ದುರ್ಗಾ ಪೂಜೆಗೂ ಮುನ್ನ ಬಂಗಾಳ ರಾಜಕೀಯದಲ್ಲಿ ಮೆಗಾ ಟ್ವಿಸ್ಟ್: ಬಿಜೆಪಿ ಸೇರಲಿದ್ದಾರೆ 17 ಎನ್ಸಿಪಿಐ ಸಂಸದರು
ದುರ್ಗಾ ಪೂಜೆಗೂ ಮುನ್ನ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಟಿಎಂಸಿ ತೊರೆದು ಎನ್ಸಿಪಿಐ ಸೇರಿದ್ದ 20 ಬಂಡಾಯ ಸಂಸದರ ಪೈಕಿ 17 ಮಂದಿ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಇದು ಬಂಗಾಳ ಮತ್ತು ಕೇಂದ್ರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಬಿಜೆಪಿ ಲೋಕಸಭಾ ಬಲವನ್ನು ಹೆಚ್ಚಿಸಲಿದೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ರಕ್ಷಣೆ ಪಡೆಯಲು ಸಂಸದರು ಎನ್ಸಿಪಿಐ ಮೊರೆ ಹೋಗಿದ್ದರು.

ಕೋಲ್ಕತ್ತಾ, ಸೆಪ್ಟೆಂಬರ್ 15: ಮುಂಬರುವ ದುರ್ಗಾ ಪೂಜೆ ಹಬ್ಬಕ್ಕೂ ಮುನ್ನ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಮಹಾ ಭೂಕಂಪ ಸಂಭವಿಸುವ ಮುನ್ಸೂಚನೆ ಸಿಕ್ಕಿದೆ. ತೃಣಮೂಲ ಕಾಂಗ್ರೆಸ್ನಿಂದ (TMC) ಹೊರಬಂದು ಎನ್ಸಿಪಿಐ (NCPI) ಸೇರಿದ 20 ಬಂಡಾಯ ಸಂಸದರ ಪೈಕಿ 17 ಸಂಸದರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಕೂಚ್ ಬೆಹಾರ್ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಸಂಭಾವ್ಯ ಪಕ್ಷಾಂತರವು ಪಶ್ಚಿಮ ಬಂಗಾಳ ಮತ್ತು ದೆಹಲಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಿಂದ ರಕ್ಷಣೆ: ಒಟ್ಟು 20 ಬಂಡಾಯ ಸಂಸದರಲ್ಲಿ 17 ಸಂಸದರು ಒಟ್ಟಾಗಿ ಬಿಜೆಪಿ ಸೇರುತ್ತಿರುವುದರಿಂದ, ಇದು ಒಟ್ಟು ಬಲದ ಮೂರನೇ ಎರಡರಷ್ಟು ಪ್ರಮಾಣವಾಗುತ್ತದೆ. ಹೀಗಾಗಿ ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಸಂಸದ ಸ್ಥಾನ ಅನರ್ಹತೆಯಾಗುವುದಿಲ್ಲ ಎಂದು ಬಸುನಿಯಾ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಪ್ರವೇಶ ನಿರಾಕರಿಸಿದ ಮೂವರು ಸಂಸದರು: ಮುರ್ಷಿದಾಬಾದ್ ಭಾಗದ ಪ್ರಮುಖ ಸಂಸದರಾದ ಅಬು ತಾಹೆರ್ ಖಾನ್, ಜಂಗಿಪುರ ಸಂಸದ ಖಲೀಲುರ್ ರೆಹಮಾನ್ ಮತ್ತು ಬೆರ್ಹಾಂಪೋರ್ ಸಂಸದ ಯೂಸುಫ್ ಪಠಾಣ್ (ಮಾಜಿ ಕ್ರಿಕೆಟಿಗ) ಬಿಜೆಪಿಗೆ ಸೇರಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇವರ ವಿರೋಧದಿಂದಾಗಿಯೇ ನೇರವಾಗಿ ಬಿಜೆಪಿ ಸೇರದೆ ಮಧ್ಯಂತರವಾಗಿ ಎನ್ಸಿಪಿಐಗೆ ಸೇರಲಾಗಿತ್ತು ಎಂದು ಬಸುನಿಯಾ ಬಹಿರಂಗಪಡಿಸಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಸಂಖ್ಯೆ ವೃದ್ಧಿ: ಈ 17 ಸಂಸದರು ಅಧಿಕೃತವಾಗಿ ಬಿಜೆಪಿ ಸೇರಿದರೆ, ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯ ಬಲ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 29 ಕ್ಕೆ ಏರಲಿದೆ. ಹಾಗೆಯೇ ಕೇಂದ್ರ ಲೋಕಸಭೆಯಲ್ಲಿ ಬಿಜೆಪಿಯ ಒಟ್ಟು ಸಂಖ್ಯಾಬಲ 252 ಕ್ಕೆ ತಲುಪಲಿದೆ.
ಬಿಜೆಪಿ ಹೈಕಮಾಂಡ್ಗೆ ಚೆಂಡು: ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ, “ಯಾರು ಬೇಕಾದರೂ ಬಿಜೆಪಿ ಸೇರಲು ಇಚ್ಛಿಸಬಹುದು, ಆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಕೇಂದ್ರ ನಾಯಕತ್ವವೇ ನಿರ್ಧರಿಸುತ್ತದೆ” ಎಂದಿದ್ದಾರೆ.
ಮತ್ತಷ್ಟು ಓದಿ: ಗೆದ್ದು ವಿಧಾನಸಭೆಗೆ ಬನ್ನಿ, ಒಟ್ಟಿಗೇ ಇರೋಣ: ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾಗೆ ಸ್ವಪಕ್ಷೀಯ ಬಂಡಾಯಗಾರರ ರೆಡ್ ಕಾರ್ಪೆಟ್
ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣ: ಬಂಡಾಯವೆದ್ದು ಪ್ರತ್ಯೇಕ ಗುಂಪು ರಚಿಸಿಕೊಂಡ 20 ಸಂಸದರ ವಿರುದ್ಧ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್ನಲ್ಲಿ ಅನರ್ಹತೆ ಅರ್ಜಿ ಸಲ್ಲಿಸಿದ್ದು, ಇತ್ತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆಯೂ ವಿಲೀನದ ಅರ್ಜಿ ಬಾಕಿ ಉಳಿದಿದೆ.
ಹೌರಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಇದುವರೆಗೆ ಯಾವುದೇ ಗಣನೀಯ ಸಾಧನೆ ಮಾಡದ ಸಣ್ಣ ಪಕ್ಷವಾಗಿದ್ದು, ತ್ರಿಪುರಾ ಚುನಾವಣೆಯಲ್ಲಿ ಕೆಲವೇ ನೂರು ಮತಗಳನ್ನು ಗಳಿಸಿತ್ತು. ಅನರ್ಹತೆಯಿಂದ ತಾತ್ಕಾಲಿಕವಾಗಿ ರಕ್ಷಣೆ ಪಡೆಯಲು ಸಂಸದರು ಈ ಪಕ್ಷದ ಮೊರೆ ಹೋಗಿದ್ದರು ಎಂಬುದು ಈಗ ಬಹಿರಂಗವಾಗಿದೆ.
ಬಂಗಾಳದಲ್ಲಿ ರಾಜಕೀಯ ಸಮೀಕರಣ ಬದಲು: ದುರ್ಗಾ ಪೂಜೆಯ ಹೊತ್ತಿಗೆ ಈ 17 ಸಂಸದರು ಎನ್ಡಿಎ ತೆಕ್ಕೆಗೆ ಜಾರಿದರೆ, ಮುಂಬರುವ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಮತ್ತಷ್ಟು ರಾಜಕೀಯ ಹಿನ್ನಡೆಯಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




