
ನವದೆಹಲಿ, ಜುಲೈ 24: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಅವರ ರಾಜೀನಾಮೆಯ ನಂತರ ಚುನಾವಣಾ ಆಯೋಗವು ಭಾರತದ ಮುಂದಿನ ಉಪರಾಷ್ಟ್ರಪತಿ ಸ್ಥಾನಕ್ಕೆ ಅಧಿಕೃತವಾಗಿ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೆಚ್ಚುತ್ತಿರುವ ನಿರೀಕ್ಷೆಯ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಜೆಡಿಯು ಸಂಸದ ಮತ್ತು ಕೇಂದ್ರ ಸಚಿವ ರಾಮನಾಥ್ ಠಾಕೂರ್ (Ram Nath Thakur) ಅವರನ್ನು ಭೇಟಿ ಮಾಡಿದ್ದಾರೆ. ಇದು ಹೊಸ ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ.
ರಾಮನಾಥ್ ಠಾಕೂರ್ ಯಾರು?:
ರಾಮನಾಥ್ ಠಾಕೂರ್ ಬಿಹಾರದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪುತ್ರ. 2005ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕಬ್ಬು ಸಚಿವರಾಗಿ ನೇಮಕಗೊಂಡಾಗ ಅವರು ಮೊದಲು ಬಿಹಾರ ಸಚಿವ ಸಂಪುಟವನ್ನು ಪ್ರವೇಶಿಸಿದರು. 2005ರಿಂದ 2010ರವರೆಗೆ ಅವರು ಬಿಹಾರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ, ರಾಮನಾಥ್ ಠಾಕೂರ್ ಜೆಡಿಯು ಪಕ್ಷವನ್ನು ಪ್ರತಿನಿಧಿಸುವ ರಾಜ್ಯಸಭಾ ಸಂಸದರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ, ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಜಗದೀಪ್ ಧನಖರ್ ರಾಜೀನಾಮೆ ಬೆನ್ನಲ್ಲೇ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಶುರು ಮಾಡಿದ ಚುನಾವಣಾ ಆಯೋಗ
ರಾಮನಾಥ್ ಠಾಕೂರ್ ಅವರ ಹೆಸರು ಉಪರಾಷ್ಟ್ರಪತಿ ರೇಸ್ನಲ್ಲಿ ಗಟ್ಟಿಯಾಗಿ ಕೇಳಿಬರುತ್ತಿರುವುದಕ್ಕೆ ಕಾರಣವೂ ಇದೆ. ಅವರು ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಬಿಹಾರದವರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ನಿರ್ಣಾಯಕವಾಗಿರುವುದರಿಂದ, ರಾಮನಾಥ್ ಠಾಕೂರ್ ಅವರ ನಾಮನಿರ್ದೇಶನವು ಜೆಡಿಯು ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಸಾಂಕೇತಿಕ ಸೂಚನೆಯಾಗಿರಬಹುದು. ಸಾಮಾಜಿಕ ನ್ಯಾಯದಲ್ಲಿ ಶುದ್ಧ ಇಮೇಜ್ ಮತ್ತು ಹಿನ್ನೆಲೆಗೆ ಹೆಸರುವಾಸಿಯಾದ ರಾಮ್ ನಾಥ್ ಠಾಕೂರ್ ವಿರೋಧ ಪಕ್ಷಗಳು ವಿರೋಧಿಸಲು ಕಷ್ಟಕರವಾದ ಅಭ್ಯರ್ಥಿಯಾಗಬಹುದು. ಇದಲ್ಲದೆ, ಅವರು ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಸಮುದಾಯಕ್ಕೆ ಸೇರಿದವರಾಗಿದ್ದು, ಬಿಹಾರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದಾಗಿ ಅವರ ನಾಮನಿರ್ದೇಶನವು ರಾಜಕೀಯವಾಗಿ ಅನುಕೂಲಕರವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ