ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಪುಟ ಒಪ್ಪಿಗೆ

|

Updated on: Feb 04, 2024 | 8:20 PM

ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸಂಪುಟ ಒಪ್ಪಿಗೆ ನೀಡಿದೆ. ಶನಿವಾರ (ಫೆ.03) ರಂದು ನಡೆದ ಸಂಪುಟದಲ್ಲಿ ಜಾರಿಗೆ ಸರ್ವಸಮ್ಮತಿ ಸಿಕ್ಕಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಧಾಮಿ ಇಂದು (ರವಿವಾರ) ವಿಶೇಷ ಸಂಪುಟ ಸಭೆ ಕರೆದಿದ್ದರು.

ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಪುಟ ಒಪ್ಪಿಗೆ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
Follow us on

ಡೆಹ್ರಾಡೂನ್​, ಫೆಬ್ರವರಿ 04: ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಉತ್ತರಾಖಂಡ (Uttarakhand) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸಂಪುಟ ಒಪ್ಪಿಗೆ ನೀಡಿದೆ. ನಿನ್ನೆ (ಫೆ.03) ರಂದು ನಡೆದ ಸಂಪುಟದಲ್ಲಿ ಜಾರಿಗೆ ಸರ್ವಸಮ್ಮತಿ ಸಿಕ್ಕಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಧಾಮಿ ಇಂದು (ರವಿವಾರ) ವಿಶೇಷ ಸಂಪುಟ ಸಭೆ ಕರೆದಿದ್ದರು. ಸಭೆಯಲ್ಲಿ ಯುಸಿಸಿ ಜಾರಿಗೆ ಸಚಿವರು ಸರ್ವಾನುಮತಕ್ಕೆ ಬಂದಿದ್ದಾರೆ. ನಾಳೆ (ಫೆ.05) ರಂದು ಆರಂಭವಾಗಲಿರುವ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಯುಸಿಸಿಯನ್ನು ಮಂಡಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ. ಒಂದು ವೇಳೆ ಅಧಿವೇಶನದಲ್ಲಿ ವಿಧೇಯಕ ಅಂಗೀಕಾರಗೊಂಡಲ್ಲಿ, ಯುಸಿಸಿ ಜಾರಿಗೊಳಿಸದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಲಿದೆ.

ವರದಿ ಸಿದ್ದಪಡಿಸಲು ಸಮಿತಿ ರಚನೆ

ಯುಸಿಸಿ ವರದಿ ಸಿದ್ದಪಡಿಸಲು ಉತ್ತರಾಖಂಡ ಸರ್ಕಾರ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್​ ದೇಸಾಯಿ ನೇತೃತ್ವದ ಸಮಿತಿ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಪ್ರಕಾಶ್​ ದೇಸಾಯಿ ಸೇರಿದಂತೆ ಐವರು ಸದಸ್ಯರನ್ನು ಒಳಗೊಂಡಿದ್ದ ಸಮಿತಿ ಶನಿವಾರ (ಫೆ.03) ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ವರದಿಯನ್ನು ಸಲ್ಲಿಕೆ ಮಾಡಿತ್ತು.

ಸಮಿತಿಯು 60 ಸಭೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ಚರ್ಚೆ ನಡೆಸಿ, 2.33 ಲಕ್ಷ ಸಲಹೆಗಳನ್ನು ಸೀಕರಿಸಿತ್ತು. ಇವುಗಳನ್ನು ಆಧರಿಸಿ ಕರಡು ಸಿದ್ಧಪಡಿಸಿ 749 ಪುಟಗಳ ಯುಸಿಸಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಧರ್ಮ, ವೈಯಕ್ತಿಕ ಕಾನೂನುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನೀಡಿದ ಭರವಸೆ ಈಡೇರುವ ಸಮಯ

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ರಾಜ್ಯದ ಜನರಿಗೆ ಯುಸಿಸಿ ಜಾರಿ ಮಾಡುವ ಭರವಸೆ ನೀಡಿತ್ತು. ಇದೀಗ ಯುಸಿಸಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಒಂದು ವೇಳೆ ಯುಸಿಸಿ ಜಾರಿಗೆಯಾದರೇ ಪ್ರಧಾನಿ ನರೇಂದ್ರ ಮೋದಿ ಅವರ ಏಕ ಭಾರತ-ಶ್ರೇಷ್ಠ ಭಾರತ ಕನಸನ್ನು ಉತ್ತರಾಖಂಡ ಸರ್ಕಾರ ನನಸಾಗಿಸಲಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ

ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ, ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.

ಸಂವಿಧಾನದ 44ನೇ ವಿಧಿಯಲ್ಲಿ ಎಲ್ಲ ನಾಗರಿಕರಿಗೂ ಸಮಾನ ಕಾನೂನನ್ನು ಜಾರಿಗೆ ತರಲು ಹೇಳಲಾಗಿದೆ. ಆರ್ಟಿಕಲ್-44 ಅನ್ನು ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ‘ಕ್ರಿಮಿನಲ್ ಕೋಡ್’ ಇದೆ, ಆದರೆ ಏಕರೂಪದ ನಾಗರಿಕ ಕಾನೂನು ಇಲ್ಲ.

ಏಕರೂಪ ನಾಗರಿಕ ಸಂಹಿತೆ, UCC ಭಾರತದಲ್ಲಿ ಎಲ್ಲಾ ಕಡೆಯೂ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ತನ್ನ ನಿರ್ಧಾರಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಹಲವು ಬಾರಿ ಒತ್ತಾಯಿಸಿದೆ.

ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:16 pm, Sun, 4 February 24