ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪಂಜಾಬ್ ರಾಜ್ಯವು ಅಸಾಧಾರಣವಾದ ಪ್ರಗತಿಯ ಸಾಮರ್ಥ್ಯವನ್ನು ಹೊಂದಿದ್ದು, ರಾಜ್ಯದ ತ್ವರಿತ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. "ಪಂಜಾಬ್‌ನ ಯುವಕರಲ್ಲಿ, ರೈತರಲ್ಲಿ ಮತ್ತು ಇಲ್ಲಿನ ಕೈಗಾರಿಕೆಗಳಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುವ ಅಸಾಧಾರಣ ಸಾಮರ್ಥ್ಯವಿದೆ. ಆದರೆ, ಈ ಸಾಮರ್ಥ್ಯಕ್ಕೆ ತಕ್ಕ ವೇಗ ಮತ್ತು ಬೆಂಬಲ ಸಿಗಬೇಕಾದರೆ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ" ಎಂದು ಮೋದಿ ಹೇಳಿದರು.

ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Pm Modi In Punjab
Image Credit source: PTI

Updated on: Jul 17, 2026 | 9:34 PM

ಜಲಂಧರ್, ಜುಲೈ 17: ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ (AAP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಪಂಜಾಬ್ ರಾಜ್ಯದ ಯುವಕರ ಭವಿಷ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಜಲಂಧರ್‌ನಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (PM Modi), ಪಂಜಾಬ್‌ನಲ್ಲಿ ಪೊಲೀಸ್ ಠಾಣೆಗಳಿಗೂ ಸುರಕ್ಷತೆಯಿಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮೋದಿ ಭರವಸೆ ನೀಡಿದ್ದಾರೆ.

ಪಂಜಾಬ್ ರಾಜ್ಯದ ಭದ್ರತಾ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ಇಲ್ಲಿ ಪೊಲೀಸ್ ಠಾಣೆಗಳೂ ಸುರಕ್ಷಿತವಾಗಿಲ್ಲ. ಪದೇಪದೆ ಪೊಲೀಸ್ ಠಾಣೆಗಳ ಮೇಲೆಯೇ ದಾಳಿಗಳು ನಡೆಯುತ್ತಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪಂಜಾಬ್‌ನ ಭವಿಷ್ಯವೇ ಹಾಳಾಗುತ್ತಿದೆ. ಡ್ರಗ್ಸ್ ದಂಧೆಕೋರರು ಯಾವುದೇ ಭಯವಿಲ್ಲದೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಪಂಜಾಬ್‌ನ ಯುವ ಪೀಳಿಗೆಯನ್ನು ಮಾದಕ ವ್ಯಸನದ ಕೂಪಕ್ಕೆ ತಳ್ಳಲಾಗುತ್ತಿದೆ” ಎಂದು ಮೋದಿ ಆತಂಕ ವ್ಯಕ್ತಪಡಿಸಿದರು.


ಇದನ್ನೂ ಓದಿ: ಪ್ರಧಾನಿ ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?

ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾವಾಗ, ಎಲ್ಲಿ ಗ್ಯಾಂಗ್ ವಾರ್ ಆರಂಭವಾಗುತ್ತದೆ ಅಥವಾ ಯಾವ ಕಡೆಯಿಂದ ಗುಂಡುಗಳು ಹಾರಿಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇಲ್ಲಿ ವ್ಯಾಪಾರ-ವ್ಯವಹಾರ ಮಾಡುವುದು ಕಷ್ಟಕರವಾಗಿದೆ. ಸಾರ್ವಜನಿಕರಿಂದ ಬಹಿರಂಗವಾಗಿ ಹಫ್ತಾ ವಸೂಲಿ ಮಾಡಲಾಗುತ್ತಿದೆ” ಎಂದು ಮೋದಿ ಆರೋಪಿಸಿದರು.

ಬಿಜೆಪಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದ ಮೋದಿ:

“ಪಂಜಾಬ್‌ನಲ್ಲಿ ನಿಜವಾದ ಬದಲಾವಣೆಯನ್ನು ತರಲು ಬಿಜೆಪಿಯಿಂದ ಮಾತ್ರ ಸಾಧ್ಯ. ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯಕ್ಕೆ ಹೊಸ ಹೂಡಿಕೆಗಳು ಹರಿದುಬರಬೇಕು, ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಮತ್ತು ಪಂಜಾಬ್‌ನಲ್ಲಿ ತಯಾರಾಗುವ ಉತ್ಪನ್ನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆಂದರೆ ಈ ಎಲ್ಲಾ ಕಾರ್ಯಗಳನ್ನು ಬಿಜೆಪಿ ಮಾತ್ರವೇ ಸಾಧಿಸಬಲ್ಲದು” ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.


ಇದನ್ನೂ ಓದಿ: ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ

ರಾಜ್ಯದ ಪ್ರಸ್ತುತ ಆಡಳಿತ ವ್ಯವಸ್ಥೆಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಕೇಂದ್ರದ ಯೋಜನೆಗಳು ಜನರಿಗೆ ತಲುಪದಂತೆ ತಡೆಯುತ್ತಿವೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್‌ನಂತಹ ಆರೋಗ್ಯ ಯೋಜನೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ಪಂಜಾಬ್‌ನ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದರೆ ರಾಜಕೀಯ ಅಡೆತಡೆಗಳು ನಿವಾರಣೆಯಾಗಬೇಕು ಎಂದು ಮೋದಿ ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us