ಶೂ ಎಸೆತ: CJI ಬಿಆರ್ ಗವಾಯಿ ಜೊತೆ ಮಾತನಾಡಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?

ಸುಪ್ರೀಂಕೋರ್ಟ್ ದೇಶದ ಸರ್ವೋಚ್ಛ ನ್ಯಾಯಾಲಯ. ಪ್ರಮುಖ ಪ್ರಕರಣಗಳ ಬಗ್ಗೆ ತೀರ್ಪು ಕೊಡುವ ಕೋರ್ಟ್​ನಲ್ಲಿಂದು ನಡೆಯಬಾರದ ಘಟನೆ ನಡೆದುಹೋಗಿದೆ. ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದಿದ್ದಾನೆ. ಈ ಘಟನೆ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಘಟನೆ ಸಂಬಂಧ ಖದ್ದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಗವಾಯಿ ಅವರ ಸಹನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೂ ಎಸೆತ: CJI ಬಿಆರ್ ಗವಾಯಿ ಜೊತೆ ಮಾತನಾಡಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?
Cji Gavai And Narendra Modi
Updated By: ರಮೇಶ್ ಬಿ. ಜವಳಗೇರಾ

Updated on: Oct 06, 2025 | 10:15 PM

ನವದೆಹಲಿ, (ಅಕ್ಟೋಬರ್ 06): ಸುಪ್ರೀಂಕೋರ್ಟ್ (Supreme Court )​ ಮುಖ್ಯ ನ್ಯಾಯಮೂರ್ತಿ (CJI) ಬಿಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿದ್ದು, ಈ ಘಟನೆ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿ.ಆರ್. ಗವಾಯಿ ಅವರಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಅಲ್ಲದೇ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಖಂಡಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಗ್ಗೆ ನಡೆದ ಘಟನೆ ಎಲ್ಲಾ ಭಾರತೀಯರನ್ನು ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳು ನಡೆಯಬಾರದು. ಇದು ಸಂಪೂರ್ಣ ಖಂಡನೀಯವಾದದ್ದು  ಎಂದಿದ್ದಾರೆ.

ಘಟನೆ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಗ್ಗೆ ನಡೆದ ಘಟನೆ ಎಲ್ಲಾ ಭಾರತೀಯರನ್ನು ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳು ನಡೆಯಬಾರದು. ಇದು ಸಂಪೂರ್ಣ ಖಂಡನೀಯವಾದದ್ದು. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಮೂರ್ತಿ ಗವಾಯಿ ಅವರು ತೋರಿದ ಶಾಂತತೆಯನ್ನು ನಾನು ಮೆಚ್ಚಿದ್ದೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಆತ್ಮವನ್ನು ಬಲಪಡಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.


ಘಟನೆಯ ಹಿನ್ನೆಲೆ

ಇಂದು(ಅಕ್ಟೋಬರ್ 06) ಎಂದಿನಂತೆ ಸುಪ್ರೀಂಕೋರ್ಟ್ ವಿಚಾರಣೆ ಶುರುವಾಗಿತ್ತು. ಒಂದಷ್ಟು ಕಲಾಪ ಕೂಡ ನಡೀತು. ಈ ವೇಳೆ ಸನಾತನ ಧರ್ಮಕ್ಕೆ ಅಪಮಾನವಾದ್ರೆ ಸಹಿಸಲ್ಲ ಎಂದು ಏಕಾಏಕಿ ಘೋಷಣೆ ಕೂಗಿದ ರಾಕೇಶ್ ಕಿಶೋರ್ ಅನ್ನೋ 71 ವರ್ಷದ ವಕೀಲನೊಬ್ಬ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠದತ್ತಲೇ ಬೂಟನ್ನ ಎಸೆದಿದ್ದಾನೆ. ಆದ್ರೆ ಈತ ಎಸೆದ ಶೂ ಸಿಜೆಐ ಪೀಠದ ಅಣತಿ ದೂರದಲ್ಲಿ ಬಿದ್ದಿದ್ದು, ಗವಾಯಿ ಅವರಿಗೆ ಬಡಿದಿಲ್ಲ .

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಬಿಸಾಡಲೆತ್ನಿಸಿದ ವಕೀಲ

ಈ ಘಟನೆಯಿಂದ ಸಿಜೆಐ ಗವಾಯಿ ಅವರು ಸಹ ವಿಚಲಿತರಾಗಲಿಲ್ಲ. ಇಂತಹ ಘಟನೆಗಳಿಂದ ವಿಚಲಿತರಾಗಲ್ಲ. ಇವುಗಳೆಲ್ಲಾ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಅಲ್ಲದೆ ಉಳಿದ ವಕೀಲರು ತಮ್ಮ ವಾದ ಮಂಡನೆ ಮುಂದುವರಿಸಿ ಎಂದು ಹೇಳಿದರು. ಗವಾಯಿ ಅವರ ಈ ಸಹನೆ ಹಾಗೂ ಶಾಂತತೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೂ ಎಸೆಯಲು ಅಸಲಿ ಕಾರಣವೇನು?

ವಿಷಯ ಏನಂದ್ರೆ ಮಧ್ಯಪ್ರದೇಶದ ಖಜುರಾಹೋದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ವಿಷ್ಣುವಿನ 7 ಅಡಿ ಎತ್ತರದ ವಿಗ್ರಹ ಶಿರಚ್ಛೇದ ಆಗಿತ್ತು. ಮೊಘಲರ ಕಾಲದಲ್ಲಿ ಮೂರ್ತಿ ಶಿರಚ್ಛೇದ ಮಾಡಲಾಗಿದೆ. ಮೂರ್ತಿ ಸರಿಮಾಡಿಸಿ ಪೂಜೆಗೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕು ಅಂತಾ ಅರ್ಜಿ ಸಲ್ಲಿಸಿದ್ದರು. ಆದ್ರೆ ಸಿಜೆಐ ಅರ್ಜಿ ವಜಾಗೊಳಿಸಿದ್ದರು.

ಅರ್ಜಿ ವಜಾಗೊಳಿಸೋ ಮುನ್ನ ಮಾತನಾಡಿದ್ದ ಸಿಜೆಐ ಬಿ.ಆರ್​.ಗವಾಯಿ ಅವರು ನೀವು ಹೋಗಿ ಈಗ ನಿಮ್ಮ ದೇವರನ್ನೆ ಏನಾದರೂ ಮಾಡುವಂತೆ ಕೇಳಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಅಂತಾ ಹೇಳಿದ್ದರು. ಅಲ್ಲದೇ ಇದು ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿರೋ ಸ್ಥಳ. ಹೀಗಾಗಿ ಎಎಸ್​ಐ ಬಳಿಯೇ ನೀವು ಮನವಿ ಮಾಡಿ ಎಂದು ಸೆಪ್ಟೆಂಬರ್​ನಲ್ಲಿ ಅರ್ಜಿ ತಿರಸ್ಕೃರಿಸಿದ್ದರು.

ಸಿಜೆಐ ನೀಡಿದ ಈ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಆದ್ರೆ ಇಂದು ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯಕ್ಷವಾದ ವಕೀಲ ರಾಕೇಶ್ ಕಿಶೋರ್, ಸಿಜೆಐ ಮೇಲೆಯೇ ಶೂ ಎಸೆಯಲು ವಿಫಲ ಪ್ರಯತ್ನ ಮಾಡಿದ್ದಾನೆ. ಈತನನ್ನ ವಶಕ್ಕೆ ಪಡೆದಿದ್ದ ಪೊಲೀಸರು 3 ಗಂಟೆ ವಿಚಾರಣೆ ನಡೆಸಿ ಬಿಟ್ಟುಕಳಿಸಿದ್ದಾರೆ.