‘ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದರು, ನೀವು ಮೊಟ್ಟೆಗೆ ಹೆದರುತ್ತೀರಾ?’; ಮಹುವಾ ಮೊಯಿತ್ರಾಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ದ್ವೇಷಪೂರಿತ ಭಾಷಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೊಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಮಹುವಾ ಮೊಯಿತ್ರಾ ಮತ್ತು ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ತೃಣಮೂಲ ಕಾಂಗ್ರೆಸ್ ನಾಯಕರ ಮೇಲೆ ಮೊಟ್ಟೆ ಎಸೆದು ದಾಳಿ ನಡೆಸಿದ ಘಟನೆಗಳು ನಡೆದಿದ್ದವು.

ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದರು, ನೀವು ಮೊಟ್ಟೆಗೆ ಹೆದರುತ್ತೀರಾ?; ಮಹುವಾ ಮೊಯಿತ್ರಾಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Mahua Moitra
Image Credit source: PTI

Updated on: Aug 07, 2026 | 7:57 PM

ನವದೆಹಲಿ, ಆಗಸ್ಟ್ 7: ತಮ್ಮ ಮೇಲೆ ಮೊಟ್ಟೆ ಎಸೆಯಬಹುದು ಎಂಬ ಕಾರಣ ನೀಡಿ ಪೊಲೀಸ್ ತನಿಖೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ಕೋರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ (Mahua Moitra) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತನಿಖಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ದ ಕೊಲ್ಕತ್ತಾ ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿದ್ದ ಸಂಸದೆ ಮಹುವಾ ಮೊಯಿತ್ರಾ, ಸುರಕ್ಷತೆಯ ಬಗ್ಗೆ ಆತಂಕ ಮತ್ತು ರಾಜಕೀಯ ವಿರೋಧಿಗಳಿಂದ ಮೊಟ್ಟೆ ಎಸೆಯುವುದು ಸೇರಿದಂತೆ ಸಾರ್ವಜನಿಕವಾಗಿ ಕಿರುಕುಳ ಉಂಟಾಗುವ ಬೆದರಿಕೆಯನ್ನು ಉಲ್ಲೇಖಿಸಿದ್ದರು.

ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ನ್ಯಾಯಪೀಠವು, ಪೊಲೀಸರ ಮುಂದೆ ವರ್ಚುವಲ್ ಮೂಲಕ ಹಾಜರಾಗಲು ತಮಗೆ ಕಾನೂನಾತ್ಮಕ ಹಕ್ಕಿದೆ ಎಂಬ ಮಹುವಾ ಮೊಯಿತ್ರಾ ಅವರ ವಕೀಲರ ವಾದವನ್ನು ಆಲಿಸಲು ನಿರಾಕರಿಸಿತು ಹಾಗೂ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

“ಪೋಲಿಸ್ ನೋಟಿಸ್ ಪ್ರಕಾರ, ನಾನು ನನ್ನ ಸ್ವಂತ ಕ್ಷೇತ್ರದ ಪೊಲೀಸ್ ಠಾಣೆಗೆ ಹಾಜರಾಗಬೇಕಿದೆ. ಕಳೆದ ಬಾರಿ ನಾನು ಅಲ್ಲಿಗೆ ಹೋದಾಗ 2 ಘಟನೆಗಳು ನಡೆದವು. ಮೊದಲನೆಯದಾಗಿ ಮೊಟ್ಟೆ ಎಸೆಯುವುದಾಗಿ ಬೆದರಿಕೆ ಹಾಕಲಾಯಿತು ಮತ್ತು ಎರಡನೇ ಬಾರಿ ನಿಜವಾಗಿಯೂ ಮೊಟ್ಟೆಗಳನ್ನು ಎಸೆಯಲಾಯಿತು” ಎಂದು ಅವರು ವಾದಿಸಿದರು.

 

ಮಹುವಾ ಮೊಯಿತ್ರಾ ಅವರ ಈ ಆತಂಕವನ್ನು ಪ್ರಶ್ನಿಸಿದ ನ್ಯಾಯಪೀಠವು, “ನೀವು ಸಂಸದೆಯಾಗಿದ್ದೀರಿ. ರಾಜಕೀಯಕ್ಕೆ ಬಂದ ಮೇಲೆ ಮೊಟ್ಟೆಗಳಿಗೆ ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಎದೆಗೆ ಗುಂಡು ಬಿದ್ದಾಗಲೇ ಎದುರಿಸಿದರು. ಇಂತಹ ಅರ್ಜಿಗಳು ಈ ನ್ಯಾಯಾಲಯದ ಮೆಟ್ಟಿಲೇರಲೇಬಾರದು” ಎಂದು ಹೇಳಿತು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣದಿಂದ ಮೊಯಿತ್ರಾ ಅವರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.

ಇದನ್ನೂ ಓದಿ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಗ್ ರಿಲೀಫ್; ಆಫೀಸ್ ಧ್ವಂಸ ಕ್ರಮಕ್ಕೆ ಕೊಲ್ಕತ್ತಾ ಹೈಕೋರ್ಟ್ ತಡೆ

ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಕೃಷ್ಣನಗರದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಕೊಲ್ಕತ್ತಾ ಹೈಕೋರ್ಟ್ ಜುಲೈ 21ರಂದು ಅಕ್ಟೋಬರ್ 5ರವರೆಗೆ ಮಧ್ಯಂತರ ರಕ್ಷಣೆ ನೀಡಿತ್ತು. ನಾದಿಯಾ ಜಿಲ್ಲೆಯಲ್ಲಿ ದಾಖಲಾಗಿರುವ ಈ ಪ್ರಕರಣವು ಸುಳ್ಳು ಆರೋಪಗಳಿಂದ ಕೂಡಿದೆ ಎಂದು ಮಹುವಾ ಮೊಯಿತ್ರಾ ವಾದಿಸಿದ್ದರು.

ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು ತನಿಖೆಗೆ ಸಹಕರಿಸುವಂತೆ ಮತ್ತು ವಿಚಾರಣೆಗಾಗಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ನಿರ್ದೇಶಿಸಿದ್ದರು. ಪೊಲೀಸರ ಮುಂದೆ ಹಾಜರಾಗಬೇಕು ಎಂಬ ಈ ನಿರ್ದೇಶನವನ್ನೇ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೋರ್ಟ್ ವಿಧಿಸಿದ ಷರತ್ತುಗಳನ್ನು ಪಾಲಿಸಿ ತನಿಖೆಗೆ ಸಹಕರಿಸಿದರೆ ಅಕ್ಟೋಬರ್ 5ರವರೆಗೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದೂ ಹೈಕೋರ್ಟ್ ನಿರ್ದೇಶಿಸಿತ್ತು. ಈ ವಿಷಯದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 1ರಂದು ನಡೆಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us