AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2.44 ಲಕ್ಷ ಸರ್ಕಾರಿ ಉದ್ಯೋಗಿಗಳ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ, ಕಾರಣವೇನು?

ಆಸ್ತಿ ವಿವರಗಳನ್ನು ನೀಡದ ಕಾರಣ ಉತ್ತರ ಪ್ರದೇಶ ಸರ್ಕಾರದ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಆಗಸ್ಟ್ ತಿಂಗಳ ಸಂಬಳವನ್ನು ತಡೆಹಿಡಿಯಲಾಗಿದೆ.ರಾಜ್ಯ ಸರ್ಕಾರಿ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಯನ್ನು ಆಗಸ್ಟ್ 31 ರೊಳಗೆ ಪೋರ್ಟಲ್‌ನಲ್ಲಿ ಘೋಷಿಸಲು ಕೇಳಿಕೊಳ್ಳಲಾಗಿತ್ತು. ಇದನ್ನು ಮಾಡದಿದ್ದರೆ ನೌಕರರ ಬಡ್ತಿ ಮೇಲೂ ತೊಂದರೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2.44 ಲಕ್ಷ ಸರ್ಕಾರಿ ಉದ್ಯೋಗಿಗಳ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ, ಕಾರಣವೇನು?
ಸರ್ಕಾರಿ ಉದ್ಯೋಗಿಗಳುImage Credit source: G.Connect.in
ನಯನಾ ರಾಜೀವ್
|

Updated on: Sep 04, 2024 | 8:00 AM

Share

ಉತ್ತರ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ದೊಡ್ಡ ಆಘಾತ ಎದುರಾಗಿದೆ. ಯೋಗಿ ಸರ್ಕಾರ ರಾಜ್ಯದ 2.44 ಲಕ್ಷ ಸರ್ಕಾರಿ ನೌಕರರ ವೇತನವನ್ನು ತಡೆಹಿಡಿದಿದೆ. ಇತ್ತೀಚೆಗೆ, ಎಲ್ಲಾ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31 ರೊಳಗೆ ನೀಡುವಂತೆ ಕೇಳಲಾಗಿತ್ತು. ಆದರೆ ಇದುವರೆಗೂ ಈ ನೌಕರರು ವಿವರ ನೀಡದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇತ್ತೀಚೆಗಷ್ಟೇ ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಸರ್ಕಾರಿ ನೌಕರರು ಆಗಸ್ಟ್ 31 ರೊಳಗೆ ಆಸ್ತಿ ವಿವರಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದರು. ಸರ್ಕಾರಿ ನೌಕರರು ಚರ ಮತ್ತು ಸ್ಥಿರ ಆಸ್ತಿಗಳ ವಿವರ ನೀಡುವಂತೆ ಸೂಚಿಸಲಾಗಿದೆ. ಮಾನವ ಸಂಪದ ಪೋರ್ಟಲ್‌ನಲ್ಲಿ ಉದ್ಯೋಗಿಗಳು ಈ ವಿವರಗಳನ್ನು ನೀಡಬೇಕಾಗಿತ್ತು.

ಆದರೆ ಇದಾದ ನಂತರವೂ ಮಾನವ ಸಂಪದ ಪೋರ್ಟಲ್‌ನಲ್ಲಿ ಕೇವಲ ಶೇಕಡಾ 71 ರಷ್ಟು ಉದ್ಯೋಗಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ನೀಡಿದ್ದಾರೆ. ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಆಸ್ತಿ ವಿವರ ನೀಡದವರಲ್ಲಿ ಹೆಚ್ಚಿನವರು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ನೌಕರರು. ಇದಲ್ಲದೇ ಕಂದಾಯ ಇಲಾಖೆಯ ಬಹುತೇಕ ನೌಕರರು ಆಸ್ತಿ ವಿವರ ನೀಡಿಲ್ಲ. ಈಗ ವಿವರ ನೀಡದವರ ವೇತನ ನಿಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯಿಂದ ಸೂಚನೆ ಬಂದಿದೆ.

ಆಗಸ್ಟ್ 17 ರಂದು ಈ ಆದೇಶವನ್ನು ಹೊರಡಿಸಿದಾಗ, ಕೇವಲ 131748 ಅಂದರೆ 15 ಪ್ರತಿಶತದಷ್ಟು ರಾಜ್ಯ ನೌಕರರು ತಮ್ಮ ಆಸ್ತಿಯನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ಡಿಜಿಪಿ ಕೇಂದ್ರ ಕಚೇರಿಯು ತಮ್ಮ ಸಿಬ್ಬಂದಿಗೆ ಆಸ್ತಿ ವಿವರ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ನೇಮಕಾತಿ ಇಲಾಖೆಗೆ ಪತ್ರ ಕಳುಹಿಸಿದೆ. ಹಬ್ಬ ಹರಿದಿನಗಳು ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಯಿಂದಾಗಿ ಹಲವು ಪೊಲೀಸ್ ಸಿಬ್ಬಂದಿ ತಮ್ಮ ಆಸ್ತಿ ವಿವರಗಳನ್ನು ಸಕಾಲಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ದಿನಾಂಕವನ್ನು ಗೃಹ ಇಲಾಖೆಗೆ ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.

ಆಗಸ್ಟ್ ತಿಂಗಳ ವೇತನವನ್ನು ತಡೆಹಿಡಿಯಲಾದ ಅಧಿಕಾರಿಗಳು ಮತ್ತು ನೌಕರರು ಅವರ ಆಸ್ತಿ ವಿವರಗಳನ್ನು ನೀಡಿದ ನಂತರವೇ ವೇತನವನ್ನು ಬಿಡುಗಡೆ ಮಾಡಲಾಗುತ್ತದೆ. ಅವರ ಆಸ್ತಿ ವಿವರಗಳನ್ನು ಪಡೆದ ನಂತರ, ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಅವರ ವೇತನವನ್ನು ಪಾವತಿಸುವ ನಿರ್ಧಾರವನ್ನು ಸಂಬಂಧಪಟ್ಟ ಇಲಾಖೆ ತೆಗೆದುಕೊಳ್ಳುತ್ತದೆ.

ಆಸ್ತಿ ಘೋಷಣೆಯ ಗಡುವನ್ನು ಈಗ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಏತನ್ಮಧ್ಯೆ, ಪ್ರತಿಪಕ್ಷ ಸಮಾಜವಾದಿ ಪಕ್ಷ (ಎಸ್‌ಪಿ) ಈ ಕ್ರಮದ ಸಮಯವನ್ನು ಪ್ರಶ್ನಿಸಿದೆ. ಹಲವು ಬಾರಿ ಗಡುವು ವಿಸ್ತರಣೆ ಮಾಡಿದರೂ ರಾಜ್ಯ ಸರ್ಕಾರ ಏಕೆ ಆದೇಶ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 6.02 ಲಕ್ಷ ಉದ್ಯೋಗಿಗಳು ತಮ್ಮ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ವಿವರ ನೀಡದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ