Punjab CM: ಚರಣ್‌ಜಿತ್ ಸಿಂಗ್ ಛನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿ

ದಲಿತ ನಾಯಕ ಚರಣ್​ಜಿತ್​ ಸಿಂಗ್​ಗೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್​ ಹೈಕಮಾಂಡ್ ಅವಕಾಶ ಕಲ್ಪಿಸಿದೆ. ಕೆಲವೇ ಕ್ಷಣಗಳಲ್ಲಿ ಚರಣ್​ಜಿತ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

Punjab CM: ಚರಣ್‌ಜಿತ್ ಸಿಂಗ್ ಛನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿ
ಪಂಜಾಬ್​ನ ನಿಯೋಜಿತ ಮುಖ್ಯಮಂತ್ರಿ ಚರಣ್​ಜಿತ್ ಛನ್ನಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 19, 2021 | 6:24 PM

ಚಂಡೀಗಡ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ಕಾಂಗ್ರೆಸ್ ಹೆಸರಿಸಿದೆ. ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ರಂಧಾವಾ ಅವರ ಹೆಸರು ಮುಂಚೂಣಿಯಲ್ಲಿತ್ತು.

ಸಿಧು ಬಣದಲ್ಲಿ ಗುರುತಿಸಿಕೊಂಡಿದ್ದ ಸುಖ್ಜಿಂದರ್‌ ರಂಧಾವಾ ಬದಲು ದಲಿತ ನಾಯಕ ಚರಣ್​ಜಿತ್​ ಸಿಂಗ್​ಗೆ ಕಾಂಗ್ರೆಸ್​ ಹೈಕಮಾಂಡ್ ಅವಕಾಶ ಕಲ್ಪಿಸಿದೆ. ಕೆಲವೇ ಕ್ಷಣಗಳಲ್ಲಿ ಚರಣ್​ಜಿತ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ದಲಿತ ರಾಜಕಾರಣದ ಚದುರಂಗ ಪಂಜಾಬ್​ ರಾಜಕಾರಣದ ಏರಿಳಿತ ನಿಯಂತ್ರಿಸಬಹುದು ಎಂದು ವಿಶ್ಲೇಷಿಸಲಾಗಿರುವ ಶಿರೋಮಣಿ ಅಕಾಲಿದಳ ಮತ್ತು ಆಮ್ ಆದ್ಮಿ ಪಕ್ಷಗಳು ಈ ಹಿಂದೆ ದಲಿತ ಮತಗಳನ್ನು ಸೆಳೆಯಲು ಮಹತ್ವದ ಭರವಸೆಗಳನ್ನು ಘೋಷಿಸಿದ್ದವು. ರಾಜ್ಯದ ದಲಿತರು ಹಿಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಗ್ಗೆ ಅಸಮಾಧಾನ ಹೊಂದಿದ್ದ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಚರಣ್​ಜಿತ್ ಸಿಂಗ್ ಛನ್ನಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

58 ವರ್ಷದ ಚರಣ್​ಜಿತ್ ಸಿಂಗ್ ಹಿಂದಿನ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಕಾಂಗ್ರೆಸ್​ ಶಾಸಕಾಂಗ ಪಕ್ಷವು ಚರಣ್​ಜಿತ್ ಸಿಂಗ್ ಛನ್ನಿ ಅವರನ್ನು ತನ್ನ ನಾಯಕನಾಗಿ ಚುನಾಯಿಸಿದ್ದು, ಪಕ್ಷದ ಉಸ್ತುವಾರಿ ಹರೀಶ್ ರಾವತ್ ಈ ಆಯ್ಕೆಯನ್ನು ದೃಢಪಡಿಸಿದ್ದಾರೆ.

ಛನ್ನಿ ಅವರ ಆಯ್ಕೆಯು ಅಚ್ಚರಿಯುಂಟು ಮಾಡಿದೆ. ಕೆಲ ನಿಮಿಷಗಳ ಮೊದಲಿನವರೆಗೂ ಸುಖ್ಜಿಂದರ್ ಸಿಂಗ್ ರಂಧಾವಾ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿತ್ತು. ತಮ್ಮ ಹೆಸರನ್ನು ಹೈಕಮಾಂಡ್​ ಕೈಬಿಟ್ಟಿದ್ದು ದೃಢಪಟ್ಟ ನಂತರ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ರಂಧಾವಾ, ‘ಹೈಕಮಾಂಡ್ ಸರಿಯಾದ ತೀರ್ಮಾನ ತೆಗೆದುಕೊಂಡಿದೆ. ಛನ್ನಿ ಅವರಿಗೆ ಪಕ್ಷದ ಶಾಸಕರ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದರು.

ಅಮರಿಂದರ್ ಸಿಂಗ್ ಮತ್ತು ನವ್​ಜೋತ್​ ಸಿಂಗ್ ಸಿಧು ಬಣಗಳ ನಡುವಣ ಹಗ್ಗಜಗ್ಗಾಟದಿಂದ ದೇಶದ ಗಮನ ಸೆಳೆದಿದ್ದ ಪಂಜಾಬ್​ ರಾಜಕಾರಣ ಇದೀಗ ಒಂದು ಹಂತಕ್ಕೆ ಬಂದಿದೆ. ಕಳೆದ ಶುಕ್ರವಾರ ಇದ್ದಕ್ಕಿದ್ದಂತೆ ಸಭೆ ಸೇರಿದ್ದ ಕಾಂಗ್ರೆಸ್ ಶಾಸಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಅಮರಿಂದರ್ ಸಿಂಗ್ ಅವರ ಸ್ಥಾನಚ್ಯುತಿಗೆ ಒತ್ತಾಯಿಸಿದ್ದರು. ಪಕ್ಷದ 80 ಶಾಸಕರ ಪೈಕಿ 50 ಮಂದಿಯ ಸಹಿ ಈ ಪತ್ರದಲ್ಲಿತ್ತು.

ಈ ಬೆಳವಣಿಗೆಯ ನಂತರ ಸೋನಿಯಾ ಗಾಂಧಿಯೊಂದಿಗೆ ಮಾತನಾಡಿದ್ದ ಅಮರಿಂದರ್ ತಮ್ಮ ಆಡಳಿತ ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್​ನಿಂದ ಮೂರು ಬಾರಿ ತಮಗೆ ತೀವ್ರ ಅವಮಾನವಾಗಿದೆ ಎಂದು ದೂರಿದ್ದರು. ರಾಜೀನಾಮೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ಅವರಿಗೆ (ನವ್​ಜೋತ್ ಸಿಂಗ್ ಸಿಧು) ಮುಖ್ಯಮಂತ್ರಿ ಪಟ್ಟ ಕೊಡುವುದನ್ನು ನಾನು ವಿರೋಧಿಸುತ್ತೇನೆ. ಆತ ಅಸಮರ್ಥ. ಅವರು ಮುಖ್ಯಮಂತ್ರಿ ಆದರೆ ಅನಾಹುತವೇ ಆಗುತ್ತದೆ ಎಂದಿದ್ದರು.

(Punjab Congress Charanjit Singh Channi will be new Chief Minister)

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಬಗ್ಗೆ ಟ್ವೀಟ್ ಮಾಡಿದ್ದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸಹಾಯಕ ರಾಜೀನಾಮೆ

ಇದನ್ನೂ ಓದಿ: Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ

Published On - 6:05 pm, Sun, 19 September 21