Padma awards: ನಾಳೆ ಪದ್ಮ ಪ್ರಶಸ್ತಿ ಪ್ರಕಟ; ಈ ಪ್ರಶಸ್ತಿ ನೀಡಲು ಇರುವ ಮಾನದಂಡಗಳೇನು?

|

Updated on: Jan 24, 2024 | 5:45 PM

ಪದ್ಮ ಪ್ರಶಸ್ತಿಗಳಲ್ಲಿ ಪ್ರತಿಯೊಂದು ಪ್ರಶಸ್ತಿಗಳು ಪರಸ್ಪರ ಹೇಗೆ ಭಿನ್ನವಾಗಿವೆ? ಈ ಪ್ರಶಸ್ತಿಗಳನ್ನು ಹೇಗೆ ನಿರ್ಧರಿಸಲಾಗುತ್ತದೆ? ಪದ್ಮ ಪ್ರಶಸ್ತಿಯನ್ನು ಗೆಲ್ಲಲು ನಾಮನಿರ್ದೇಶಿತರಿಗೆ ಯಾವ ಮಾನದಂಡಗಳನ್ನು ಪೂರೈಸಬೇಕು? ಇಲ್ಲಿದೆ ಮಾಹಿತಿ.

Padma awards: ನಾಳೆ ಪದ್ಮ ಪ್ರಶಸ್ತಿ ಪ್ರಕಟ; ಈ ಪ್ರಶಸ್ತಿ ನೀಡಲು ಇರುವ ಮಾನದಂಡಗಳೇನು?
ಪದ್ಮ ಪ್ರಶಸ್ತಿ
Image Credit source: Wikimedia Commons
Follow us on

ದೆಹಲಿ ಜನವರಿ 24: ಪ್ರತೀ ವರ್ಷ ಗಣರಾಜ್ಯೋತ್ಸವದ (Republic Day) ಮುನ್ನಾದಿನದಂದು (ಜನವರಿ 25)ರಂದು ಪದ್ಮ ಪ್ರಶಸ್ತಿ (Padma Awards) ಪ್ರಕಟಿಸಲಾಗುತ್ತದೆ. ಸಾರ್ವಜನಿಕ ಸೇವೆ ಅಥವಾ ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿಗಳು ಮತ್ತು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ವಿಭಾಗಗಳು ಮತ್ತು ಕ್ಷೇತ್ರಗಳ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿಯೊಂದು ಪ್ರಶಸ್ತಿಗಳು ಪರಸ್ಪರ ಹೇಗೆ ಭಿನ್ನವಾಗಿವೆ? ಈ ಪ್ರಶಸ್ತಿಗಳನ್ನು ಹೇಗೆ ನಿರ್ಧರಿಸಲಾಗುತ್ತದೆ? ಪದ್ಮ ಪ್ರಶಸ್ತಿಯನ್ನು ಗೆಲ್ಲಲು ನಾಮನಿರ್ದೇಶಿತರಿಗೆ ಯಾವ ಮಾನದಂಡಗಳನ್ನು ಪೂರೈಸಬೇಕು? ಇಲ್ಲಿದೆ ಮಾಹಿತಿ.

ಇತಿಹಾಸ

ಪದ್ಮ ಪ್ರಶಸ್ತಿಗಳು 1950 ರ ದಶಕದ ಹಿಂದಿನವು. ಭಾರತ ಸರ್ಕಾರವು ಜನವರಿ 2, 1954 ರಂದು ಭಾರತ ರತ್ನ ಮತ್ತು ಪದ್ಮವಿಭೂಷಣ ಎಂಬ ಎರಡು ನಾಗರಿಕ ಪ್ರಶಸ್ತಿಗಳನ್ನು ಸ್ಥಾಪಿಸಿತು. ಇವುಗಳನ್ನು ನಂತರ ಜನವರಿ 8, 1955 ರಂದು ಹೊರಡಿಸಲಾದ ರಾಷ್ಟ್ರಪತಿಗಳ ಅಧಿಸೂಚನೆಯ ಪ್ರಕಾರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂದು ಮರುನಾಮಕರಣ ಮಾಡಲಾಯಿತು.

ಈ ಪ್ರಶಸ್ತಿಗಳಗಿರುವ ವ್ಯತ್ಯಾಸವೇನು?

ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳು ಭಾರತ ಸರ್ಕಾರವು ಅಸಾಧಾರಣ ಭಾರತೀಯ ನಾಗರಿಕರಿಗೆ ನೀಡುವ ಮೂರು ವಿಭಿನ್ನ ಪ್ರಶಸ್ತಿಗಳಾಗಿವೆ. ಪದ್ಮ ಪ್ರಶಸ್ತಿಗಳ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಪದ್ಮವಿಭೂಷಣವನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ; ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ; ವಿಶೇಷ ಸೇವೆಗಾಗಿ ಪದ್ಮಶ್ರೀ ನೀಡಲಾಗುತ್ತದೆ.

ಪದ್ಮವಿಭೂಷಣ

ಪದ್ಮವಿಭೂಷಣ ಪ್ರಶಸ್ತಿಯು ಭಾರತ ರತ್ನದ ನಂತರ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಪಿಎಸ್‌ಯುಗಳೊಂದಿಗೆ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಈ ಪ್ರಶಸ್ತಿಗಳಿಗೆ ಅರ್ಹರಲ್ಲ.

ಪದ್ಮಭೂಷಣ

ಪದ್ಮಭೂಷಣವು ಭಾರತದ ಗಣರಾಜ್ಯದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇದು ಭಾರತ ರತ್ನ ಮತ್ತು ಪದ್ಮವಿಭೂಷಣದಿಂದ ಮೊದಲು ಮತ್ತು ಪದ್ಮಶ್ರೀ ನಂತರದ ಪ್ರಶಸ್ತಿ. ಈ ಪ್ರಶಸ್ತಿಯನ್ನು “ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೆ” ನೀಡಲಾಗುತ್ತದೆ. ಪ್ರಶಸ್ತಿಯ ಮಾನದಂಡವು ವೈದ್ಯರು ಮತ್ತು ವಿಜ್ಞಾನಿಗಳು ಸೇರಿದಂತೆ “ಸರ್ಕಾರಿ ಸೇವಕರು ಸಲ್ಲಿಸಿದ ಸೇವೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸೇವೆಯನ್ನು” ಒಳಗೊಂಡಿರುತ್ತದೆ. ಆದರೆ ಸಾರ್ವಜನಿಕ ವಲಯದ ಸಂಸ್ಥೆಗಳೊಂದಿಗೆ ಕೆಲಸ ಮಾಡುವವರನ್ನು ಹೊರತುಪಡಿಸಿರುತ್ತದೆ

ಪದ್ಮಶ್ರೀ

ಪದ್ಮಶ್ರೀ ಪ್ರಶಸ್ತಿಯು ಭಾರತ ರತ್ನ, ಪದ್ಮವಿಭೂಷಣ ಮತ್ತು ಪದ್ಮಭೂಷಣ ನಂತರ, ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಕಲೆ, ಶಿಕ್ಷಣ, ಉದ್ಯಮ, ಸಾಹಿತ್ಯ, ವಿಜ್ಞಾನ, ನಟನೆ, ವೈದ್ಯಕೀಯ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ಚಟುವಟಿಕೆಯ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Republic Day Parade: ದೆಹಲಿ ಗಣರಾಜ್ಯೋತ್ಸವ ಪರೇಡ್​, 1,500ಕ್ಕೂ ಅಧಿಕ ರೈತರಿಗೆ ಆಹ್ವಾನ

ಪ್ರಶಸ್ತಿಯನ್ನು ಯಾರು ನಿರ್ಧರಿಸುತ್ತಾರೆ?

ಪದ್ಮ ಪ್ರಶಸ್ತಿಗಳಿಗೆ ಸ್ವೀಕರಿಸಿದ ಎಲ್ಲಾ ನಾಮನಿರ್ದೇಶನಗಳನ್ನು ಪ್ರತಿ ವರ್ಷ ಪ್ರಧಾನ ಮಂತ್ರಿಯವರು ರಚಿಸುವ ಸಮಿತಿಯ ಮುಂದೆ ಇರಿಸಲಾಗುತ್ತದೆ. ಪದ್ಮ ಪ್ರಶಸ್ತಿ ಸಮಿತಿಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಇದು ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ. ಸಮಿತಿಯ ಶಿಫಾರಸುಗಳನ್ನು ಅನುಮೋದನೆಗಾಗಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ.

ಪ್ರಶಸ್ತಿ ಸಮಿತಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಮತ್ತು ಗೃಹ ಸಚಿವರು, ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳ ಅನುಮೋದನೆಯ ನಂತರ ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ಪ್ರಶಸ್ತಿ ಪ್ರದಾನ ಯಾವಾಗ?

ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ಸಾಮಾನ್ಯವಾಗಿ ನಡೆಯುವ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ