ಬಂಗಾಳದಲ್ಲಿ ವಿವಾದ ಸೃಷ್ಟಿಸಿದ ಎನ್ಕೌಂಟರ್ ಸ್ಪೆಷಲಿಸ್ಟ್ ಅಜಯ್ ಶರ್ಮಾ ಯಾರು?
ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ಎನ್ಕೌಂಟರ್ ಸ್ಪೆಷಲಿಸ್ಟ್, ಉತ್ತರ ಪ್ರದೇಶದ ಸಿಂಗಂ ಅಜಯ್ ಶರ್ಮಾ ಬಗ್ಗೆ ನಿನ್ನೆಯಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವರನ್ನು ಪಶ್ಚಿಮ ಬಂಗಾಳದ ಚುನಾವಣೆಗೆ ಪೊಲೀಸ್ ವೀಕ್ಷಕರಾಗಿ ನಿಯೋಜಿಸಲಾಗಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸೂಕ್ಷ್ಮ ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನವನ್ನು ನಡೆಸಲು ಅಜಯ್ ಶರ್ಮಾ ಅವರನ್ನು ನಿಯೋಜಿಸಲಾಗಿದೆ ಎಂದು ಹೇಳಿವೆ. ಆದರೆ, ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.

ನವದೆಹಲಿ, ಏಪ್ರಿಲ್ 28: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ (West Bengal Elections) ‘ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದೇ ಜನಪ್ರಿಯವಾಗಿರುವ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ವೀಕ್ಷಕರಾಗಿ ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಏಪ್ರಿಲ್ 29ರಂದು ಬಂಗಾಳದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನಕ್ಕೂ ಮೊದಲು ಅಜಯ್ ಶರ್ಮಾ ಅವರನ್ನು ನೇಮಿಸಿರುವುದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ.
ಏಪ್ರಿಲ್ 29ರ ಬುಧವಾರ ನಡೆಯಲಿರುವ ಪಶ್ಚಿಮ ಬಂಗಾಳದ ಎರಡನೇ ಸುತ್ತಿನ ಮತದಾನಕ್ಕೆ ಮುಂಚಿತವಾಗಿ ಅಜಯ್ ಶರ್ಮಾ ಅವರ ನಿಯೋಜನೆಯಾಗಿದ್ದು, ಇದು ಅಧಿಕಾರದಲ್ಲಿರುವ ಟಿಎಂಸಿ ಮತ್ತು ಬಿಜೆಪಿ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಾದ್ಯಂತ ಹಲವಾರು ಹುದ್ದೆಗಳಲ್ಲಿ ಹಲವಾರು ಪ್ರಮುಖ ಭದ್ರತಾ ಕಾರ್ಯಾಚರಣೆಗಳಲ್ಲಿ ಅಜಯ್ ಶರ್ಮಾ ಅವರ ಪಾತ್ರವು ಅವರಿಗೆ “ಎನ್ಕೌಂಟರ್ ಸ್ಪೆಷಲಿಸ್ಟ್” ಎಂಬ ಖ್ಯಾತಿಯನ್ನು ತಂದುಕೊಟ್ಟಿತು.
ಇದನ್ನೂ ಓದಿ: ಬಂಗಾಳ ಚುನಾವಣೆ ಎಫೆಕ್ಟ್: ಗುರುಗ್ರಾಮದಲ್ಲಿ ಕಾರ್ಮಿಕರ ಕೊರತೆ, ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳಿಗೆ ಭಾರಿ ಬೇಡಿಕೆ
ಅಜಯ್ ಶರ್ಮಾ ಯಾರು?:
ಉತ್ತರ ಪ್ರದೇಶ ಕೇಡರ್ನ 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಪ್ರಸ್ತುತ ಪ್ರಯಾಗ್ರಾಜ್ನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಎಸಿಪಿ) ನೇಮಕಗೊಂಡಿದ್ದಾರೆ.
ಪಂಜಾಬ್ನ ಲುಧಿಯಾನದಲ್ಲಿ ಜನಿಸಿದ ಅಜಯ್ ಶರ್ಮಾ ಉತ್ತರ ಪ್ರದೇಶದ ಅತ್ಯಂತ ಪ್ರಮುಖ “ಎನ್ಕೌಂಟರ್ ಸ್ಪೆಷಲಿಸ್ಟ್” ಗಳಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಶಾಮ್ಲಿ, ನೋಯ್ಡಾ, ಜೌನ್ಪುರ ಮತ್ತು ರಾಂಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಡಜನ್ಗಟ್ಟಲೆ ಎನ್ಕೌಂಟರ್ಗಳನ್ನು ನಡೆಸಿದ್ದಾರೆ. ಡೆಂಟಲ್ ಸರ್ಜನ್ ಆಗಿದ್ದ ಅಜಯ್ ಶರ್ಮಾ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡರು.
ಇದನ್ನೂ ಓದಿ: ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ ಪ್ರತಿಕ್ರಿಯೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತಕ್ಕೆ ಮುಂಚಿತವಾಗಿ, ಟಿಎಂಸಿಯ ಭದ್ರಕೋಟೆಯಾದ 36% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ 24 ಪರಗಣಕ್ಕೆ ಪೊಲೀಸ್ ವೀಕ್ಷಕರಾಗಿ ಅಜಯ್ ಶರ್ಮಾ ಅವರನ್ನು ನಿಯೋಜಿಸಿರುವುದು ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




