
ನವದೆಹಲಿ, ಸೆಪ್ಟೆಂಬರ್ 19: ಭಾರತದ ಇಂಗಾಲ ಹೊರಸೂಸುವಿಕೆ (ಕಾರ್ಬನ್ ಫುಟ್ಪ್ರಿಂಟ್) ಜಾಗತಿಕ ಸರಾಸರಿಗಿಂತ ಗಣನೀಯವಾಗಿ ಕಡಿಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆಯೋಜಿಸಿರುವ ‘ದಿ ಫ್ಯೂಚರ್ ಆಫ್ ಎನ್ವಿರಾನ್ಮೆಂಟ್ ಅಂಡ್ ಕ್ಲೈಮೇಟ್ ಡೈನಾಮಿಕ್ಸ್’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಎರಡು ದಿನಗಳ ಸಮ್ಮೇಳನದಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ.
ಭಾರತವು ಶತಮಾನಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪರಂಪರೆಯನ್ನು ಹೊಂದಿದೆ. ಇದೇ ಮೌಲ್ಯಗಳನ್ನು ಆಧರಿಸಿ ಆಧುನಿಕ ಹವಾಮಾನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಮೋದಿ ಹೇಳಿದರು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಜತೆಯಾಗಿ ಮುನ್ನಡೆಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತದ ಪರಿಸರ ಕ್ರಮಗಳಲ್ಲಿ ಸೌರಶಕ್ತಿಗೆ ಪ್ರಮುಖ ಸ್ಥಾನವಿದೆ ಎಂದು ಪ್ರಧಾನಿ ಹೇಳಿದರು. ಕಳೆದ 12 ವರ್ಷಗಳಲ್ಲಿ ದೇಶದ ಸೌರಶಕ್ತಿ ಸಾಮರ್ಥ್ಯ ಸುಮಾರು 2 ಗಿಗಾವ್ಯಾಟ್ನಿಂದ 160 ಗಿಗಾವ್ಯಾಟ್ಗೂ ಹೆಚ್ಚು ಏರಿಕೆಯಾಗಿದೆ. ಸೌರಶಕ್ತಿಯ ವಿಸ್ತರಣೆಯಿಂದ ಸುಮಾರು 20 ಕೋಟಿ ಟನ್ಗಳಷ್ಟು ಇಂಗಾಲದ ಹೊರಸೂಸುವಿಕೆ ತಪ್ಪಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಪವನ ವಿದ್ಯುತ್ ಸಾಮರ್ಥ್ಯವೂ ಕಳೆದ 12 ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಜಲವಿದ್ಯುತ್ ಸಾಮರ್ಥ್ಯ ವೃದ್ಧಿಯ ಜೊತೆಗೆ ಅಣುಶಕ್ತಿ ವಿಸ್ತರಣೆ ಹಾಗೂ ಶುದ್ಧ ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯದ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಭಾರತ ಒತ್ತು ನೀಡುತ್ತಿದೆ ಎಂದು ಮೋದಿ ಹೇಳಿದರು.
ಈ ಕ್ರಮಗಳ ಪರಿಣಾಮ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆರಹಿತ ಇಂಧನ ಮೂಲಗಳ ಪಾಲು ಗಮನಾರ್ಹವಾಗಿ ಹೆಚ್ಚಿದೆ. 2025ರಲ್ಲೇ ಶೇ 50ರ ಗಡಿ ದಾಟಿದ್ದು, 2030ರ ಪ್ಯಾರಿಸ್ ಒಪ್ಪಂದದ ಗುರಿಯನ್ನು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿ ತಲುಪಿದೆ ಎಂದು ಪ್ರಧಾನಿ ಹೇಳಿದರು. ಮನೆಗಳ ಮೇಲ್ಚಾವಣಿಯಲ್ಲಿ ಸೌರಶಕ್ತಿ ವ್ಯವಸ್ಥೆ ಅಳವಡಿಸುವ ಕಾರ್ಯವೂ ಮುಂದುವರಿದಿದ್ದು, ಸುಮಾರು 50 ಲಕ್ಷ ಮನೆಗಳಲ್ಲಿ ರೂಫ್ಟಾಪ್ ಸೌರ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.
ಪರಿಸರ ಆಡಳಿತ, ಹವಾಮಾನ ಬದಲಾವಣೆ, ಜೀವವೈವಿಧ್ಯ, ಸುಸ್ಥಿರ ಇಂಧನ ಮತ್ತು ಹವಾಮಾನ ನ್ಯಾಯ ಸೇರಿದಂತೆ ಹಲವು ವಿಷಯಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿವೆ. 17 ದೇಶಗಳ ನ್ಯಾಯಾಧೀಶರು ಹಾಗೂ ನ್ಯಾಯಾಂಗ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ