West Bengal Assembly Elections 2021: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ನೇತಾರ ಸುವೇಂದು ಅಧಿಕಾರಿ

|

Updated on: Mar 12, 2021 | 1:26 PM

Suvendu Adhikari Files Nomination: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

West Bengal Assembly Elections 2021: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ನೇತಾರ ಸುವೇಂದು ಅಧಿಕಾರಿ
ನಾಮಪತ್ರ ಸಲ್ಲಿಸಿದ ಸುವೇಂದು ಅಧಿಕಾರಿ
Follow us on

ನಂದಿಗ್ರಾಮ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಲ್ಲಿ ಸ್ಪರ್ಧಿಸಲಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಂದಿಗ್ರಾಮದಲ್ಲಿ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಸ್ಪರ್ಧಿಸಲಿದ್ದಾರೆ.  ನಾಮಪತ್ರ ಸಲ್ಲಿಸುವ ಮುನ್ನ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿರುವ ಸಿಂಹವಾಹಿನಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಪೂಜಾ ಕಾರ್ಯದಲ್ಲಿ ಸುವೇಂದು ಭಾಗಿಯಾಗಿದ್ದು ತದನಂತರ ನಂದಿಗ್ರಾಮ ಹಿಂಸಾಚಾರದಲ್ಲಿ ಸಾವಿಗೀಡಾದ ವ್ಯಕ್ತಿಗಳ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ನಂದಿಗ್ರಾಮದ ಜನರನ್ನು ಭೇಟಿ ಮಾಡಿ ಮಾತನಾಡಿದ ಅವರು, ನನಗೆ ಇವರೊಂದಿಗೆ ಹಳೇ ಸಂಬಂಧವಿದೆ. 5 ವರ್ಷಗಳಿಗೊಮ್ಮೆ ಚುನಾವಣೆ ಬಂದಾಗ ಮಾತ್ರ ಮಮತಾ ಬ್ಯಾನರ್ಜಿ ಇವರನ್ನು ನೆನಪಿಸಿಕೊಳ್ಳುತ್ತಾರೆ. ಈ ಜನರು ಮಮತಾರನ್ನು ಪರಾಭವಗೊಳಿಸುತ್ತಾರೆ. ನಾನು ಇಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾನು ಇಲ್ಲಿನ ಮತದಾರ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಉದ್ಯೋಗಕಾಶದ ಕೊರತೆ ಇದೆ. ಈ ಸಮಸ್ಯೆಗಳನ್ನು ನೀಗಿಸಲು ನಾವು ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಟಿಎಂಸಿ ಖಾಸಗಿ ಕಂಪನಿಯಾಗಿ ಬದಲಾಗಿದೆ. ಅಲ್ಲಿ ದೀದಿ ಮತ್ತು ಭೈಪೋ ಮಾತ್ರ ಮುಕ್ತವಾಗಿ ಮಾತನಾಡಬಹುದು ಎಂದು ನಾಮಪತ್ರ ಸಲ್ಲಿಸುವ ಮುುನ್ನ ನಂದಿಗ್ರಾಮದಲ್ಲಿ ಮಾತನಾಡಿದ ಸುವೇಂದು ಹೇಳಿದ್ದಾರೆ.


ಪ್ರತಿಷ್ಠೆಯ ಕಣ ನಂದಿಗ್ರಾಮ
ನಂದಿಗ್ರಾಮ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿಗೆ ಪ್ರತಿಷ್ಠೆಯ ಕಣವಾಗಿದೆ. ಮಮತಾ ಬ್ಯಾನರ್ಜಿ ಅವರನ್ನು 50,000 ಮತಗಳಿಂದ ಪರಾಭವಗೊಳಿಸುವೆ. ಇಲ್ಲದೇ ಇದ್ದರೆ ರಾಜಕೀಯ ತೊರೆಯುವೆ ಎಂದು ಸುವೇಂದು ಚಾಲೆಂಜ್ ಮಾಡಿದ್ದಾರೆ.  ಮಾರ್ಚ್ 9 ರಂದು  ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದ ಮಮತಾ ಬ್ಯಾನರ್ಜಿ ‘ನಾನೂ ಹಿಂದೂ, ನನಗೂ ದುರ್ಗಾ ಸಪ್ತಶತಿಯ ಮಂತ್ರಗಳು ಗೊತ್ತು’ ಎಂದು ಹೇಳಿದ್ದರು. ಮಾತ್ರವಲ್ಲ ಚಂಡಿಪಾಠದ ಕೆಲ ಮಂತ್ರಗಳನ್ನೂ ಹೇಳಿದ್ದರು. ‘ಮಮತಾ ತಪ್ಪುತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ’ ಎಂದು ಒಂದು ಕಾಲದ ಮಮತಾರ ಸಹಚರ ಮತ್ತು ಇದೀಗ ಎದುರಾಳಿಯಾಗಿರುವ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಮಮತಾ ಹೇಳಿರುವ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿ ಅಣಕವಾಡಿದ್ದಾರೆ.

‘ನೀವು ನನಗೆ ಹಿಂದುತ್ವದ ಪಾಠ ಮಾಡಲು ಬರಬೇಡಿ. ನನಗೆ ಲಕ್ಷ್ಮೀ, ಸರಸ್ವತಿ, ಕಾಳಿ ಮತ್ತು ದುರ್ಗಾ ದೇವಿಯರ ಮಂತ್ರಗಳು ಗೊತ್ತು. ಚುನಾವಣೆ ಸಮಯದಲ್ಲಿ ಒಂದಿಷ್ಟು ಮಂತ್ರಗಳನ್ನು ಉರುಹೊಡೆದು ನಂತರ ಮರೆತುಬಿಡುವ ನಿಮ್ಮಂತೆ ನಾನಲ್ಲ. ನಾನು ಹೃದಯಪೂರ್ವಕ ಈ ಮಂತ್ರಗಳನ್ನು ಹೇಳುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾರ ಹೇಳಿಕೆಯನ್ನು ವ್ಯಂಗ್ಯವಾಡಿದ ಬಿಜೆಪಿಯ ಸುವೇಂದು ಅಧಿಕಾರಿ, ಮೊದಲಿಗೆ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿದರು. ನಂತರ ಮಮತಾ ಹೇಳಿರುವ ಮಂತ್ರಗಳ ಧ್ವನಿಮುದ್ರಣವನ್ನು ಪ್ಲೇ ಮಾಡಿದರು. ‘ಅವರು ತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ. ಅವರಿಗೇನೂ ಗೊತ್ತಿಲ್ಲ’ ಎಂದು ಅಣಕವಾಡಿದ್ದರು.

ಮಮತಾ ಹೊರಗಿನವರು
ಕಳೆದ ಶನಿವಾರ ಬಿಜೆಪಿ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ ಹೊತ್ತಲ್ಲಿ, ನಾನು ನಂದಿಗ್ರಾಮದ ಮಣ್ಣಿನ ಮಗ. ಮಮತಾ ಹೊರಗಿನವರು. ನಾನು ಆಕೆಯನ್ನು ಪರಾಭವಗೊಳಿಸಿ ಅವರನ್ನು ಕೊಲ್ಕತ್ತಾಗೆ ಕಳುಹಿಸುವೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಂದಿಗ್ರಾಮಕ್ಕೆ ತಲುಪಿದ್ದು, ತಾಮ್​ಲುಕ್​​ನಲ್ಲಿರುವ ಸ್ವಾತಂತ್ರ ಹೋರಾಟಗಾರ್ತಿ ಮಾತಾಂಗಿನಿ ಹಾಜ್ರಾ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದ್ದಾರೆ. ಹಲ್ದಿಯಾದಲ್ಲಿ ಸ್ಮೃತಿ ಇರಾನಿ ಚುನಾವಣಾ ಪ್ರಚಾರ ನಡೆಸಲಿದ್ದು , ಮಿಥುನ್ ಚಕ್ರವರ್ತಿ ಪ್ರಚಾರ ಆರಂಭಿಸುವ ನಿರೀಕ್ಷೆ ಇದೆ.



ನಂದಿಗ್ರಾಮದಲ್ಲಿ ಬುಧವಾರ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯಿಂದ ಮೊಣಕಾಲು, ಕುತ್ತಿಗೆ, ಭುಜಕ್ಕೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಗುರುವಾರ ಆಸ್ಪತ್ರೆಯ ಹಾಸಿಗೆಯಿಂದ ಮಾತನಾಡಿದ ಮಮತಾ ಎರಡು ದಿನಗಳಲ್ಲಿ ಚುನಾವಣಾ ಪ್ರಚಾರಕ್ಕೆ ಮರಳುವೆ ಎಂದು ಹೇಳದ್ದು, ಗಾಲಿಕುರ್ಚಿಯಲ್ಲಿ ಕುಳಿತು ಪ್ರಚಾರ ನಡೆಸುವೆ ಎಂದಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ತಪ್ಪುತಪ್ಪಾಗಿ ಮಂತ್ರ ಹೇಳಿದ್ದಾರೆ: ರೆಕಾರ್ಡ್​ ಹಾಕಿ ತೋರಿಸಿದ ಬಿಜೆಪಿಯ ಸುವೇಂದು ಅಧಿಕಾರಿ

West Bengal Assembly Elections 2021: ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗುತ್ತದೆ: ಸುವೇಂದು ಅಧಿಕಾರಿ

Published On - 1:20 pm, Fri, 12 March 21