Rohini Court Blast: ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಸ್ಫೋಟ; ಒಬ್ಬರಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Dec 09, 2021 | 2:08 PM

ಇಂದು ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಸಣ್ಣ ಪ್ರಮಾಣದ ಸ್ಫೋಟದ ಸದ್ದು ಕೇಳಿ ಬಂದಿದ್ದು, ನ್ಯಾಯಾಲಯಕ್ಕೆ ಹಾಜರಾದವರಲ್ಲಿ ಆತಂಕ ಮನೆಮಾಡಿದೆ.

Rohini Court Blast: ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಸ್ಫೋಟ; ಒಬ್ಬರಿಗೆ ಗಾಯ
ರೋಹಿಣಿ ಕೋರ್ಟ್​ ಬ್ಲಾಸ್ಟ್
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಇಂದು ಬೆಳಗ್ಗೆ ಸಣ್ಣ ಸ್ಫೋಟ ಸಂಭವಿಸಿದೆ. ಆದರೆ, ಈ ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಕೋರ್ಟ್​ ಆವರಣದಲ್ಲಿ ಉಂಟಾದ ಸ್ಫೋಟದಿಂದಾಗಿ ಅಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಲ್ಯಾಪ್​ಟಾಪ್​ನ ಬ್ಯಾಟರಿ ಸ್ಫೋಟಗೊಂಡು ಈ ಬ್ಲಾಸ್ಟ್​ ಉಂಟಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರೋಹಿಣಿ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಲ್ಯಾಪ್‌ಟಾಪ್ ಸ್ಫೋಟಗೊಂಡಿದೆ. ಲ್ಯಾಪ್‌ಟಾಪ್ ನೆಲದ ಮೇಲೆ ಬಿದ್ದಿರುವ ವೀಡಿಯೊಗಳು ವೈರಲ್ ಆಗಿವೆ. ವಿಷಯ ತಿಳಿದ ಕೂಡಲೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಈ ಘಟನೆಯ ನಂತರ ಎಲ್ಲಾ ನ್ಯಾಯಾಲಯದ ಕಲಾಪಗಳನ್ನು ತಕ್ಷಣವೇ ನಿಲ್ಲಿಸಲಾಯಿತು. ಹಾಗೇ, ಸ್ಫೋಟದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು. ಮಾಹಿತಿ ಪಡೆದ ನಂತರ ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಇಂದು ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಸಣ್ಣ ಪ್ರಮಾಣದ ಸ್ಫೋಟದ ಸದ್ದು ಕೇಳಿ ಬಂದಿದ್ದು, ನ್ಯಾಯಾಲಯಕ್ಕೆ ಹಾಜರಾದವರಲ್ಲಿ ಆತಂಕ ಮನೆಮಾಡಿದೆ. ಲ್ಯಾಪ್​ಟಾಪ್​ನಲ್ಲಿನ ಶಾರ್ಟ್ ಸರ್ಕ್ಯೂಟ್ ಈ ಸ್ಫೋಟಕ್ಕೆ ಕಾರಣ ಎಂದು ಅನುಮಾನಿಸಲಾಗಿದೆ. ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸ್ಫೋಟದ ನಂತರ ಎಲ್ಲಾ ವಕೀಲರು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಓಡಿಬಂದಿದ್ದಾರೆ.

ನ್ಯಾಯಾಲಯಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡುವುದಾಗಿ ದೆಹಲಿ ಹೈಕೋರ್ಟ್ ಕಳೆದ ತಿಂಗಳು ಹೇಳಿತ್ತು. ಸೆಪ್ಟೆಂಬರ್ 24ರಂದು ರೋಹಿಣಿ ಕೋರ್ಟ್‌ನ ನ್ಯಾಯಾಲಯದ ಕೊಠಡಿಯಲ್ಲಿ ಮೂವರನ್ನು ಹತ್ಯೆಗೈದ ಶೂಟೌಟ್‌ಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ನೇತೃತ್ವದ ಪೀಠ, ನ್ಯಾಯಾಂಗ ಸಂಕೀರ್ಣಗಳಲ್ಲಿ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ತನ್ನ ಹಿಂದಿನ ಸಲಹೆಗಳನ್ನು ನಿರ್ದೇಶನಗಳಾಗಿ ಅಳವಡಿಸುವುದಾಗಿ ಹೇಳಿದೆ.

ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ನಿರ್ದೇಶನಗಳನ್ನು ಪರಿಶೀಲಿಸಲು ಏಪ್ರಿಲ್‌ನಲ್ಲಿ ಮತ್ತೆ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ ಮತ್ತು ಈ ಮಧ್ಯೆ ಸಹಕರಿಸಲು ವಕೀಲರನ್ನು ಕೇಳಿದೆ. ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಯಾವುದೇ ತೊಂದರೆ ಇದ್ದಲ್ಲಿ ನಂತರ ತಿದ್ದುಪಡಿ ಮಾಡಬಹುದು. ನಿರ್ದೇಶನಗಳು ಏಪ್ರಿಲ್ 18ರವರೆಗೆ ಜಾರಿಯಲ್ಲಿರುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: CDS Bipin Rawat Death: ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ; ವಿವರ ಇಲ್ಲಿದೆ

ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; ಮತ್ತೆ ಹೊಸದಾಗಿ 25 ಕೇಸ್​ಗಳು ಪತ್ತೆ, ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ

Published On - 12:52 pm, Thu, 9 December 21