ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ
ಮುಂಬೈ ದಾಳಿಯ ಆರೋಪಿಯಾದ ತಹವ್ವೂರ್ ರಾಣಾ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಸಹ-ಸಂಚುಕೋರ ತಹವ್ವೂರ್ ರಾಣಾ ಇಂದು (ಏಪ್ರಿಲ್ 10) ಭಾರತಕ್ಕೆ ಬಂದಿಳಿದಿದ್ದಾರೆ. ಬುಧವಾರ ವಿಶೇಷ ವಿಮಾನದಲ್ಲಿ ಬಹು-ಏಜೆನ್ಸಿಗಳ ಭಾರತೀಯ ತಂಡದ ಜೊತೆ ರಾಣಾ ಅಮೆರಿಕದಿಂದ ಹೊರಟಿದ್ದರು. ಆತನನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಭದ್ರತಾ ಕಾರಣಗಳಿಂದಾಗಿ ಆತನನ್ನು ಎನ್ಐಎ ನ್ಯಾಯಾಧೀಶರ ಮುಂದೆ ವರ್ಚುವಲ್ ಆಗಿ, ಆನ್ಲೈನ್ನಲ್ಲಿ ಹಾಜರುಪಡಿಸುವ ನಿರೀಕ್ಷೆಯಿದೆ. ಅದಕ್ಕೂ ಮೊದಲೇ ಅವರ ಆರೋಗ್ಯವನ್ನು ಪರಿಶೀಲಿಸಲಾಗುವುದು.

ಮುಂಬೈ, ಏಪ್ರಿಲ್ 10: ಅಮೆರಿಕದಿಂದ ಗಡಿಪಾರಾಗಿದ್ದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು (Tahawwur Rana) ಭಾರತಕ್ಕೆ ಕರೆತರಲಾಗಿದೆ. NIA, RAW, SWAT ತಂಡಗಳು ಅಮೆರಿಕಕ್ಕೆ ತೆರಳಿ ನಿನ್ನೆ ವಿಶೇಷ ವಿಮಾನದಲ್ಲಿ ರಾಣಾ ಜೊತೆ ಭಾರತಕ್ಕೆ ಹೊರಟಿದ್ದರು. ಇಂದು ಮಧ್ಯಾಹ್ನ 2.39ರ ಸುಮಾರಿಗೆ ರಾಣಾ ಇದ್ದ ವಿಮಾನ ದೆಹಲಿಯಲ್ಲಿ ಇಳಿಯಿತು. ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸುವ ಸಾಧ್ಯತೆಯಿದೆ. ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತುರ್ತು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ದೇಶದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಭಾರತದ ತನಿಖಾಧಿಕಾರಿಗಳ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿತ್ತು.
ಅಧಿಕಾರಿಗಳ ಪ್ರಕಾರ, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿರುವ ಹೈ ಸೆಕ್ಯುರಿಟಿ ಸೆಲ್ಗಳು ಹೆಚ್ಚಿನ ಅಪಾಯದ ಬಂಧಿತ ವ್ಯಕ್ತಿಗಾಗಿ ಸಿದ್ಧವಾಗಿವೆ. ಎನ್ಐಎ ಇತ್ತೀಚೆಗೆ ಅವರ ಪ್ರಕರಣವನ್ನು ಮುಂಬೈನಿಂದ ದೆಹಲಿಗೆ ವರ್ಗಾಯಿಸುವ ಬಗ್ಗೆ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡಿದೆ. ಅವರನ್ನು ಭಾರತಕ್ಕೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಏಜೆನ್ಸಿ ಅವರನ್ನು ಕಸ್ಟಡಿಗೆ ವಿಚಾರಣೆಗೆ ಒಳಪಡಿಸಬಹುದು. ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ರಾಣಾ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾ ಅಮೆರಿಕದಿಂದ ಗಡಿಪಾರು
ತಹವ್ವೂರ್ ರಾಣಾ ಇಂದು ಮಧ್ಯಾಹ್ನ ಭಾರತಕ್ಕೆ ಮರಳಿದರು. ಅವರನ್ನು ಈಗ NIA ಔಪಚಾರಿಕವಾಗಿ ಬಂಧಿಸಿ, ನಂತರ ಪ್ರಧಾನ ಕಚೇರಿಗೆ ಕರೆದೊಯ್ಯಲಾಗುವುದು. ಅಲ್ಲಿ ಕೆಲವು ದಾಖಲೆಗಳು ಸೇರಿದಂತೆ ಔಪಚಾರಿಕ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಅವರನ್ನು 24 ಗಂಟೆಗಳ ಒಳಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆದರೆ, ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಥವಾ ದೈಹಿಕವಾಗಿ ಹಾಜರುಪಡಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. NIA ನ್ಯಾಯಾಲಯದಿಂದ ರಾಣಾ ಅವರ ಕಸ್ಟಡಿ ವಿಚಾರಣೆಯನ್ನು ಕೋರಬಹುದು.
ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಮತ್ತು 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರ. ನವೆಂಬರ್ 26, 2008ರಂದು ಪಾಕಿಸ್ತಾನದ 10 ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರ ಗುಂಪು ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗವನ್ನು ಬಳಸಿಕೊಂಡು ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ನುಸುಳಿ ಮುಂಬೈ ಸಿಎಸ್ಟಿ ರೈಲು ನಿಲ್ದಾಣ, ಎರಡು ಐಷಾರಾಮಿ ಹೋಟೆಲ್ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತ್ತು. ಮುಂಬೈನಲ್ಲಿ ನಡೆದ ಸುಮಾರು 60 ಗಂಟೆಗಳ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಭಾರತಕ್ಕೆ ಬರಲಿರುವ ಉಗ್ರ ತಹವ್ವೂರ್ ರಾಣಾ; ಮುಂಬೈ ದಾಳಿಯಲ್ಲಿ ಈತನ ಪಾತ್ರವೇನು?
ಮೂಲಗಳ ಪ್ರಕಾರ, ಎನ್ಐಎ ಡಿಐಜಿ ಜಯಾ ರಾಯ್ ಮಂಗಳವಾರ ತಹಾವೂರ್ ರಾಣಾ ಶರಣಾಗತಿ ವಾರಂಟ್ಗೆ ಸಹಿ ಹಾಕಿದರು. ಅದಾದ ನಂತರ ಅವರ ಹಸ್ತಾಂತರ ಪ್ರಕ್ರಿಯೆಯು ವೇಗವಾಗಿ ಮುಂದುವರಿಯಿತು. ಬುಧವಾರ ಬೆಳಿಗ್ಗೆ 6.30ರ ಸುಮಾರಿಗೆ ಭಾರತೀಯ ತನಿಖಾ ಸಂಸ್ಥೆ ರಾಣಾ ಅವರನ್ನು ಹೊತ್ತ ವಿಶೇಷ ವಿಮಾನದಲ್ಲಿ ದೆಹಲಿಗೆ ಹೊರಟಿತು. ಸದಾನಂದ ದಾತೆ ನೇತೃತ್ವದ NIA ತಂಡವು ಅವರನ್ನು ಮರಳಿ ಕರೆತಂದಿದೆ. ದಾತೆ ಮಹಾರಾಷ್ಟ್ರ ಕೇಡರ್ನ ಐಪಿಎಸ್ ಅಧಿಕಾರಿ. ಭಾರತ ತಲುಪಿದ ರಾಣಾನನ್ನು NIA ತಂಡವು ಅಧಿಕೃತವಾಗಿ ಕಸ್ಟಡಿಗೆ ತೆಗೆದುಕೊಳ್ಳುತ್ತದೆ. ದೆಹಲಿ ಪೊಲೀಸರ ಪ್ರತ್ಯೇಕ ತಂಡವೂ ಕಟ್ಟೆಚ್ಚರದಲ್ಲಿದೆ. ವಿಮಾನ ನಿಲ್ದಾಣದಲ್ಲಿ SWAT ಕಮಾಂಡೋಗಳನ್ನು ಸಹ ನಿಯೋಜಿಸಲಾಗಿತ್ತು. ಇದರ ಜೊತೆಗೆ, ವಿಮಾನ ನಿಲ್ದಾಣ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರ ಸುತ್ತುವರಿದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ