G20 ಶೃಂಗಸಭೆಯ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಭಾರತದ ರಾಷ್ಟ್ರಪತಿ; ಏನಿದು ಹೊಸ ಚರ್ಚೆ?

|

Updated on: Sep 05, 2023 | 2:34 PM

President of Bharat: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ G20 ವಿದೇಶಿ ನಾಯಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು ಅದರಲ್ಲಿ "ಪ್ರೆಸಿಡೆಂಟ್ ಆಫ್ ಇಂಡಿಯಾ" ಬದಲಿಗೆ "ಭಾರತದ ರಾಷ್ಟ್ರಪತಿ ಎಂದು ಬರೆಯಲಾಗಿದೆ. ಆದಾಗ್ಯೂ, ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಇಂಡಿಯಾ ಬದಲು ಭಾರತ್ ಎಂದು ಬದಲಿಸಿರುವುದು ಇದೇ ಮೊದಲು.

G20 ಶೃಂಗಸಭೆಯ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಭಾರತದ ರಾಷ್ಟ್ರಪತಿ; ಏನಿದು ಹೊಸ ಚರ್ಚೆ?
ರಾಷ್ಟ್ರಪತಿಯವರ ಕಚೇರಿಯ ಆಹ್ವಾನ ಪತ್ರಿಕೆ
Follow us on

ದೆಹಲಿ ಸೆಪ್ಟೆಂಬರ್ 05: ವಾರಾಂತ್ಯದ G20 ಶೃಂಗಸಭೆಯಲ್ಲಿ (G20 Summit) ಭಾಗವಹಿಸುವ ರಾಷ್ಟ್ರಗಳ ಮುಖ್ಯಸ್ಥರಿಗೆ ಅಧಿಕೃತ ಆಹ್ವಾನದಲ್ಲಿ ಮೊದಲ ಬಾರಿಗೆ “ಪ್ರೆಸಿಡೆಂಟ್ ಆಫ್ ಇಂಡಿಯಾ” (President of India) ಎಂಬುದರ ಬದಲಿಗೆ”ಭಾರತದ ರಾಷ್ಟ್ರಪತಿ” (President of Bharat)ಎಂದು ಬರೆಯಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ G20 ವಿದೇಶಿ ನಾಯಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು ಅದರಲ್ಲಿ “ಪ್ರೆಸಿಡೆಂಟ್ ಆಫ್ ಇಂಡಿಯಾ” ಬದಲಿಗೆ “ಭಾರತದ ರಾಷ್ಟ್ರಪತಿ ಎಂದು ಬರೆಯಲಾಗಿದೆ. ಆದಾಗ್ಯೂ, ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಇಂಡಿಯಾ ಬದಲು ಭಾರತ್ ಎಂದು ಬದಲಿಸಿರುವುದು ಇದೇ ಮೊದಲು. “ಭಾರತ್” ಎಂಬ ಪದವು ಸಂವಿಧಾನದಲ್ಲಿಯೂ ಇದೆ ಎಂದು ಅಧಿಕಾರಿಗಳು ಗಮನಸೆಳೆದಿದ್ದಾರೆ. “ಇಂಡಿಯಾ ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಅದು ಸಂವಿಧಾನದ 1 ನೇ ವಿಧಿಯಲ್ಲಿ ಹೇಳುತ್ತದೆ.

ಸಾವಿರಾರು ವರ್ಷಗಳಿಂದ ಭಾರತದ G20 ಪ್ರೆಸಿಡೆನ್ಸಿಯಲ್ಲಿ ಅದರ ಶ್ರೀಮಂತ ಪ್ರಜಾಸತ್ತಾತ್ಮಕ ನೀತಿಯನ್ನು ಹೈಲೈಟ್ ಮಾಡಲು “ಭಾರತ್, ಪ್ರಜಾಪ್ರಭುತ್ವದ ತಾಯಿ” ಎಂಬ ಶೀರ್ಷಿಕೆಯಡಿಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾದ G20 ಕಿರುಪುಸ್ತಕದಲ್ಲಿ ಭಾರತ್ ಎಂದು ಬಳಸಲಾಗಿದೆ. ಭಾರತವೆಂಬ ಇಂಡಿಯಾದಲ್ಲಿ, ಆಡಳಿತದಲ್ಲಿ ಜನರ ಒಪ್ಪಿಗೆಯನ್ನು ತೆಗೆದುಕೊಳ್ಳುವುದು ಆರಂಭಿಕ ದಾಖಲಿತ ಇತಿಹಾಸದಿಂದಲೂ ಜೀವನದ ಭಾಗವಾಗಿದೆ ಎಂದು ಕಿರುಪುಸ್ತಕದಲ್ಲಿ ಹೇಳಲಾಗಿದೆ.

ಭಾರತ್ ಎಂಬ ಹೆಸರಿನ ಬಗ್ಗೆ ಟ್ವೀಟ್ ಮಾಡಿದವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮೊದಲಿಗರು. “ರಿಪಬ್ಲಿಕ್ ಆಫ್ ಭಾರತ್ – ನಮ್ಮ ನಾಗರೀಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದರೆ, ರಾಷ್ಟ್ರಪತಿಗಳ ಆಹ್ವಾನಕ್ಕೆ ಪ್ರತಿಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಧಿಕೃತ ಜಿ 20 ಶೃಂಗಸಭೆಯ ಆಹ್ವಾನಗಳಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ‘ಭಾರತದ ರಾಷ್ಟ್ರಪತಿ’ ಎಂದು ಉಲ್ಲೇಖಿಸಿರುವ ಬಿಜೆಪಿಯ ಇತ್ತೀಚಿನ ಕ್ರಮವು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿಯು ಇಂಡಿಯಾವನ್ನು ಹೇಗೆ ತೆಗೆದು ಹಾಕುತ್ತದೆ? ದೇಶವು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ; ಇದು 135 ಕೋಟಿ ಭಾರತೀಯರಿಗೆ ಸೇರಿದ್ದು. ನಮ್ಮ ರಾಷ್ಟ್ರೀಯ ಗುರುತು ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ, ಅದು ಹುಚ್ಚಾಟಿಕೆ ಮತ್ತು ಕಲ್ಪನೆಗಳ ಮೇಲೆ ಮಾರ್ಪಾಡು ಮಾಡಲಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಿರುಗೇಟು ನೀಡಿದ್ದಾರೆ.


ಎರಡು ದಿನಗಳ ಹಿಂದೆಯಷ್ಟೇ ಆಡಳಿತ ಪಕ್ಷದ ಸೈದ್ಧಾಂತಿಕ ಗುರುವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್) ಇಂಡಿಯಾವನ್ನು ಭಾರತ ಎಂದು ಕರೆಯಬೇಕೆಂಬ ಸಲಹೆ ಬಂದಿತ್ತು. ನಾವು ಇಂಡಿಯಾ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಭಾರತವನ್ನು ಬಳಸಲು ಪ್ರಾರಂಭಿಸಬೇಕು. ಕೆಲವೊಮ್ಮೆ ನಾವು ಇಂಗ್ಲಿಷ್ ಮಾತನಾಡುವವರಿಗೆ ಅರ್ಥವಾಗುವಂತೆ ನಾವು ಇಂಡಿಯಾ ಬಳಸುತ್ತೇವೆ. ಆದರೆ, ನಾವು ಇದನ್ನು ಬಳಸುವುದನ್ನು ನಿಲ್ಲಿಸಬೇಕು. ಭಾರತ ದೇಶದ ಹೆಸರು ಉಳಿಯುತ್ತದೆ. ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಭಾರತ್, ಮಾತನಾಡುವ ಮತ್ತು ಬರಹದಲ್ಲಿ ಭಾರತ್ ಎಂದು ಹೇಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ? ಯಾರು ಗೈರು?

ಜುಲೈನಲ್ಲಿ ಪ್ರತಿಪಕ್ಷದ ಮೈತ್ರಿಯು ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಸಂಕ್ಷಿಪ್ತ ರೂಪವನ್ನು ಅಳವಡಿಸಿಕೊಂಡ ನಂತರ ಇಂಡಿಯಾ ವರ್ಸಸ್ ಭಾರತ್ ಚರ್ಚೆ ತೀವ್ರಗೊಂಡಿತು. ಎನ್‌ಡಿಎ ಮತ್ತು ಇಂಡಿಯಾ ನಡುವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡಿಯಾ ನಡುವೆ, ಅವರ (ಬಿಜೆಪಿ) ಸಿದ್ಧಾಂತ ಮತ್ತು ಇಂಡಿಯಾದ ನಡುವೆ ಹೋರಾಟವಿದೆ. ಯಾರಾದರೂ ಇಂಡಿಯಾದ ವಿರುದ್ಧ ನಿಂತಾಗ, ಯಾರು ಗೆಲ್ಲುತ್ತಾರೆ ಎಂದು ನಿಮಗೆ ತಿಳಿದಿದೆ ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಇಂಡಿಯಾ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ತಮ್ಮ ಪಾಪಗಳನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. “ಬಡವರ ವಿರುದ್ಧ ಅವರು ಹೇಗೆ ಸಂಚು ರೂಪಿಸಿದರು ಎಂಬುದನ್ನು ಮರೆಮಾಡಲು ಅವರು ತಮ್ಮ ಹೆಸರನ್ನು ಯುಪಿಎಯಿಂದ ಇಂಡಿಯಾ ಎಂದು ಬದಲಾಯಿಸಿದ್ದಾರೆ .ಇಂಡಿಯಾ ಎಂಬ ಹೆಸರು ತಮ್ಮ ದೇಶಪ್ರೇಮವನ್ನು ತೋರಿಸಲು ಅಲ್ಲ ಆದರೆ ದೇಶವನ್ನು ದೋಚುವ ಉದ್ದೇಶದಿಂದ ಮಾಡಿದ್ದು ಎಂದು ಮೋದಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Tue, 5 September 23