ಕೊವಿಶೀಲ್ಡ್​ ಲಸಿಕೆ ಉತ್ಪಾದನೆಯಲ್ಲಿ ಶೇ.50ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದ ಅದಾರ್ ಪೂನಾವಾಲಾ

ಕಳೆದ ವರ್ಷ ಇದ್ದಕ್ಕಿದ್ದಂತೆ ನೂರಾರು ಮಿಲಿಯನ್​ಗಳಷ್ಟು ಲಸಿಕೆ ಒಮ್ಮೆಲೇ ಬೇಕಾಯಿತು. ಅನಿವಾರ್ಯವಾಗಿ ರಫ್ತು ಕೂಡ ನಿಲ್ಲಿಸಬೇಕಾಯಿತು. ಆದರೆ ಅಂಥ ಪರಿಸ್ಥಿತಿ ಬಾರದಂತೆ ಸರ್ಕಾರಗಳು ಗಮನಕೊಡಬೇಕು ಎಂದೂ ಅದಾರ್​ ಪೂನಾವಾಲಾ ಹೇಳಿದ್ದಾರೆ.

ಕೊವಿಶೀಲ್ಡ್​ ಲಸಿಕೆ ಉತ್ಪಾದನೆಯಲ್ಲಿ ಶೇ.50ರಷ್ಟು ಕಡಿತಗೊಳಿಸುವುದಾಗಿ ತಿಳಿಸಿದ ಅದಾರ್ ಪೂನಾವಾಲಾ
ಅದಾರ್ ಪೂನಾವಾಲಾ
Edited By:

Updated on: Dec 08, 2021 | 10:01 AM

ಕೊವಿಡ್​ 19 ಲಸಿಕೆ ಕೊವಿಶೀಲ್ಡ್​​ ಉತ್ಪಾದನೆಯನ್ನು ಶೇ.50ರಷ್ಟು ಕಡಿತಗೊಳಿಸುವುದಾಗಿ ಸೀರಮ್​ ಇನ್​ಸ್ಟಿಟ್ಯೂಟ್​​ನ (SII)ನ ಸಿಇಒ ಅದಾರ್​ ಪೂನಾವಾಲಾ ಹೇಳಿದ್ದಾರೆ. ಪ್ರಮುಖ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೊವಿಡ್ 19 ಲಸಿಕೆ ಬೇಕು ಎಂದು ಕೇಂದ್ರ ಸರ್ಕಾರದಿಂದ ಹೊಸದಾಗಿ ಆರ್ಡರ್​ ಬಂದಿಲ್ಲ. ಹೀಗಾಗಿ ಮುಂದಿನ ವಾರದ ಹೊತ್ತಿಗೆ ಶೇ.50ರಷ್ಟು ಉತ್ಪಾದನೆಯನ್ನು ಕಡಿತಗೊಳಿಸುತ್ತೇವೆ ಎಂದು ಅದಾರ್​ ಪೂನಾವಾಲಾ ತಿಳಿಸಿದ್ದಾರೆ.  ಹಾಗೇ, ಅರ್ಹರಿಗೆ ಬೇಕಾಗುವ ಎರಡು ಡೋಸ್​​ಗಳು, ಅಗತ್ಯ ಇರುವವರಿಗೆ ಬೂಸ್ಟರ್​ ಡೋಸ್​ ಕೊಡುವ ಬಗ್ಗೆ ಒಂದು ಸ್ಪಷ್ಟತೆ ನೀಡುವಂತೆ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.  

ನಾನು ಸದ್ಯಕ್ಕೆ ಗೊಂದಲದಲ್ಲಿ ಇದ್ದೇನೆ. ತಿಂಗಳಿಗೆ ನಾವು 250 ಮಿಲಿಯನ್​ ಡೋಸ್​​ಗಳಷ್ಟು ಲಸಿಕೆ ಉತ್ಪಾದನೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಇಟ್ಟಷ್ಟು ಪ್ರಮಾಣದ ಬೇಡಿಕೆಯನ್ನು ಪೂರೈಸಿದ್ದೇವೆ. ಇದೀಗ ದೇಶದಲ್ಲಿ ಶೇ.50ಕ್ಕೂ ಹೆಚ್ಚು ಜನರಿಗೆ ಎರಡೂ ಡೋಸ್​ ಕೊವಿಡ್​ 19 ಲಸಿಕೆ ನೀಡಿ ಮುಗಿದಿದೆ.  ಹೀಗಾಗಿ ಹೊಸದಾಗಿ ಆರ್ಡರ್​ ಏನೂ ಬಂದಿಲ್ಲ. ನಾವೂ ಕೂಡ ಉತ್ಪಾದನೆ ಪ್ರಮಾಣ ತಗ್ಗಿಸಲು ನಿರ್ಧರಿಸಿದ್ದೇವೆ ಎಂದು ಪೂನಾವಾಲಾ ಹೇಳಿದ್ದಾರೆ.  ಹಾಗೇ, ನಾವು ಉತ್ಪಾದನೆಯನ್ನು ಶೇ.50ರಷ್ಟು ಕಡಿತಗೊಳಿಸಿದರೂ, ಉತ್ಪಾದನಾ ಸಾಮರ್ಥ್ಯವನ್ನು ಹಾಗೇ ಉಳಿಸಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ದೇಶಕ್ಕೆ ಅಥವಾ ಇಡೀ ವಿಶ್ವಮಟ್ಟದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಗತ್ಯ ಬಿದ್ದರೆ, ನಾವು ಹಿಂದೆ ಬೀಳಲು ಸಾಧ್ಯವಿಲ್ಲ. ಆದರೆ ಈಗ ತಿಂಗಳ ಉತ್ಪಾದನೆ ಕಡಿತಗೊಳಿಸುವುದು ಅನಿವಾರ್ಯ ಎಂದೂ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಇದ್ದಕ್ಕಿದ್ದಂತೆ ನೂರಾರು ಮಿಲಿಯನ್​ಗಳಷ್ಟು ಲಸಿಕೆ ಒಮ್ಮೆಲೇ ಬೇಕಾಯಿತು. ಅನಿವಾರ್ಯವಾಗಿ ರಫ್ತು ಕೂಡ ನಿಲ್ಲಿಸಬೇಕಾಯಿತು. ಆದರೆ ಅಂಥ ಪರಿಸ್ಥಿತಿ ಬಾರದಂತೆ ಸರ್ಕಾರಗಳು ಗಮನಕೊಡಬೇಕು. ಇದನ್ನೆಲ್ಲ ಸರ್ಕಾರ ಮತ್ತು ಆರೋಗ್ಯ ತಜ್ಞರಿಗೆ ನಾವು ಪತ್ರದಲ್ಲಿ ವಿವರಿಸಿದ್ದೇವೆ. ನಮಗೊಂದು ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಕೇಳಿದ್ದೇವೆ. ಆ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದೆ ಎಂದು ಅದಾರ್ ಪೂನಾವಾಲಾ ಹೇಳಿದ್ದಾರೆ. ಕೊವ್ಯಾಕ್ಸ್ ಪ್ಲಾಟ್​ಫಾರ್ಮ್​​ನಲ್ಲಿ ಸುಮಾರು 400-500 ಮಿಲಿಯನ್​ ಡೋಸ್​ಗಳಷ್ಟು ಲಸಿಕೆ ಅಗತ್ಯ ಇರುವುದನ್ನು ನಾವು ಪರಿಶೀಲಿಸಿದ್ದೇವೆ. ಹಾಗೇ, ಆಫ್ರಿಕಾದ ಕೆಲವು ರಾಷ್ಟ್ರಗಳ ನಾಯಕರೊಟ್ಟಿಗೆ ಸಂಪರ್ಕದಲ್ಲಿದ್ದೇವೆ. ಏನಿದ್ದರೂ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಬಂದ ಹೊರತು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Kuvempu : ‘ಟಿ. ಎಸ್. ಎಲಿಯಟ್​ರ ಕಾವ್ಯದ ಬಗ್ಗೆ ಅಣ್ಣ ಯಾವತ್ತೂ ಶ್ರೇಷ್ಠ ಎನ್ನುವ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ’

 

Published On - 9:55 am, Wed, 8 December 21

Loading...
Unable to load recommendations.
Follow Us