ಸೌದಿಯಲ್ಲಿ 42 ಭಾರತೀಯ ಯಾತ್ರಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ

ಇಂದು ಮುಂಜಾನೆ ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್ ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್‌ನ ಕನಿಷ್ಠ 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದರು. ಈ ಅಪಘಾತದ ಪರಿಣಾಮ ತೀವ್ರವಾಗಿದ್ದು, ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ.

ಸೌದಿಯಲ್ಲಿ 42 ಭಾರತೀಯ ಯಾತ್ರಿಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ
Saudi Accident

Updated on: Nov 17, 2025 | 5:22 PM

ನವದೆಹಲಿ, ನವೆಂಬರ್ 17: ಸೌದಿ ಅರೇಬಿಯಾದ (Saudi Arabia) ಮದೀನಾದಲ್ಲಿ 40ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ದುರಂತ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

“ಮದೀನಾದಲ್ಲಿ ಭಾರತೀಯ ಪ್ರಜೆಗಳು ಭಾಗಿಯಾಗಿರುವ ಅಪಘಾತದಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಪ್ರಾರ್ಥಿಸುತ್ತೇನೆ. ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿವೆ. ನಮ್ಮ ಅಧಿಕಾರಿಗಳು ಸಹ ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ” ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Saudi Arabia Accident: ಸೌದಿ ಅರೇಬಿಯಾದಲ್ಲಿ ಡೀಸೆಲ್​ ಟ್ಯಾಂಕರ್​ಗೆ ಬಸ್ ಡಿಕ್ಕಿ, 42 ಭಾರತೀಯರ ಸಜೀವ ದಹನ

ಇಂದು ಮದೀನಾ ಬಳಿ ಭಕ್ತರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯರು ಸೇರಿದಂತೆ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬಸ್ ಮೆಕ್ಕಾದಿಂದ ಮದೀನಾಗೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು. ಇಂದು ಬೆಳಗಿನ ಜಾವ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸಾವನ್ನಪ್ಪಿದವರಲ್ಲಿ ಹೆಚ್ಚಿನ ಯಾತ್ರಿಕರು ಹೈದರಾಬಾದ್‌ನವರು.


ಇದನ್ನೂ ಓದಿ: ಮಂಗಳೂರು: ಬಂಟ್ವಾಳ ಮತ್ತು ಪಣಂಬೂರು ಸಿಗ್ನಲ್ ಬಳಿ ಭೀಕರ ರಸ್ತೆ ದುರಂತಗಳು; ಪ್ರತ್ಯೇಕ ಅಪಘಾತದಲ್ಲಿ ಆರು ಜನ ಸಾವು

ಅಪಘಾತದ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಹೈದರಾಬಾದ್‌ನ 20 ಮಹಿಳೆಯರು ಮತ್ತು 11 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಸಹಾಯ ಮಾಡಲು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ತಲುಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ