ವಯನಾಡ್ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: ಮೂವರ ರಕ್ಷಣೆ, ಹಲವರು ಸಿಲುಕಿರುವ ಶಂಕೆ
Wayanad Landslide: ವಯನಾಡ್ನ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಹತ್ವಾಕಾಂಕ್ಷೆಯ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಭಾರಿ ಮಳೆಯಿಂದ ಉಂಟಾದ ಈ ದುರಂತದಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮನೆಗಳು, ವಾಹನಗಳು ಜಖಂಗೊಂಡಿವೆ. ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಯೋಜನೆಯ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ವಯನಾಡ್, ಜುಲೈ 07: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ (Landslide) ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲೇ ಈ ದುರಂತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಆತಂಕ ಎದುರಾಗಿದೆ. ಪ್ರಸ್ತುತ ಸ್ಥಳದಲ್ಲಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
24 ಗಂಟೆಗಳಲ್ಲಿ 265 ಮಿಮೀ ಭಾರಿ ಮಳೆ ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಮೀ ನಷ್ಟು ಭಾರಿ ಮಳೆಯಾಗಿದೆ. ಮಳೆಯ ತೀವ್ರತೆಗೆ ಮೀನಾಕ್ಷಿ ಸೇತುವೆಯ ಬಳಿ ಇರುವ ಗುಡ್ಡ ಕುಸಿದು ಬಿದ್ದಿದೆ. ಭಾರಿ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಸೋಮವಾರದಿಂದಲೇ ಸುರಂಗ ಯೋಜನೆಯ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಿಂದ ಮೂವರ ರಕ್ಷಣೆ ದುರಂತ ಸಂಭವಿಸಿದ ತಕ್ಷಣ, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವ ಮೊದಲೇ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರು ಸುರಂಗ ಯೋಜನೆಯ ಕಾರ್ಮಿಕರಾಗಿದ್ದು, ಅವರು ಅಲ್ಲೇ ಇದ್ದ ವಸತಿಗೃಹದಲ್ಲಿ ತಂಗಿದ್ದರು ಎನ್ನಲಾಗಿದೆ. ಇನ್ನೂ ಎಷ್ಟು ಜನ ಕಾರ್ಮಿಕರು ಅಥವಾ ಸ್ಥಳೀಯರು ಸಿಲುಕಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮತ್ತಷ್ಟು ಓದಿ: ಕಾಶ್ಮೀರದ ದೋಡಾ ಜಿಲ್ಲೆಯ ಹೆದ್ದಾರಿಯಲ್ಲಿ ಭೀಕರ ಭೂಕುಸಿತ; ವಾಹನ ಸಂಚಾರ ಸಂಪೂರ್ಣ ಸ್ಥಗಿತ
ಮನೆಗಳು ಮತ್ತು ವಾಹನಗಳು ಜಖಂ ಗುಡ್ಡ ಕುಸಿದ ರಭಸಕ್ಕೆ ಆ ಪ್ರದೇಶದಲ್ಲಿದ್ದ ಕೆಲವು ವಸತಿ ಮನೆಗಳು, ಹೋಂಸ್ಟೇಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಸುರಂಗ ಯೋಜನೆಯ ಕೆಲಸಕ್ಕಾಗಿ ಬಳಸಲಾಗುತ್ತಿದ್ದ ಹಲವು ಜೆಸಿಬಿ, ಟ್ರಕ್ ಹಾಗೂ ಇತರೆ ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿವೆ. ಹಾನಿಯ ಸಂಪೂರ್ಣ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ.
ಸಚಿವ ಅನಿಲ್ ಕುಮಾರ್ ಹೇಳಿಕೆ ವಿಡಿಯೋ
#WATCH | Thiruvananthapuram | On the Wayanad landslide, Keralam Revenue Minister AP Anil Kumar says, “The rescue operation has already started. A team of 30 NDRF personnel has reached there. We are collecting information about the tragedy and then declare everything.” pic.twitter.com/S4Q1x29G4O
— ANI (@ANI) July 7, 2026
ಎನ್ಡಿಆರ್ಎಫ್ ನೆರವು ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಗ್ನಿಶಾಮಕ ದಳದ ಜೊತೆಗೆ ಕೇರಳ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಕೇರಳ ಸಚಿವ ಟಿ. ಸಿದ್ದಿಕ್ ಮತ್ತು ವಯನಾಡ್ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಏನಿದು ಸುರಂಗ ರಸ್ತೆ ಯೋಜನೆ? ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳ ನಡುವಿನ ಸಂಚಾರ ದೂರವನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಸುಧಾರಿಸಲು ಕೇರಳ ಸರ್ಕಾರವು ಈ ‘ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆ’ಯನ್ನು ಹಮ್ಮಿಕೊಂಡಿದೆ. ಈ ಪ್ರಮುಖ ಮೂಲಸೌಕರ್ಯ ಯೋಜನೆಯ ಕಾಮಗಾರಿ ಕಳೆದ ವರ್ಷವಷ್ಟೇ ಆರಂಭವಾಗಿತ್ತು. ಸದ್ಯದ ಭೂಕುಸಿತದಿಂದಾಗಿ ಯೋಜನಾ ಸ್ಥಳಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Tue, 7 July 26




