Rahul Gandhi Twitter: ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯ; ಸತ್ಯಮೇವ ಜಯತೇ ಎಂದ ಕಾಂಗ್ರೆಸ್

| Updated By: ಸುಷ್ಮಾ ಚಕ್ರೆ

Updated on: Aug 14, 2021 | 1:49 PM

Twitter India | ಭಾರತದ ಟ್ವಿಟ್ಟರ್​ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಮರುಸ್ಥಾಪಿಸಲಾಗಿದೆ.

Rahul Gandhi Twitter: ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯ; ಸತ್ಯಮೇವ ಜಯತೇ ಎಂದ ಕಾಂಗ್ರೆಸ್
ರಾಹುಲ್ ಗಾಂಧಿ
Follow us on

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 9 ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ತಮ್ಮ ಟ್ವಿಟ್ಟರ್​ ಪೇಜಿನಲ್ಲಿ ಹಂಚಿಕೊಳ್ಳುವ ಮೂಲಕ ಟ್ವಿಟ್ಟರ್​ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ (Congress) ಆಕ್ರೋಶ ಹೊರಹಾಕಿತ್ತು. ಇಂದು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯವಾಗಿದ್ದು, ಅವರ ಜೊತೆಗೆ ಕಾಂಗ್ರೆಸ್​ನ ಎಲ್ಲ ನಾಯಕರ ಟ್ವಿಟ್ಟರ್​ ಖಾತೆಯನ್ನು ಕೂಡ ಮರುಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸತ್ಯಮೇವ ಜಯತೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್​ನ ಎಲ್ಲ ನಾಯಕರ ಟ್ವಿಟ್ಟರ್​ ಖಾತೆಗಳೂ ಮತ್ತೆ ಸಕ್ರಿಯಗೊಂಡಿದೆ. ನಾವು ನಿಯಮ ಉಲ್ಲಂಘನೆ ಮಾಡಿದ್ದೇ ಆದರೆ ಈಗ ಯಾಕೆ ಎಲ್ಲ ನಾಯಕರ ಟ್ವಿಟ್ಟರ್​ ಖಾತೆಗಳನ್ನು ಮರುಸ್ಥಾಪಿಸಲಾಗಿದೆ ಎಂಬುದಕ್ಕೆ ಟ್ವಿಟ್ಟರ್​ ಯಾವುದೇ ಕಾರಣ ನೀಡಿಲ್ಲ. ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಖಾತೆಗಳ ಉಸ್ತುವಾರಿ ರೋಹನ್ ಗುಪ್ತಾ ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾದವರ ವಿಳಾಸ ಅಥವಾ ಆಕೆಯ ಕುಟುಂಬದ ಸದಸ್ಯರ ವಿವರಗಳು ಸೇರಿದಂತೆ ಅವರ ಗುರುತನ್ನು ಬಹಿರಂಗಪಡಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ರಾಹುಲ್ ಗಾಂಧಿ ಮೃತ ಬಾಲಕಿಯ ತಂದೆ-ತಾಯಿ, ಕುಟುಂಬಸ್ಥರನ್ನು ಭೇಟಿ ಮಾಡಿದ ವೇಳೆ ತೆಗೆದ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಾಕಿಕೊಂಡಿದ್ದರು. ಟ್ವಿಟ್ಟರ್​ನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಕಾಂಗ್ರೆಸ್​ನ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು. ಇದೀಗ ಅವೆಲ್ಲವೂ ಮತ್ತೆ ಸಕ್ರಿಯಗೊಂಡಿವೆ.

9 ವರ್ಷದ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಶೇರ್ ಮಾಡಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಕಳೆದ ವಾರ ಬ್ಲಾಕ್ ಮಾಡಲಾಗಿತ್ತು. ಅದಾದ ಬಳಿಕ ಇದೀಗ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಖಾತೆಗಳ ಉಸ್ತುವಾರಿ ರೋಹನ್ ಗುಪ್ತ, ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಸುಮಾರು 50 ಸಾವಿರ ಉನ್ನತ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಕೇಂದ್ರ ಸರ್ಕಾರದ ನಾಯಕರ ಒತ್ತಡದ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟ್ಟರ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಟ್ವಿಟ್ಟರ್​ ವಿರುದ್ಧ ಕಾಂಗ್ರೆಸ್ ನಾಯಕರು ಗಂಭೀರವಾಗಿ ಆರೋಪ ಮಾಡಿದ ಬಳಿಕ ಟ್ವಿಟ್ಟರ್​ ಇಂಡಿಯಾ ಮುಖ್ಯಸ್ಥರಾದ ಮನೀಶ್ ಮಹೇಶ್ವರಿ ಅವರನ್ನು ಟ್ವಿಟ್ಟರ್​ ಸಂಸ್ಥೆ ಭಾರತದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿತ್ತು. ಮನೀಶ್ ಕೇಂದ್ರ ಸರ್ಕಾರದ ಒತ್ತಡದಿಂದ ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ ಎಂಬ ಆರೋಪ ಎದುರಾಗಿದ್ದರಿಂದ ಅವರನ್ನು ವರ್ಗಾವಣೆ ಮಾಡಿ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕಂದಾಯ ಕಾರ್ಯತಂತ್ರ ವಿಭಾಗದ ನಿರ್ದೇಶಕನ ಹುದ್ದೆ ನೀಡಲಾಗಿತ್ತು. ಅದಾದ ಬೆನ್ನಲ್ಲೇ ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಟ್ವಿಟ್ಟರ್​ ಖಾತೆಯನ್ನು ಮರುಸ್ಥಾಪಿಸಲಾಗಿದೆ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತ

Rahul gandhi: ರಾಹುಲ್ ಗಾಂಧಿ ದಿಢೀರನೇ ರಾಜಕೀಯವಾಗಿ ಸಕ್ರಿಯ; ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಸನ್ನದ್ಧ

(Twitter Unlocks Rahul Gandhi Twitter Account Congress Tweets Satyameva Jayate_

Published On - 1:42 pm, Sat, 14 August 21