AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ

ಖ್ಯಾತ ಹಿಂದಿ ಬರಹಗಾರ ವಿನೋದ್​ ಕುಮಾರ್​​ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. 88 ವರ್ಷದ ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಅವರು 2024ನೇ ಸಾಲಿನ 59ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ. ಇವರು ಛತ್ತೀಸ್‌ಗಢದಿಂದ ಭಾರತದ ಅತ್ಯುನ್ನತ ಸಾಹಿತ್ಯ ಗೌರವವನ್ನು ಪಡೆದ ಮೊದಲ ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 11 ಲಕ್ಷ ರೂ. ನಗದು ಬಹುಮಾನ, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುವ ಈ ಪ್ರಶಸ್ತಿಯನ್ನು ಗೆದ್ದ 12ನೇ ಹಿಂದಿ ಬರಹಗಾರ ಇವರಾಗಿದ್ದಾರೆ.

ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ
Vinod Kumar Shukla
ಸುಷ್ಮಾ ಚಕ್ರೆ
|

Updated on: Mar 22, 2025 | 8:01 PM

Share

ನವದೆಹಲಿ, ಮಾರ್ಚ್ 22: 2024ನೇ ಸಾಲಿನ 59ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾಗಿದ್ದು, ಹಿಂದಿ ಸಾಹಿತಿ ವಿನೋದ್​ ಕುಮಾರ್​​ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. 88 ವರ್ಷದ ಖ್ಯಾತ ಹಿಂದಿ ಬರಹಗಾರ ವಿನೋದ್ ಕುಮಾರ್ ಶುಕ್ಲಾ ಅವರನ್ನು 59ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಛತ್ತೀಸ್‌ಗಢದಿಂದ ಭಾರತದ ಅತ್ಯುನ್ನತ ಸಾಹಿತ್ಯ ಗೌರವವನ್ನು ಪಡೆದ ಮೊದಲ ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಿದ್ಧ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರರಾದ ವಿನೋದ್ ಶುಕ್ಲಾ ಈ ಪ್ರಶಸ್ತಿಯನ್ನು ಪಡೆದ 12ನೇ ಹಿಂದಿ ಸಾಹಿತಿಯಾಗಿದ್ದಾರೆ.

88 ವರ್ಷದ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರರಾದ ವಿನೋದ್ ಶುಕ್ಲಾ ಛತ್ತೀಸ್‌ಗಢದಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಲೇಖಕರಾಗಿದ್ದಾರೆ. ಸಮಕಾಲೀನ ಹಿಂದಿ ಸಾಹಿತ್ಯದಲ್ಲಿ ಅತ್ಯಂತ ವಿಶಿಷ್ಟ ಧ್ವನಿಗಳಲ್ಲಿ ಒಬ್ಬರೆಂದು ವಿನೋದ್ ಶುಕ್ಲಾ ಅವರನ್ನು ಪರಿಗಣಿಸಲಾಗಿದೆ. 11 ಲಕ್ಷ ರೂ. ನಗದು ಬಹುಮಾನ, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುವ ಈ ಪ್ರಶಸ್ತಿಯನ್ನು ಗೆದ್ದ 12ನೇ ಹಿಂದಿ ಬರಹಗಾರ ಇವರಾಗಿದ್ದಾರೆ.

ಇದನ್ನೂ ಓದಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಜನ್ಮದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದು ಏಕೆ?

“ಇದು ತುಂಬಾ ದೊಡ್ಡ ಪ್ರಶಸ್ತಿ. ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ನಾನು ಪ್ರಶಸ್ತಿಗಳಿಗೆ ನಿಜವಾಗಿಯೂ ಗಮನ ಕೊಡಲಿಲ್ಲ. ಜನರು ಆಗಾಗ ಮಾತನಾಡುವಾಗ ನಾನು ಜ್ಞಾನಪೀಠಕ್ಕೆ ಅರ್ಹನೆಂದು ಹೇಳುತ್ತಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯಿಸಲು ಸರಿಯಾದ ಪದಗಳು ನನಗೆ ಎಂದಿಗೂ ಸಿಗಲಿಲ್ಲ” ಎಂದು ವಿನೋದ್ ಶುಕ್ಲಾ ಹೇಳಿದ್ದಾರೆ. “ಬರವಣಿಗೆ ಸಣ್ಣ ಕೆಲಸವಲ್ಲ. ನೀವು ಬರೆಯುತ್ತಿದ್ದರೆ, ಬರೆಯುತ್ತಲೇ ಇರಿ. ನಿಮ್ಮ ಬಗ್ಗೆ ವಿಶ್ವಾಸವಿಡಿ. ಮತ್ತು ನಿಮ್ಮ ಕೃತಿ ಪ್ರಕಟವಾದ ನಂತರ ಇತರರು ಪ್ರತಿಕ್ರಿಯೆ ನೀಡಿದರೆ ಅದರ ಬಗ್ಗೆಯೂ ಗಮನ ಕೊಡಿ” ಎಂದು ಅವರು ಕಿರಿಯ ಬರಹಗಾರರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Padma Awards: 2026ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಾರಂಭ; ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ

ಬರಹಗಾರ್ತಿ ಮತ್ತು ಮಾಜಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜ್ಞಾನಪೀಠ ಆಯ್ಕೆ ಸಮಿತಿಯು ವಿನೋದ್ ಶುಕ್ಲಾ ಅವರ ಹೆಸರನ್ನು ಅಂತಿಮಗೊಳಿಸಿತು. ಈ ಸಭೆಯಲ್ಲಿ ಹಾಜರಿದ್ದ ಇತರ ಸಮಿತಿ ಸದಸ್ಯರಲ್ಲಿ ಮಾಧವ್ ಕೌಶಿಕ್, ದಾಮೋದರ್ ಮೌಜೋ, ಪ್ರಭಾ ವರ್ಮ, ಅನಾಮಿಕಾ, ಎ. ಕೃಷ್ಣ ರಾವ್, ಪ್ರಫುಲ್ ಶಿಲೇದಾರ್, ಜಾನಕಿ ಪ್ರಸಾದ್ ಶರ್ಮಾ ಮತ್ತು ಜ್ಞಾನಪೀಠ ನಿರ್ದೇಶಕ ಮಧುಸೂದನ್ ಆನಂದ್ ಸೇರಿದ್ದಾರೆ. 1961ರಲ್ಲಿ ಸ್ಥಾಪಿಸಲಾದ ಜ್ಞಾನಪೀಠ ಪ್ರಶಸ್ತಿಯನ್ನು ಮೊದಲು ಮಲಯಾಳಂ ಕವಿ ಜಿ. ಶಂಕರ ಕುರುಪ್ ಅವರ ಒಡಕ್ಕುಝಲ್ ಸಂಕಲನಕ್ಕಾಗಿ 1965ರಲ್ಲಿ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ