ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಬೃಹತ್ ಎನ್‌ಕೌಂಟರ್; ಪಾಕ್​ ಮೂಲದ ಇಬ್ಬರು ಜೈಶ್ ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ 'ಜೈಶ್-ಎ-ಮೊಹಮ್ಮದ್' ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದೇ ವೇಳೆ ಕಾರ್ಯಾಚರಣೆಯ ಸ್ಥಳದಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ನಡೆಸಿವೆ.

ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಬೃಹತ್ ಎನ್‌ಕೌಂಟರ್; ಪಾಕ್​ ಮೂಲದ ಇಬ್ಬರು ಜೈಶ್ ಉಗ್ರರ ಹತ್ಯೆ
ಉಧಂಪುರದಲ್ಲಿ ಬೃಹತ್ ಎನ್‌ಕೌಂಟರ್
Image Credit source: TV9

Updated on: Sep 17, 2026 | 6:21 PM

ಜಮ್ಮು, ಸೆಪ್ಟೆಂಬರ್ 17: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದ ‘ಆಪರೇಷನ್ ಸೋಹನ್’ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಯಾದ ಇಬ್ಬರು ಭಯೋತ್ಪಾದಕರು ಪಾಕಿಸ್ತಾನ ಮೂಲದ ‘ಜೈಶ್-ಎ-ಮೊಹಮ್ಮದ್’ ಸಂಘಟನೆಗೆ ಸೇರಿದವರೆಂದು ಗುರುತಿಸಲಾಗಿದೆ. ಹತ್ಯೆಯಾದ ಉಗ್ರರನ್ನು ಸದ್ದಾಂ ಮತ್ತು ಮುಸ್ತಫಾ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಪಾಕಿಸ್ತಾನಿ ಪ್ರಜೆಗಳು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೃಢಪಡಿಸಿದ್ದಾರೆ.

ಮಾರಕಾಸ್ತ್ರಗಳ ಬೃಹತ್ ಸಂಗ್ರಹ ವಶಕ್ಕೆ:

ಎನ್‌ಕೌಂಟರ್ ನಡೆದ ಸ್ಥಳದಿಂದ ಭದ್ರತಾ ಪಡೆಗಳು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ವಶಪಡಿಸಿಕೊಂಡ ವಸ್ತುಗಳಲ್ಲಿ 4 ಮ್ಯಾಗಜೀನ್‌ಗಳನ್ನೊಳಗೊಂಡ 1 ಎಕೆ ಅಸಲ್ಟ್ ರೈಫಲ್, 3 ಮ್ಯಾಗಜೀನ್‌ಗಳನ್ನೊಳಗೊಂಡ 1 ಎಂ4 ಕಾರ್ಬೈನ್, 2 ಮ್ಯಾಗಜೀನ್‌ಗಳನ್ನೊಳಗೊಂಡ 1 ಗ್ಲಾಕ್ ಪಿಸ್ತೂಲ್, 4 ಹ್ಯಾಂಡ್ ಗ್ರೆನೇಡ್ ಕೂಡ ಸೇರಿವೆ.

 

ಇದನ್ನೂ ಓದಿ: ಭಾರತದ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಗೆ ಸೇರಿದ ಪಾಕಿಸ್ತಾನದ ಶಹಜಾದ್ ಭಟ್ಟಿ ನೆಟ್‌ವರ್ಕ್; ಸರ್ಕಾರ ಘೋಷಣೆ

ತೀವ್ರ ಶೋಧ ಕಾರ್ಯಾಚರಣೆ:

ಉಗ್ರರ ಇರುವಿಕೆಯ ಕುರಿತು ನಿಖರ ಮಾಹಿತಿ ಲಭ್ಯವಾದ ನಂತರ ರಾತ್ರಿಯೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ನಡೆಸಿದಾಗ ಈ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತ್ತು. ಈ ಉಗ್ರರ ಚಲನವಲನಗಳು ಮತ್ತು ಅವರು ನಡೆಸಲು ಯೋಜಿಸಿದ್ದ ದಾಳಿಗಳ ಕುರಿತು ಮತ್ತಷ್ಟು ತನಿಖೆ ಮುಂದುವರಿದಿದೆ. ಈ ಪ್ರದೇಶದಲ್ಲಿ ಇನ್ನುಳಿದ ಉಗ್ರರು ಅಥವಾ ಬೆಂಬಲಿಗರು ಅಡಗಿದ್ದಾರೆಯೇ ಎಂದು ಪತ್ತೆಹಚ್ಚಲು ಡ್ರೋನ್ ಮತ್ತು ಹೆಲಿಕಾಪ್ಟರ್ ತಂತ್ರಜ್ಞಾನ ಬಳಸಿ ಕೂಂಬಿಂಗ್ ಕಾರ್ಯಚರಣೆಯನ್ನು ತೀವ್ರಗೊಳಿಸಲಾಗಿದೆ.


ಇದನ್ನೂ ಓದಿ: ಜಾಗತಿಕ ಸಮುದಾಯವನ್ನು ಮತ್ತೊಮ್ಮೆ ದಾರಿತಪ್ಪಿಸಲು ಪಾಕಿಸ್ತಾನ ಯತ್ನ: ಉಗ್ರ ಮಸೂದ್ ಅಜರ್‌ ತಲೆಗೆ 70 ಲಕ್ಷ ಬಹುಮಾನ ಘೋಷಣೆ

ಸುರಿಯುವ ಮಳೆಯಲ್ಲೂ ಕಾರ್ಯಾಚರಣೆ:

ದಟ್ಟ ಕತ್ತಲು, ಸುರಿಯುವ ಮಳೆ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶದ ನಡುವೆಯೂ ಸಶಸ್ತ್ರ ಪಡೆಗಳು ಉಗ್ರರಿದ್ದ ಅಡಗುದಾಣವನ್ನು ಯಶಸ್ವಿಯಾಗಿ ಸುತ್ತುವರಿದವು. ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರರು ತೀವ್ರ ಗುಂಡಿನ ದಾಳಿ ನಡೆಸಿದಾಗ, ಪಡೆಗಳು ಪ್ರತ್ಯುತ್ತರ ನೀಡಿ ಇಬ್ಬರನ್ನೂ ಹತ್ಯೆ ಮಾಡಿದವು. ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದನಾ ಜಾಲಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಭದ್ರತಾ ಪಡೆಗಳು ಸತತ ನಿಗ್ರಹ ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us