
ಅಯೋಧ್ಯೆ, ಜುಲೈ 06: ರಾಮ ಮಂದಿರ(Ram Mandir)ದಲ್ಲಿ ದೇಣಿಗೆ ಕಳ್ಳತನದ ಆರೋಪಗಳ ಕುರಿತು ದೇಶಾದ್ಯಂತ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಕ್ತರು ದಾನ ಮಾಡಿದ್ದ ಬೆಳ್ಳಿಯ ವಸ್ತುಗಳನ್ನು ಹೈದರಾಬಾದ್ಗೆ ಕಳುಹಿಸಿರುವ ವಿಚಾರ ಈಗ ತೀವ್ರ ಕುತೂಹಲ ಮೂಡಿಸಿದೆ. ಅಯೋಧ್ಯೆಯಲ್ಲಿದ್ದ ಬೆಳ್ಳಿಯನ್ನು ಹೈದರಾಬಾದ್ಗೆ ಏಕೆ ಕಳುಹಿಸಲಾಯಿತು ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ಹೈದರಾಬಾದ್ಗೆ ಕಳುಹಿಸಲು ಕಾರಣವೇನು?
ರಾಮ ಮಂದಿರಕ್ಕೆ ದೇಶ-ವಿದೇಶಗಳ ಭಕ್ತರು ವಿವಿಧ ರೂಪಗಳಲ್ಲಿ (ಲೋಟ, ತಟ್ಟೆ, ಒಡವೆಗಳು ಇತ್ಯಾದಿ) ಬೆಳ್ಳಿ ವಸ್ತುಗಳನ್ನು ದಾನವಾಗಿ ನೀಡುತ್ತಿದ್ದಾರೆ. ಈ ಎಲ್ಲ ಸಣ್ಣ-ಪುಟ್ಟ ವಸ್ತುಗಳನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿಡುವುದು ಮತ್ತು ಸಂರಕ್ಷಿಸುವುದು ದೇವಾಲಯದ ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿತ್ತು.
ಹೀಗಾಗಿ, ಈ ಎಲ್ಲಾ ವಸ್ತುಗಳನ್ನು ಕರಗಿಸಿ ಒಂದೇ ಗಾತ್ರದ ಇಟ್ಟಿಗೆಗಳನ್ನಾಗಿ ಪರಿವರ್ತಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿತು. ಇದಕ್ಕಾಗಿ ಸುಮಾರು 1,000 ಕಿಲೋಗ್ರಾಂ (1 ಟನ್) ಬೆಳ್ಳಿಯನ್ನು ಹೈದರಾಬಾದ್ಗೆ ಕಳುಹಿಸಲಾಯಿತು.
ಹೈದರಾಬಾದ್ನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ‘ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (SPMCIL) ಸಂಸ್ಥೆಯಿದೆ. ಇದು ಅತ್ಯಂತ ಸುರಕ್ಷಿತ ಹಾಗೂ ಅಧಿಕೃತವಾಗಿ ಚಿನ್ನ-ಬೆಳ್ಳಿಯನ್ನು ಕರಗಿಸುವ ಮತ್ತು ನಾಣ್ಯ, ಇಟ್ಟಿಗೆಗಳನ್ನು ತಯಾರಿಸುವ ಸರ್ಕಾರಿ ಸಂಸ್ಥೆಯಾಗಿದೆ. ಭದ್ರತೆ ಹಾಗೂ ಪಾರದರ್ಶಕತೆಯ ದೃಷ್ಟಿಯಿಂದ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ.
ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿ: ಬಯಲಾಯ್ತು ಆರೋಪಿಗಳ ಭ್ರಷ್ಟಾಚಾರ
ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಏಕೆ?
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಈ ಬೆಳ್ಳಿಯನ್ನು ಅಯೋಧ್ಯೆಯಿಂದ ಹೈದರಾಬಾದ್ಗೆ ಕೊಂಡೊಯ್ಯಲು ಮತ್ತು ಇಟ್ಟಿಗೆಗಳನ್ನಾಗಿ ಮಾಡಿದ ನಂತರ ಮರಳಿ ಅಯೋಧ್ಯೆಗೆ ತರಲು ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಭಾರಿ ಭದ್ರತೆಯೊಂದಿಗೆ ಟನ್ಗಟ್ಟಲೆ ಬೆಳ್ಳಿಯನ್ನು ಸಾಗಿಸಲು ಹಣ ಖರ್ಚಾಗಿದೆ.
ಶುದ್ಧತೆಯ ಪರೀಕ್ಷೆ: ಬೆಳ್ಳಿಯ ಶುದ್ಧತೆಯನ್ನು (Purity) ಕಟ್ಟುನಿಟ್ಟಾಗಿ ಪರೀಕ್ಷಿಸಲು ಮತ್ತು ಅದನ್ನು ಇಟ್ಟಿಗೆ ರೂಪಕ್ಕೆ ಬದಲಾಯಿಸಲು ಸರ್ಕಾರಿ ಸಂಸ್ಥೆಗೆ ಶುಲ್ಕ ಪಾವತಿಸಲಾಗಿದೆ.
ಭಕ್ತರ ನಂಬಿಕೆ ಉಳಿಸಲು ಹೊಸ ವ್ಯವಸ್ಥೆ
ದೇಣಿಗೆ ಕಳ್ಳತನದ ವಿವಾದದಿಂದ ಭಕ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ ನಡೆಸುತ್ತಿದೆ. ದೇಣಿಗೆ ಪೆಟ್ಟಿಗೆಗಳಿಗೆ ಇನ್ನು ಮುಂದೆ ಆಭರಣಗಳನ್ನು ಹಾಕುವಾಗ ಜವಾಬ್ದಾರಿಯುತ ಮತ್ತು ‘ಫೂಲ್ಪ್ರೂಫ್’ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಸ್ಟ್ ಸದಸ್ಯರು ಒತ್ತಾಯಿಸಿದ್ದಾರೆ. ದೇಣಿಗೆ ಎಣಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿ, ಅದನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಭಕ್ತರ ನಂಬಿಕೆಯನ್ನು ಮರಳಿ ಗಳಿಸಲು ಟ್ರಸ್ಟ್ ಮುಂದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 6 July 26