ಲಡಾಖ್ನ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಸೋನಮ್ ವಾಂಗ್ಚುಕ್ ಬಂಧನ
ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬಂಧನದ ನಂತರ ಸರ್ಕಾರವು ಲಡಾಖ್ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸೋನಮ್ ವಾಂಗ್ಚುಕ್ ಅವರ ಪ್ರಚೋದನಕಾರಿ ಹೇಳಿಕೆಗಳು, ಅಧಿಕಾರಿಗಳು ಮತ್ತು ಲಡಾಖ್ ಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಂದ ಅತೃಪ್ತಿಗೊಂಡ ರಾಜಕೀಯ ಪ್ರೇರಿತ ಗುಂಪುಗಳ ಕ್ರಮಗಳು ಪ್ರತಿಭಟನಾಕಾರರನ್ನು ಪ್ರಚೋದಿಸಿವೆ ಎಂದು ಸರ್ಕಾರ ಆರೋಪಿಸಿದೆ.

ಲಡಾಖ್, ಸೆಪ್ಟೆಂಬರ್ 26: ಲೇಹ್ ಲಡಾಖ್ನಲ್ಲಿ ನಡೆಯುತ್ತಿದ್ದ ಶಾಂತಿಯುತ ಬಂದ್ ಹಿಂಸಾಚಾರಕ್ಕೆ ತಿರುಗಿದ ನಂತರ 4 ಜನರು ಸಾವನ್ನಪ್ಪಿದರು ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡರು. ಅದಾದ ಕೆಲವು ದಿನಗಳ ನಂತರ, ಕ್ಲೈಮೇಟ್ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಇಂದು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಯಿತು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರನ್ನು ಪ್ರಚೋದಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ವಾಂಗ್ಚುಕ್ ಅವರನ್ನು ಲೇಹ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಅವರನ್ನು ಲಡಾಖ್ನ ಹೊರಗಿನ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಅವರನ್ನು ದೆಹಲಿಗೆ ಕರೆದೊಯ್ಯುವ ಸಾಧ್ಯತೆಗಳು ಹೆಚ್ಚಾಗಿವೆ. 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಪ್ರತಿಭಟನೆಯಿಂದ 4 ಜನರು ಸಾವನ್ನಪ್ಪಿದ ಬಳಿಕ ತಮ್ಮ ಉಪವಾಸವನ್ನು ನಿಲ್ಲಿಸಿದ್ದರು.
ಇದನ್ನೂ ಓದಿ: Ladakh Protest: ಲಡಾಖ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಾರಣಗಳೇನು?
ಬುಧವಾರ ನಡೆದ ಘರ್ಷಣೆಗಳ ನಂತರ, ಅಧಿಕಾರಿಗಳು ಲೇಹ್ನಲ್ಲಿ ಕರ್ಫ್ಯೂ ವಿಧಿಸಿದ್ದರು. ವಾಂಗ್ಚುಕ್ ಕೂಡ ತಮ್ಮ ಎರಡು ವಾರಗಳ ಉಪವಾಸ ಸತ್ಯಾಗ್ರಹವನ್ನು ಸಹ ರದ್ದುಗೊಳಿಸಿದ್ದರು. ರಾಜ್ಯ ಸ್ಥಾನಮಾನ ಮತ್ತು ಲಡಾಖ್ ಅನ್ನು ಸಂವಿಧಾನದ ಆರನೇ ವೇಳಾಪಟ್ಟಿಗೆ ಸೇರಿಸಬೇಕೆಂದು ಅವರು ಒತ್ತಾಯಿಸಿದ್ದರು.
ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಶಾಂತಿಗೆ ಸೋನಮ್ ವಾಂಗ್ಚುಕ್ ಅವರೇ ಕಾರಣವೆಂದು ಅವರನ್ನು ದೂಷಿಸಿತು. ಅವರ ಪ್ರಚೋದನಕಾರಿ ಹೇಳಿಕೆಗಳು, ಅಧಿಕಾರಿಗಳು ಮತ್ತು ಲಡಾಖ್ ಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಂದ ಅತೃಪ್ತಿಗೊಂಡ “ರಾಜಕೀಯ ಪ್ರೇರಿತ” ಗುಂಪುಗಳ ಕ್ರಮಗಳು ಪ್ರತಿಭಟನಾಕಾರರನ್ನು ಪ್ರಚೋದಿಸಿವೆ ಎಂದು ಆರೋಪಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




