ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ; ಗಾಂಧಿ ಸ್ಮೃತಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನೀಟ್ (NEET) ಪೇಪರ್ ಲೀಕ್‌ನಿಂದಾಗಿ ಮನನೊಂದು ಜೀವ ಕಳೆದುಕೊಂಡ ಹಾಗೂ ಪ್ರತಿಭಟನೆಯ ವೇಳೆ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಮರಿಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯ (INDIA) ಒಕ್ಕೂಟದ ಸಂಸದರು ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ; ಗಾಂಧಿ ಸ್ಮೃತಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ
Rahul Gandhi In Gandhi Smriti
Image Credit source: PTI

Updated on: Jul 23, 2026 | 9:41 PM

ನವದೆಹಲಿ, (ಜುಲೈ 23): ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ‘ಇಂಡಿಯ’ ಒಕ್ಕೂಟದ ಸಂಸದರು ದೆಹಲಿಯ ‘ತೀಸ್ ಜನವರಿ ಮಾರ್ಗ’ದಲ್ಲಿರುವ ಗಾಂಧಿ ಸ್ಮೃತಿಗೆ ಬಸ್‌ಗಳಲ್ಲಿ ತೆರಳಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಪೋಲಿಸರ ಲಾಠಿಚಾರ್ಜ್‌ನಿಂದ ಗಾಯಗೊಂಡ ವಿದ್ಯಾರ್ಥಿಗಳಿಗೆ ಬೆಂಬಲ ಪ್ರದರ್ಶಿಸಲು ಈ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎನ್‌ಸಿಪಿ ಹಾಗೂ ಶಿವಸೇನೆ (ಯುಬಿಟಿ) ಪ್ರಮುಖ ನಾಯಕರು ಬಸ್‌ಗಳಲ್ಲಿ ಗಾಂಧಿ ಸ್ಮೃತಿಗೆ ತಲುಪಿದರು.


“ಮಹಾತ್ಮ ಗಾಂಧಿಯವರನ್ನು ಇದೇ ಸ್ಥಳದಲ್ಲಿ ಹತ್ಯೆ ಮಾಡಲಾಯಿತು. ಇಂದು ಮೋದಿ ಸರ್ಕಾರವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಮತ್ತು ಅವರ ಮೇಲೆ ಹಲ್ಲೆ ನಡೆಸುತ್ತಿದೆ. ವಿರೋಧ ಪಕ್ಷಗಳು ಇದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು ಹಾಗೂ ದೇಶದ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಗೆ ಸೋನಿಯಾ ಗಾಂಧಿ ಭೇಟಿ; ಕೊನೆಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡುಗಡೆ

ದೆಹಲಿ ಪೊಲೀಸರಿಂದ ತಡೆ:

ವಿರೋಧ ಪಕ್ಷಗಳ ಮಾರ್ಚ್ ತಡೆಯಲು ದೆಹಲಿ ಪೊಲೀಸರು ಭಾರಿ ಭದ್ರತೆ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ ‘ಇಂಡಿಯಾ ಗೇಟ್’ ಕಡೆಗೆ ಮೆರವಣಿಗೆ ನಡೆಸಲು ವಿಪಕ್ಷ ನಾಯಕರು ಅನುಮತಿ ಕೋರಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಗೆ ತೆರಳಲು ನಿರ್ಧರಿಸಲಾಯಿತು.


ಬಿಳಿ ಟಿ-ಶರ್ಟ್ ಧರಿಸಿದ್ದ ರಾಹುಲ್ ಗಾಂಧಿ, ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಸಂವಿಧಾನದ ಪ್ರತಿಯನ್ನು ಹಿಡಿದು ಗಾಂಧಿ ಸ್ಮೃತಿಯಲ್ಲಿ ಜಾಗರಣೆ ನಡೆಸಿದರು. ಈ ವೇಳೆ ಅವರಿಗೆ ಸಾಥ್ ನೀಡಿದ ಇತರ ಸಂಸದರು, ತಮ್ಮ ಮೊಬೈಲ್‌ಗಳ ಫ್ಲ್ಯಾಶ್‌ಲೈಟ್ ಬೆಳಗಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: 10 ವರ್ಷಗಳಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ, ಒಬ್ಬರಿಗೂ ಶಿಕ್ಷೆಯಾಗಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಇದಕ್ಕೂ ಮುನ್ನ ಮಧ್ಯಾಹ್ನ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದಂತೆ, ದೆಹಲಿ ಪೊಲೀಸರು ಅವರ ನಿವಾಸದ ಹೊರಗೆ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿ ದಿಗ್ಬಂಧನ ವಿಧಿಸಿದ್ದರು. ಸಭೆ ಮುಗಿದ ತಕ್ಷಣ, ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಗಾಂಧಿ ಸ್ಮೃತಿಗೆ ತೆರಳುವುದಾಗಿ ರಾಹುಲ್ ಗಾಂಧಿ ಘೋಷಿಸಿದರು. ಅದರಂತೆ ರಾಹುಲ್ ಗಾಂಧಿ ಹಾಗೂ ಇತರ ಸಂಸದರನ್ನು ಹೊತ್ತ 3 ಬಸ್‌ಗಳು ಗಾಂಧಿ ಸ್ಮೃತಿಯನ್ನು ತಲುಪಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us