ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನನ್ನ ಕರೆ ಸ್ವೀಕರಿಸುವುದಿಲ್ಲ: ರಾಜ್ಯಪಾಲರಿಂದ ಗಂಭೀರ ಆರೋಪ

ಜಗದೀಪ್​ ಧನಕರ್​ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್​ ಬಿಮನ್​ ಬ್ಯಾನರ್ಜಿ, ವಿಧಾನಸಭೆಯಲ್ಲಿ ರಾಜ್ಯಪಾಲರು ಇಂಥ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಅವರು ರಾಜಭವನದಲ್ಲಿ ಕುಳಿತು ಆರೋಪ ಮಾಡಲಿ. ಸುದ್ದಿಗೋಷ್ಠಿ ನಡೆಸಿ ಮಾಡಲಿ ಎಂದಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನನ್ನ ಕರೆ ಸ್ವೀಕರಿಸುವುದಿಲ್ಲ: ರಾಜ್ಯಪಾಲರಿಂದ ಗಂಭೀರ ಆರೋಪ
ಜಗದೀಪ್​ ಧನ​ಕರ್​
Edited By:

Updated on: Jan 25, 2022 | 3:02 PM

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನಕರ್ (West Bengal Governor Jagdeep Dhankhar) ​ ಮತ್ತು ಅಲ್ಲಿನ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಹಲವು ದಿನಗಳಿಂದಲೂ ಇದೆ. ಜಗದೀಪ್ ಧನಕರ್​​ ಅವರು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ವಿರುದ್ಧ ಸದಾ ಒಂದಿಲ್ಲೊಂದು ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗೇ, ಈಗ ಮತ್ತೆ ಕಿಡಿಕಾರಿದ್ದು, ರಾಜ್ಯ ಸರ್ಕಾರದ ಅಧಿಕಾರಿಗಳು ಯಾರೂ ಕಾನೂನು ಪರಿಪಾಲನೆ ಮಾಡುತ್ತಿಲ್ಲ. ನಮ್ಮ ರಾಜಭವನ ಏನು ಮಾಡಬಹುದು  ಎಂಬುದೂ ಕೂಡ ಅವರಿಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್​ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಾನೂನಿನ ಪಾಲನೆ ಮಾಡಬೇಕು. ಪ್ರತಿ ಕ್ಷೇತ್ರಕ್ಕೂ ಅದರದ್ದೇ ಆದ ಕಾನೂನು ಇದೆ. ಅದರಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದರೆ ಇಲ್ಲಿನ ಸರ್ಕಾರಿ ಅಧಿಕಾರಿಗಳು ಅದನ್ನು ಮರೆತುಬಿಟ್ಟಿದ್ದಾರೆ.  ಇನ್ನು ನಾನು ಕರೆ ಮಾಡಿದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳ ವಿಧಾನಸಭೆ ಸ್ಪೀಕರ್​ ಬಿಮನ್​ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ ಅವರು, ಇಲ್ಲಿನ ಸ್ಪೀಕರ್ ಕೂಡ ಕಾನೂನಿಗೆ ಮೀರಿ ವರ್ತನೆ ಮಾಡುತ್ತಿದ್ದಾರೆ. ಕಾನೂನಿಗಿಂತ ತಾವೇ ದೊಡ್ಡವರು ಎನ್ನುತ್ತಿದ್ದಾರೆ. ನನಗೆ ನಿಜಕ್ಕೂ ಆಶ್ಚರ್ಯವಾಗಿದೆ ಎಂದು ಹೇಳಿದರು.

ಹಾಗೇ, ಕೆಲವು ಮಸೂದೆಗಳನ್ನು ರಾಜ್ಯಪಾಲರು ಹಿಡಿದಿಟ್ಟುಕೊಳ್ಳುತ್ತಾರೆ ಎಂಬ ಆರೋಪ ಸರ್ಕಾರದ ಜನಪ್ರತಿನಿಧಿಗಳಿಂದ ಬಂದಿರುವ ಬಗ್ಗೆ ಮಾತನಾಡಿದ ಜಗದೀಪ್ ಧನ್​ಕರ್​, ನಾನು ಇದುವರೆಗೂ ಯಾವುದೇ ಬಿಲ್​​ನ್ನೂ ಹಿಡಿದಿಟ್ಟುಕೊಂಡಿಲ್ಲ. ನನ್ನ ಟೇಬಲ್​ ಮೇಲೆ ಯಾವುದೂ ಬಾಕಿ ಇಲ್ಲ. ಇದುವರೆಗೂ ನನ್ನ ಟೇಬಲ್​​ಗೆ ಬಂದ ಎಲ್ಲ ಬಿಲ್​​ಗಳನ್ನೂ 48 ತಾಸುಗಳಲ್ಲಿ ಕ್ಲಿಯರ್ ಮಾಡಿದ್ದೇನೆ. ನನ್ನ ಟೇಬಲ್​ಗೆ ಬಾರದ ಬಿಲ್​ ಹಿಡಿದಿಟ್ಟುಕೊಂಡ ಆರೋಪ ಮಾಡುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ಜಗದೀಪ್​ ಧನಕರ್​ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್​ ಬಿಮನ್​ ಬ್ಯಾನರ್ಜಿ, ವಿಧಾನಸಭೆಯಲ್ಲಿ ರಾಜ್ಯಪಾಲರು ಇಂಥ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಅವರು ರಾಜಭವನದಲ್ಲಿ ಕುಳಿತು ಆರೋಪ ಮಾಡಲಿ. ಸುದ್ದಿಗೋಷ್ಠಿ ನಡೆಸಿ ಮಾಡಲಿ. ಅದು ಬಿಟ್ಟು ಹೀಗೆ ಅಸೆಂಬ್ಲಿಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಇದು ಅಸಂವಿಧಾನಿಕ ಪ್ರಕ್ರಿಯೆ ಎಂದಿದ್ದಾರೆ.  ಅಷ್ಟೇ ಅಲ್ಲ, ಪ್ರಮುಖ ಮಸೂದೆಗಳನ್ನು ರಾಜ್ಯಪಾಲರು ಹಿಡಿದಿಟ್ಟ ಬಗ್ಗೆ ನಾವು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದು, ಅದು ಸತ್ಯ ಕೂಡ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್​; ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ Boycott Amazon ಹ್ಯಾಷ್​ಟ್ಯಾಗ್​

Published On - 3:01 pm, Tue, 25 January 22