
ಶ್ರೀನಗರ, ಸೆಪ್ಟೆಂಬರ್ 11: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಮಾಣದ ‘ವಂದೇ ಮಾತರಂ’ ಗೀತೆಯನ್ನು ಹಾಡುವ ವಿಚಾರದಲ್ಲಿ ‘ಇಂಡಿ’ ಮೈತ್ರಿಕೂಟದ ಮಿತ್ರಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (NC) ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಭುಗಿಲೆದ್ದಿದೆ. ಶ್ರೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ನುಡಿಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ದೇಶದ ಕಾನೂನಿನ ಪ್ರಕಾರ ಇದನ್ನು ಕಡ್ಡಾಯಗೊಳಿಸಲಾಗಿದೆ, ನಿಯಮ ಮುರಿದು ಕಾಶ್ಮೀರಿಗಳು ಜೈಲಿಗೆ ಹೋಗಬೇಕೆಂದು ಕಾಂಗ್ರೆಸ್ ಬಯಸುತ್ತಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕಾನೂನು ಪಾಲನೆ ಅನಿವಾರ್ಯ: ಅಧಿಕೃತ ಸರ್ಕಾರಿ ಸಮಾರಂಭಗಳಲ್ಲಿ ವಂದೇ ಮಾತರಂನ ಸಂಪೂರ್ಣ ಗೀತೆ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. “ಒಂದು ಪಕ್ಷವಾಗಿ ನಾವು ಇದನ್ನು ಅಳವಡಿಸಿಕೊಳ್ಳದಿದ್ದರೂ, ಸಾಂವಿಧಾನಿಕ ಸ್ಥಾನದಲ್ಲಿರುವಾಗ ದೇಶದ ಕಾನೂನು ಶಿಷ್ಟಾಚಾರವನ್ನು ಪಾಲಿಸುವುದು ಕಡ್ಡಾಯ, ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ” ಎಂದು ಒಮರ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ಆಕ್ಷೇಪವೇನು?: ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್,1937ರ ನಿರ್ಣಯದಂತೆ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಪರಂಪರೆಗೆ ಬದ್ಧವಾಗಿರಬೇಕು ಮತ್ತು ಮಿತ್ರಪಕ್ಷಗಳೂ ಅದನ್ನೇ ಪಾಲಿಸಬೇಕು ಎಂದು ಹೇಳಿದ್ದರು. ಪೂರ್ಣ ಆವೃತ್ತಿಯು ದೇಶದ ಬಹುತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಕಾಂಗ್ರೆಸ್ ವಾದವಾಗಿತ್ತು.
ವಿಡಿಯೋ
The full version of Vande Mataram sits uneasily with the syncretic and pluralist ethos that our freedom fighters envisioned and nurtured for India.
For us, the considered judgment of Mahatma Gandhi, Pandit Nehru, Sardar Patel, Subhash Chandra Bose, Rajendra Prasad, Acharya… pic.twitter.com/VngmVUmevz
— K C Venugopal (@kcvenugopalmp) September 8, 2026
ವೇದಿಕೆಯಲ್ಲಿ ಅಬ್ದುಲ್ಲಾ ಕುಟುಂಬ ಗೌರವ: ಶ್ರೀನಗರದ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಒಮರ್ ಅಬ್ದುಲ್ಲಾ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲಾ ಅವರು ವಂದೇ ಮಾತರಂನ ಆರೂ ಚರಣಗಳು ಮುಗಿಯುವವರೆಗೂ ಎದ್ದು ನಿಂತು ಗೌರವ ಸಲ್ಲಿಸಿದ್ದರು.
ಬಿಜೆಪಿ ಕಟು ಟೀಕೆ: ಪೂರ್ಣ ವಂದೇ ಮಾತರಂ ವಿರೋಧಿಸುತ್ತಿರುವ ಕಾಂಗ್ರೆಸ್ ಅನ್ನು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಕಟುವಾಗಿ ಟೀಕಿಸಿದ್ದು, “ಕಾಂಗ್ರೆಸ್ ಈಗ 21ನೇ ಶತಮಾನದ ಮುಸ್ಲಿಂ ಲೀಗ್ ಆಗಿ ಬದಲಾಗಿದ್ದು, ಮೂಲಭೂತವಾದಿಗಳಿಗೆ ಶರಣಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಓದಿ: ವಂದೇ ಮಾತರಂ ಗೀತೆಗೆ ಎದ್ದುನಿಂತ ಫಾರೂಕ್-ಒಮರ್ ಅಬ್ದುಲ್ಲಾ: ಕಾಂಗ್ರೆಸ್ ಅಸಮಾಧಾನ, ನಮ್ಮ ಮೇಲೆ ಷರತ್ತು ಹೇರಬೇಡಿ ಎಂದ ಎನ್ಸಿ
1937ರ ಕಾಂಗ್ರೆಸ್ ನಿರ್ಣಯದ ಇತಿಹಾಸ: ಬಂಕಿಮಚಂದ್ರ ಚಟರ್ಜಿ ಬರೆದ ‘ಆನಂದಮಠ’ ಕಾದಂಬರಿಯ ಈ ಗೀತೆಯ ಮೊದಲ ಎರಡು ಚರಣಗಳು ಮಾತೃಭೂಮಿಯ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತವೆ. ಆದರೆ ನಂತರದ ಚರಣಗಳಲ್ಲಿ ದುರ್ಗಾ ದೇವಿಯ ಉಲ್ಲೇಖವಿರುವುದರಿಂದ, ಅಂದಿನ ಸ್ವಾತಂತ್ರ್ಯ ಹೋರಾಟದ ವೇಳೆ ಮುಸ್ಲಿಂ ಸಮುದಾಯದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಕಾಂಗ್ರೆಸ್ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಿತ್ತು.
ಕೇಂದ್ರ ಸರ್ಕಾರದ ನೂತನ ಆದೇಶ: ಕೇಂದ್ರ ಸರ್ಕಾರವು ಎಲ್ಲಾ ಅಧಿಕೃತ ಸಮಾರಂಭಗಳು, ಶಾಲಾ ಕಾರ್ಯಕ್ರಮಗಳಲ್ಲಿ ‘ಜನ ಗಣ ಮನ’ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ ಸಂಪೂರ್ಣ ಆರು ಚರಣಗಳನ್ನು ಕಡ್ಡಾಯವಾಗಿ ನುಡಿಸಬೇಕೆಂದು ನಿಯಮ ಜಾರಿಗೆ ತಂದಿದೆ.
ಮೈತ್ರಿಕೂಟದ ಆಂತರಿಕ ಭಿನ್ನಾಭಿಪ್ರಾಯ: ಜಮ್ಮು-ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ ರಾಷ್ಟ್ರೀಯತೆಯ ಸೂಕ್ಷ್ಮ ವಿಚಾರದಲ್ಲಿ ಕಾಂಗ್ರೆಸ್ನ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಒಮರ್ ಅಬ್ದುಲ್ಲಾ, ಕೇಂದ್ರ ಸರ್ಕಾರದೊಂದಿಗೆ ಅನಗತ್ಯ ಕಾನೂನು ಸಂಘರ್ಷಕ್ಕೆ ಇಳಿಯದಿರುವ ಜಾಣ್ಮೆಯ ಹೆಜ್ಜೆ ಇಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ