ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್​ನಿಂದ ಬೇಗ ಹೊರಡಲು ಅವಕಾಶ; ಬಿಜೆಪಿ ಆಕ್ರೋಶ

|

Updated on: Feb 18, 2025 | 10:38 PM

ಮುಸ್ಲಿಮರ ಪವಿತ್ರ ಹಬ್ಬವಾಗಿರುವ ರಂಜಾನ್ ತಿಂಗಳಲ್ಲಿ ಅವರ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ತೆಲಂಗಾಣ ಸರ್ಕಾರವು ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಸ್ಲಿಂ ಉದ್ಯೋಗಿಗಳಿಗೆ ಸಾಮಾನ್ಯಕ್ಕಿಂತ 1 ಗಂಟೆ ಮುಂಚಿತವಾಗಿ ಕೆಲಸ ಬಿಟ್ಟು ಮನೆಗೆ ಹೋಗಲು ಅನುಮತಿ ನೀಡಿದೆ. ಮಾರ್ಚ್ 2ರಿಂದ ಜಾರಿಗೆ ಬರಲಿರುವ ಮತ್ತು ಮಾರ್ಚ್ 31ರವರೆಗೆ ಜಾರಿಯಲ್ಲಿರುವ ಈ ಹೊಸ ನಿಯಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್​ನಿಂದ ಬೇಗ ಹೊರಡಲು ಅವಕಾಶ; ಬಿಜೆಪಿ ಆಕ್ರೋಶ
Muslims Prayer
Follow us on

ಹೈದರಾಬಾದ್: ಪವಿತ್ರ ರಂಜಾನ್‌ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡುವುದಕ್ಕೆ ಅವಕಾಶ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವೀಗ ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಮುಂಚಿತವಾಗಿ ಕೆಲಸ ಬಿಡಲು ಅವಕಾಶ ನೀಡಿದೆ. ಇದು ಬಿಜೆಪಿಯಿಂದ ತೀವ್ರ ಟೀಕೆಗೆ ಕಾರಣವಾಗಿದೆ.

ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ಸೋಮವಾರ ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಸಮಯವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಚಂದ್ರನ ದರ್ಶನವನ್ನು ಅವಲಂಬಿಸಿ ಮಾರ್ಚ್ 1 ಅಥವಾ 2ರಂದು ಪ್ರಾರಂಭವಾಗುವ ರಂಜಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು 1 ಗಂಟೆ ಮುಂಚಿತವಾಗಿ ಕಚೇರಿ ಬಿಡಲು ಅವಕಾಶವಿದೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಆದೇಶಗಳು ಮುಸ್ಲಿಂ ಶಿಕ್ಷಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ, ಮಂಡಳಿ ಮತ್ತು ಸಾರ್ವಜನಿಕ ವಲಯದ ಕಾರ್ಮಿಕರಿಗೆ ಅನ್ವಯಿಸುತ್ತವೆ.

ಇದನ್ನೂ ಓದಿ: ‘ಗೇಮ್ ಚೇಂಜರ್’ಗೆ ಹೈಕೋರ್ಟ್​ನಿಂದ ಹೊಡೆತ, ಯೂ ಟರ್ನ್ ಹೊಡೆದ ತೆಲಂಗಾಣ ಸರ್ಕಾರ

ತೆಲಂಗಾಣ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು/ ಶಿಕ್ಷಕರು/ ಗುತ್ತಿಗೆ/ ಹೊರಗುತ್ತಿಗೆ/ ಮಂಡಳಿಗಳು/ ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು ಅಥವಾ ಶಾಲೆಗಳನ್ನು ಬಿಡಲು ಸರ್ಕಾರ ಅನುಮತಿ ನೀಡಿದೆ. “ರಂಜಾನ್” ಪವಿತ್ರ ಮಾಸದಲ್ಲಿ ಅಂದರೆ ಮಾರ್ಚ್ 2ರಿಂದ 31ರವರೆಗೆ ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು 1 ಗಂಟೆ ಮುಂಚಿತವಾಗಿ ತೆರಳಲು ಅವಕಾಶ ನೀಡಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಅವರು ನಿಗದಿತ ಅವಧಿಯವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.


ಮುಸ್ಲಿಂ ಉದ್ಯೋಗಿಗಳಿಗೆ ಕಡಿಮೆ ಕೆಲಸದ ಸಮಯವನ್ನು ಅನುಮತಿಸಿದ್ದಕ್ಕಾಗಿ ಬಿಜೆಪಿ ಕಾಂಗ್ರೆಸ್ ಅನ್ನು ಟೀಕಿಸಿದೆ. ಇದು ಮುಸ್ಲಿಮರನ್ನು ಸಮಾಧಾನಗೊಳಿಸುವ ತಂತ್ರ ಎಂದು ಬಿಜೆಪಿ ಆರೋಪಿಸಿದೆ. ನವರಾತ್ರಿಯ ಉಪವಾಸದ ಸಮಯದಲ್ಲಿ ಹಿಂದೂಗಳಿಗೆ ಅಂತಹ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ? ಎಂದು ಬಿಜೆಪಿ ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ