಸೆಪ್ಟಿಕ್ ಟ್ಯಾಂಕ್‌ನಲ್ಲಿದ್ದ ಮನೈ ಗೊಂಡ್ ಅವರ ಶವವನ್ನು ಹೊರತೆಗೆದಿದ್ದಾರೆ. ಆರೋಪಿ ಸುಬಾಸ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಘಟನೆ ನಡೆದ ಸಮಯದಲ್ಲಿ ಪತ್ನಿ ಕೂಡ ಮದ್ಯದ ಅಮಲಿನಲ್ಲಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತನ್ನ ತಂದೆಯೇ ತಾಯಿಯನ್ನು ಕೊಂದು ಟ್ಯಾಂಕ್‌ಗೆ ಹಾಕಿದ್ದಾನೆ ಎಂದು ಆ ಕಂದಮ್ಮ ಹೇಳುತ್ತಿದ್ದರೆ ಸಂಬಂಧಿಕರ ಕಣ್ಣಾಲಿಗಳು ತೇವವಾಗಿದ್ದವು. ತಾಯಿ ಸಾವನ್ನಪ್ಪಿ, ತಂದೆ ಜೈಲು ಪಾಲಾಗಿ ಈಗ ಆ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us