AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 19ರಂದು ಅರುಣಾಚಲ ಪ್ರದೇಶ, ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮೋದಿ

ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಮೋದಿ ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಇಟಾನಗರದ 'ಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ.

ನವೆಂಬರ್ 19ರಂದು ಅರುಣಾಚಲ ಪ್ರದೇಶ, ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮೋದಿ
ನರೇಂದ್ರ ಮೋದಿ
TV9 Web
| Edited By: |

Updated on: Nov 17, 2022 | 9:58 PM

Share

ಪ್ರಧಾನಿ ನರೇಂದ್ರ ಮೋದಿ (Narendra Modi) ನವೆಂಬರ್ 19ರಂದು ಅರುಣಾಚಲ ಪ್ರದೇಶ(Arunachal Pradesh) ಮತ್ತು ಉತ್ತರ ಪ್ರದೇಶಕ್ಕೆ (Uttar Pradesh) ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9.30ರ ಸುಮಾರಿಗೆ ಮೋದಿ ಇಟಾನಗರದ ʻಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ. ಅವರು ಅರುಣಾಚಲ ಪ್ರದೇಶದಲ್ಲಿ 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅದಾದ ಬಳಿಕ, ಅವರು ಉತ್ತರ ಪ್ರದೇಶದ ವಾರಾಣಸಿಯನ್ನು ತಲುಪಲಿದ್ದು, ಅಲ್ಲಿ ಅವರು ಮಧ್ಯಾಹ್ನ 2 ಗಂಟೆಗೆ ‘ಕಾಶಿ ತಮಿಳು ಸಂಗಮಂ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಲಿದ್ದಾರೆ

ಅರುಣಾಚಲ ಪ್ರದೇಶದಲ್ಲಿ ಮೋದಿ ಕಾರ್ಯಕ್ರಮ

ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಮೋದಿ ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಇಟಾನಗರದ ‘ಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಸೂರ್ಯ (‘ಡೋನಿ’) ಮತ್ತು ಚಂದ್ರನ (‘ಪೋಲೊ’) ಬಗ್ಗೆ ರಾಜ್ಯವು ಹೊಂದಿರುವ ಗೌರವವನ್ನು ಪ್ರತಿಬಿಂಬಿಸುತ್ತದೆ. ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌ ಎನಿಸಿರುವ ಈ ವಿಮಾನ ನಿಲ್ದಾಣವನ್ನು 690 ಎಕರೆ ಪ್ರದೇಶದಲ್ಲಿ 640 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನ ನಿಲ್ದಾಣ 2300 ಮೀಟರ್ ರನ್‌ವೇ ಹೊಂದಿದೆ.

ದಿನದ ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ 80 ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ 8450 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಅರುಣಾಚಲ ಪ್ರದೇಶವನ್ನು ವಿದ್ಯುತ್ ಸಮೃದ್ಧ ರಾಜ್ಯವನ್ನಾಗಿ ಮಾಡುತ್ತದೆ.

ವಾರಾಣಸಿಯಲ್ಲಿನ ಕಾರ್ಯಕ್ರಮ

ಪ್ರಧಾನ ಮಂತ್ರಿಯವರ  ‘ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಉತ್ತೇಜಿಸಲು ಸರ್ಕಾರ ಪ್ರಧಾನವಾಗಿ ಗಮನ ಕೇಂದ್ರೀಕರಿಸುತ್ತಿದೆ. ಇದನ್ನು ಪ್ರತಿಬಿಂಬಿಸುವ ಮತ್ತೊಂದು ಉಪಕ್ರಮವಾಗಿ, ‘ಕಾಶಿ ತಮಿಳು ಸಂಗಮಂ’ ಎಂಬ ಒಂದು ತಿಂಗಳ ಕಾರ್ಯಕ್ರಮವನ್ನು ಕಾಶಿಯಲ್ಲಿ (ವಾರಾಣಸಿ) ಆಯೋಜಿಸಲಾಗುತ್ತಿದೆ. ನವೆಂಬರ್ 19ರಂದು ಪ್ರಧಾನಮಂತ್ರಿಯವರು ಇದನ್ನು ಉದ್ಘಾಟಿಸಲಿದ್ದಾರೆ.

ದೇಶದ ಎರಡು ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಶಿಕ್ಷಣ ಕ್ಷೇತ್ರಗಳೆನಿಸಿದ ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಸಂಬಂಧಗಳನ್ನು ಸಂಭ್ರಮಿಸುವುದು ಮತ್ತು ಮರುಶೋಧಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎರಡೂ ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ದಾರ್ಶನಿಕರು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಸೇರಿದಂತೆ ಜೀವನದ ಎಲ್ಲಾ ವರ್ಗದ ಜನರಿಗೆ ಪರಸ್ಪರ ಒಗ್ಗೂಡಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರರ ಅನುಭವದಿಂದ ಕಲಿಯಲು ಅವಕಾಶ ಒದಗಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ.

ತಮಿಳುನಾಡಿನಿಂದ 2500ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ. ಒಂದೇ ರೀತಿಯ ವ್ಯಾಪಾರ, ವೃತ್ತಿ ಮತ್ತು ಆಸಕ್ತಿಯ ಸ್ಥಳೀಯ ಜನರೊಂದಿಗೆ ಸಂವಹನ ನಡೆಸಲು ಅವರು ವಿಚಾರ ಸಂಕಿರಣಗಳು, ಕ್ಷೇತ್ರ ಭೇಟಿಗಳು ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ. ಎರಡೂ ಪ್ರದೇಶಗಳ ಕೈಮಗ್ಗಗಳು, ಕರಕುಶಲ ವಸ್ತುಗಳು, ʻಒ.ಡಿ.ಒ.ಪಿ.ʼ ಉತ್ಪನ್ನಗಳು, ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಪಾಕಪದ್ಧತಿ, ಕಲಾ ಪ್ರಕಾರಗಳು, ಇತಿಹಾಸ, ಪ್ರವಾಸಿ ಸ್ಥಳಗಳು ಇತ್ಯಾದಿಗಳು ಒಂದು ತಿಂಗಳ ಕಾಲ ಕಾಶಿಯಲ್ಲಿ ಪ್ರದರ್ಶನಗೊಳ್ಳಲಿವೆ.