ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಸುಳ್ಳಿನ ವಿರುದ್ಧ ಸತ್ಯದ ಗೆಲುವು ಎಂದ ಪ್ರಧಾನಿ ಮೋದಿ

ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೈಪುರ, ಉದಯಪುರ ಸೇರಿದಂತೆ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಬಹುಮತ ಗಳಿಸಿದ್ದು, ಸಾವಿರಾರು ವಾರ್ಡ್‌ಗಳನ್ನು ಗೆದ್ದಿದೆ. ಪ್ರಧಾನಿ ಮೋದಿ ಇದನ್ನು "ಸುಳ್ಳಿನ ವಿರುದ್ಧ ಸತ್ಯದ ವಿಜಯ" ಎಂದು ಬಣ್ಣಿಸಿದ್ದು, ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ನೀತಿಗಳಿಗೆ ಜನರು ಮನ್ನಣೆ ನೀಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಕೂಡ 3600ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದು ಪ್ರಬಲ ಪೈಪೋಟಿ ನೀಡಿದೆ.

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಸುಳ್ಳಿನ ವಿರುದ್ಧ ಸತ್ಯದ ಗೆಲುವು ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: PTI

Updated on: Sep 15, 2026 | 11:15 AM

ನವದೆಹಲಿ, ಸೆಪ್ಟೆಂಬರ್ 15: ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಮುನ್ನಡೆ ಸಾಧಿಸಿದೆ. ಒಟ್ಟು 10 ಮಹಾನಗರ ಪಾಲಿಕೆಗಳ ಪೈಕಿ ಜೈಪುರ, ಉದಯಪುರ, ಕೋಟಾ ಮತ್ತು ಭಿಲ್ವಾರ ಸೇರಿದಂತೆ ನಾಲ್ಕರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ್ದು, ಸಾವಿರಾರು ವಾರ್ಡ್‌ಗಳಲ್ಲಿ ಗೆದ್ದು ಬೀಗಿದೆ. ಈ ಫಲಿತಾಂಶವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು “ಸುಳ್ಳಿನ ಪ್ರತಿಧ್ವನಿಯ ಮೇಲೆ ಸತ್ಯ ಪಡೆದ ಮಹಾನ್ ವಿಜಯ” ಎಂದು ಬಣ್ಣಿಸಿದ್ದಾರೆ ಹಾಗೂ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ನೀತಿಗಳಿಗೆ ಜನರು ಮುದ್ರೆ ಒತ್ತಿದ್ದಾರೆ ಎಂದು ಹೇಳಿದ್ದಾರೆ.

ಫಲಿತಾಂಶದ ಅಂಕಿ-ಅಂಶ: ರಾಜ್ಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪ್ರಕಟಗೊಂಡ ವಾರ್ಡ್‌ಗಳ ಪೈಕಿ ಬಿಜೆಪಿ 4179 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್ 3613 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ.

ಪ್ರಮುಖ ಪಾಲಿಕೆಗಳ ಸ್ಥಿತಿ: ರಾಜಧಾನಿ ಜೈಪುರ, ಉದಯಪುರ, ಕೋಟಾ ಮತ್ತು ಭಿಲ್ವಾರ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಗದ್ದುಗೆ ಹಿಡಿದಿದೆ. ಆದರೆ, ಬಿಕಾನೇರ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು, ಮಾಜಿ ಸಿಎಂ ವಸುಂಧರಾ ರಾಜೆ ಅವರ ಭದ್ರಕೋಟೆಯಾಗಿದ್ದ ಝಲಾವರ್ ಪುರಸಭೆಯಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದೆ.

ಕೋಟಾದಲ್ಲಿ ರಾಹುಲ್‌ಗೆ ಟಾಂಗ್: ಕೋಟಾದಲ್ಲಿ ರಾಹುಲ್ ಗಾಂಧಿ ಈ ಹಿಂದೆ ವಿದ್ಯಾರ್ಥಿಗಳ ಜೊತೆ ನಡೆಸಿದ್ದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮವನ್ನು ಉಲ್ಲೇಖಿಸಿ ಟೀಕಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ರಾಹುಲ್ ಸೃಷ್ಟಿಸಲು ಯತ್ನಿಸಿದ ‘ಝೂಟ್ ಕಿ ಗೂಂಜ್’ ಅನ್ನು ಮತದಾರರು ತಿರಸ್ಕರಿಸಿದ್ದಾರೆ, ಕೋಟಾದಲ್ಲಿ ಬಿಜೆಪಿ ಅದ್ಭುತ ಜಯಭೇರಿ ಬಾರಿಸಿದೆ” ಎಂದಿದ್ದಾರೆ.

ಮತ್ತಷ್ಟು ಓದಿ:
ಸುವೇಂದು ರಾಜೀನಾಮೆಯಿಂದ ತೆರವಾದ ನಂದಿಗ್ರಾಮದಲ್ಲಿ ಮತ್ತೆ ಮಮತಾ ಸ್ಪರ್ಧೆ ಸಾಧ್ಯತೆ: ಟಿಎಂಸಿ ಚಿಹ್ನೆ ಜಟಾಪಟಿಯ ನಡುವೆ ಕದನ ಕುತೂಹಲ

ಒಂದೇ ಹಂತದ ಚುನಾವಣೆ ಯಶಸ್ಸು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸಿ ದುರುಪಯೋಗಪಡಿಸಿಕೊಳ್ಳಲಾಗಿತ್ತು, ಆದರೆ ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ‘ಒಂದು ರಾಜ್ಯ, ಒಂದೇ ಹಂತ’ದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಿ ಗೆದ್ದು ತೋರಿಸಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಬಿಜೆಪಿಯ ಭೌಗೋಳಿಕ ವಿಸ್ತರಣೆ: ಈ ಹಿಂದೆ ಬಿಜೆಪಿ ಖಾತೆ ತೆರೆಯಲು ಹೆಣಗಾಡುತ್ತಿದ್ದ ಪೂರ್ವ ರಾಜಸ್ಥಾನದ ಬುಂಡಿ, ದೌಸಾ, ಹನುಮಾನ್‌ಗಢ, ಕರೌಲಿ, ಧೋಲ್‌ಪುರ ಮತ್ತು ಭರತ್‌ಪುರ ಮುಂತಾದ ಜಿಲ್ಲೆಗಳ ನಗರ ಸಂಸ್ಥೆಗಳಲ್ಲೂ ಈ ಬಾರಿ ಬಿಜೆಪಿ ಉತ್ತಮ ಮುನ್ನಡೆ ಸಾಧಿಸಿ ಹೊಸ ನೆಲೆ ಕಂಡುಕೊಂಡಿದೆ.

ಸಿಎಂ ಭಜನ್‌ಲಾಲ್ ಸರ್ಕಾರಕ್ಕೆ ಜನರ ಮನ್ನಣೆ: ರಾಜ್ಯದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪ್ರಮುಖ ನಗರಾಡಳಿತ ಪರೀಕ್ಷೆ ಇದಾಗಿದ್ದು, ನಗರ ಪ್ರದೇಶದ ಮತದಾರರು ಸರ್ಕಾರದ ಆಡಳಿತಕ್ಕೆ ಸಕಾರಾತ್ಮಕ ಬೆಂಬಲ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ನ ಪ್ರಬಲ ಪೈಪೋಟಿ: ಬಿಜೆಪಿ ಪಾಲಿಕೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಕಾಂಗ್ರೆಸ್ ಕೂಡ 3,600ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದು ಗ್ರಾಮೀಣ ಮತ್ತು ಸಣ್ಣ ಪುರಸಭೆ ಮಟ್ಟದಲ್ಲಿ ಬಲವಾದ ಪೈಪೋಟಿ ಮುಂದುವರಿಸಿರುವುದು ಗಮನಾರ್ಹ ಅಂಶವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us