ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು

ಪಶ್ಚಿಮ ಏಷ್ಯಾದಲ್ಲಿ ಕಳೆದ 4 ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಮೇಲಾಗುವ ಪರಿಣಾಮಗಳ ಕುರಿತು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಭದ್ರತಾ ಸಂಪುಟ ಸಮಿತಿಯ (CCS) ಸಭೆಯ ಅಧ್ಯಕ್ಷತೆ ವಹಿಸಿದರು. ಈ ವೇಳೆ ದೇಶದ ಇಂಧನ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವ (ಸ್ವಾವಲಂಬಿ) ಅಗತ್ಯವನ್ನು ಅವರು ಒತ್ತಿ ಹೇಳಿದರು. ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ 4ನೇ ಸಿಸಿಎಸ್ ಸಭೆ ಇದಾಗಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು
Pm Narendra Modi
Image Credit source: PTI

Updated on: Jul 30, 2026 | 8:40 PM

ನವದೆಹಲಿ, ಜುಲೈ 30: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಭಾರತದ ಮೇಲಾಗುವ ಪ್ರಭಾವವನ್ನು ತಗ್ಗಿಸಲು ವಿವಿಧ ಸಚಿವಾಲಯಗಳು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಭದ್ರತಾ ಸಂಪುಟ ಸಮಿತಿಯ (CCS) ನಾಲ್ಕನೇ ವಿಶೇಷ ಸಭೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಉದ್ವಿಗ್ನತೆಗೆ ಸಂಬಂಧಿಸಿದಂತೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೂ ಇದೇ ರೀತಿಯ ಸಿಸಿಎಸ್ ಸಭೆಗಳು ನಡೆದಿದ್ದವು.

ಇಂದಿನ ಸಭೆಯಲ್ಲಿ ಪ್ರಚಲಿತ ಭೂ ರಾಜಕೀಯ ಪರಿಸ್ಥಿತಿಯ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಸಮಿತಿಗೆ ವಿವರಣೆ ನೀಡಿದರು. ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (LNG), ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ರಸಗೊಬ್ಬರಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಡಚಣೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳನ್ನು ಅವರು ವಿವರಿಸಿದರು.


ಈ ಸಭೆಯ ವೇಳೆ ಭಾರತೀಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. ಅಲ್ಲದೆ, ಭಾರತೀಯ ನಾವಿಕರ ಕುಟುಂಬಗಳಿಗೆ ಅವರ ಕುರಿತು ಸೂಕ್ತ ಮಾಹಿತಿ, ತುರ್ತು ನೆರವು ಮತ್ತು ಆಪ್ತಸಮಾಲೋಚನೆ ಒದಗಿಸಲು ವಿಶೇಷ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

ಸಭೆಯಲ್ಲಿ ಚರ್ಚೆಯಾದ ವಿಷಯಗಳು:

ಸಾಕಷ್ಟು ತೈಲ ಲಭ್ಯತೆ ಮತ್ತು ದಾಸ್ತಾನು:

ಎಲ್‌ಪಿಜಿ ಆಮದಿಗಾಗಿ ಭಾರತವು ವಿವಿಧ ಮೂಲಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಮತ್ತು ಪೂರೈಕೆ ಪರ್ಯಾಪ್ತವಾಗಿದೆ. ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಲಭ್ಯವಿರುವುದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಶೇಕಡಾ 100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೆಟ್ರೋಲ್, ಡೀಸೆಲ್ ಮುಂತಾದ ಅತ್ಯಗತ್ಯ ಇಂಧನಗಳ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.


ಪಿಎನ್‌ಜಿ (PNG) ಜಾಲದ ವಿಸ್ತರಣೆ:

ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ನ್ಯಾಷನಲ್ ಗ್ಯಾಸ್ ಗ್ರಿಡ್ ವಿಸ್ತರಣೆ, ಎಲ್‌ಎನ್‌ಜಿ ಆಮದು ಸಾಮರ್ಥ್ಯ ಹೆಚ್ಚಳ, ‘ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್’ ಜಾಲ ವಿಸ್ತರಣೆ ಹಾಗೂ ಪೈಪ್‌ಲೈನ್ ಮೂಲಸೌಕರ್ಯ ಆದೇಶ, 2026ರ ಅಡಿಯಲ್ಲಿ ಕೊನೆಯ ಹಂತದ ಸಂಪರ್ಕಗಳಿಗೆ ತ್ವರಿತ ಅನುಮೋದನೆ ನೀಡಲಾಗುತ್ತಿದ್ದು, ದೇಶಾದ್ಯಂತ ಪಿಎನ್‌ಜಿ ಸಂಪರ್ಕಗಳು ಗಮನಾರ್ಹವಾಗಿ ಹೆಚ್ಚಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

ರಸಗೊಬ್ಬರ ಪೂರೈಕೆ:

ಮುಂಬರುವ ರಬಿ ಕೃಷಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಲಭ್ಯತೆಯ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ನಿರೀಕ್ಷಿತ ಬೇಡಿಕೆಯನ್ನು ಈಡೇರಿಸಲು ಹಾಗೂ ಪರ್ಯಾಯ ಮೂಲಗಳಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಸಚಿವಾಲಯಗಳ ನಡುವೆ ಸಂಘಟನೆ:

ಸಂಘರ್ಷದ ಪ್ರಭಾವದಿಂದ ದೇಶದ ನಾಗರಿಕರನ್ನು ಹಾಗೂ ಅನಿವಾಸಿ ಭಾರತೀಯರನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ಎಲ್ಲಾ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ನಿರಂತರ ಸಂಯೋಜನೆ ಮತ್ತು ಸಹಕಾರ ಇರಬೇಕೆಂದು ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us