ಒಡಿಶಾದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂ.12ಕ್ಕೆ ಮುಂದೂಡಿಕೆ

|

Updated on: Jun 09, 2024 | 7:11 PM

ಒಡಿಶಾ ವಿಧಾನಸಭೆ ಚುನಾವಣೆ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. 147 ಸದಸ್ಯರ ಸದನದಲ್ಲಿ ಬಿಜೆಪಿ 74 ಸ್ಥಾನಗಳನ್ನು ಗಳಿಸಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, 24 ವರ್ಷಗಳ ಕಾಲ ರಾಜ್ಯವನ್ನು ಆಳಿದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರವನ್ನು ಸೋಲಿಸಿದೆ.

ಒಡಿಶಾದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂ.12ಕ್ಕೆ ಮುಂದೂಡಿಕೆ
ಒಡಿಶಾದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
Follow us on

ನವದೆಹಲಿ: ಒಡಿಶಾದಲ್ಲಿ ಈ ಬಾರಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ (Odisha BJP Government) ರಚನೆಯಾಗಲಿದೆ. ಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೂನ್ 10ರಿಂದ ಜೂನ್ 12 ಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ ನಾಯಕರಾದ ಜತಿನ್ ಮೊಹಂತಿ ಮತ್ತು ವಿಜಯಪಾಲ್ ಸಿಂಗ್ ತೋಮರ್ ಖಚಿತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi Swearing in Ceremony) ಅವರ ಕಾರ್ಯಕ್ರಮಗಳು ಈಗಾಗಲೇ ಫಿಕ್ಸ್ ಆಗಿರುವುದರಿಂದಾಗಿ ಒಡಿಶಾದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ಮೊಹಾಂತಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಇಂದು ತಮ್ಮದೇ ಪ್ರಮಾಣವಚನ ಸಮಾರಂಭದಲ್ಲಿ ನಿರತರಾಗಿರುತ್ತಾರೆ. ನಾಳೆ (ಸೋಮವಾರ) ಬಿಜೆಪಿಯ ಸಂಸದರನ್ನು ಭೇಟಿಯಾಗಲಿದ್ದಾರೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಮೊದಲ ಶಾಸಕಾಂಗ ಪಕ್ಷದ ಸಭೆಯನ್ನು ಜೂನ್ 11ಕ್ಕೆ ಮರು ನಿಗದಿಪಡಿಸಲಾಗಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಜೂನ್ 10ರಂದು ಒಡಿಶಾದ ಮೊದಲ ಬಿಜೆಪಿ ಸರ್ಕಾರ ಪ್ರಮಾಣವಚನ ಸ್ವೀಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಈ ಸಮಾರಂಭ ಮುಂದೂಡಿಕೆಯಾಗುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Modi Cabinet: ಮೋದಿ ಸಂಪುಟದಲ್ಲಿ ಸಚಿವರಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಮಾಣವಚನ ಸ್ವೀಕಾರ ಸಾಧ್ಯತೆ

ಈ ನಡುವೆ ಒಡಿಶಾದ ನೂತನ ಸಿಎಂ ಬಗ್ಗೆ ಸಸ್ಪೆನ್ಸ್ ಹೆಚ್ಚಿದೆ. ಒಡಿಶಾದ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ. ಮೂಲಗಳ ಪ್ರಕಾರ ಬಿಜೆಪಿಯ ಹಿರಿಯ ನಾಯಕ ಮತ್ತು ಹೊಸದಾಗಿ ಚುನಾಯಿತ ಶಾಸಕ ಸುರೇಶ್ ಪೂಜಾರಿ ಅವರು ನವದೆಹಲಿಗೆ ಧಾವಿಸಿದ್ದು, ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಬಹುದು ಎನ್ನಲಾಗಿದೆ.

2019ರ ಚುನಾವಣೆಯಲ್ಲಿ ಬಾರ್‌ಗಢದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸುರೇಶ್ ಪೂಜಾರಿ, ಈ ಬಾರಿಯ ಚುನಾವಣೆಯಲ್ಲಿ ಬ್ರಜರಾಜನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಕೇಂದ್ರ ನಾಯಕರ ಜತೆ ಚರ್ಚೆ ನಡೆಸಲು ಅವರನ್ನು ನವದೆಹಲಿಗೆ ಕರೆಸಲಾಗಿತ್ತು ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಒಡಿಶಾದ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸದಿದ್ದರೂ, ಒಡಿಶಾ ಪಕ್ಷದ ಘಟಕದ ಅಧ್ಯಕ್ಷ ಮನಮೋಹನ್ ಸಮಾಲ್ ಸುದ್ದಿಗಾರರಿಗೆ ಸ್ಪಷ್ಟ ಚಿತ್ರಣಕ್ಕಾಗಿ ಸೋಮವಾರದವರೆಗೆ ಕಾಯುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್, ತಪ್ಪಿದ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ!

ನವದೆಹಲಿಯಿಂದ ಹಿಂದಿರುಗಿದ ನಂತರ, ಬಿಜೆಪಿಯ ಸಂಸದೀಯ ಮಂಡಳಿಯು ತನ್ನ ಮುಂಬರುವ ಸಭೆಯಲ್ಲಿ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ ಎಂದು ಸಮಾಲ್ ಹೇಳಿದ್ದಾರೆ. 147 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಪಡೆಯುವ ಮೂಲಕ ಅನುಕೂಲಕರ ಬಹುಮತವನ್ನು ಪಡೆದಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸದೆ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ