AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಮಾನವರನ್ನು ಬಾಹ್ಯಾಕಾಶಕ್ಕೊಯ್ಯಲು ಸಿದ್ಧವಾಗುತ್ತಿದೆ ಭಾರತ

ಭಾರತ ತನ್ನ ಮಹತ್ವಾಕಾಂಕ್ಷಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ 'ಗಗನಯಾನ' ಯೋಜನೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದು, ಮುಂದಿನ ತಿಂಗಳು ಅದರ ಭಾಗವಾಗಿ ಒಂದು ಮಹತ್ವದ ಪರೀಕ್ಷೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಯೋಜನೆಯ ಮುಖ್ಯಸ್ಥರಾಗಿರುವ ಆರ್ ಹಟ್ಟನ್ ಅವರು ಈ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಮಾನವರನ್ನು ಬಾಹ್ಯಾಕಾಶಕ್ಕೊಯ್ಯಲು ಸಿದ್ಧವಾಗುತ್ತಿದೆ ಭಾರತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 19, 2023 | 3:29 PM

ಭಾರತ ತನ್ನ ಮಹತ್ವಾಕಾಂಕ್ಷಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ‘ಗಗನಯಾನ’ ಯೋಜನೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದು, ಮುಂದಿನ ತಿಂಗಳು ಅದರ ಭಾಗವಾಗಿ ಒಂದು ಮಹತ್ವದ ಪರೀಕ್ಷೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಯೋಜನೆಯ ಮುಖ್ಯಸ್ಥರಾಗಿರುವ ಆರ್ ಹಟ್ಟನ್ ಅವರು ಈ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಇಸ್ರೋ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ಒದಗಿಸುತ್ತಿದ್ದು, ತಂಡಕ್ಕೆ ಇನ್ನಷ್ಟು ಜನರನ್ನು ಸೇರ್ಪಡೆಗೊಳಿಸಲು ಚಿಂತಿಸುತ್ತಿದೆ. ಗಗನಯಾನ ಯೋಜನಾ ತಂಡ ತುರ್ತು ಪರಿಸ್ಥಿತಿಯಲ್ಲಿ ಗಗನಯಾತ್ರಿಗಳನ್ನು ಕ್ಷಿಪ್ರವಾಗಿ ಹೊರತರುವ ಕ್ರ್ಯೂ ಎಸ್ಕೇಪ್ ವ್ಯವಸ್ಥೆಯನ್ನು ಪರೀಕ್ಷಿಸುವ ಯೋಜನೆ ಹಾಕಿಕೊಂಡಿದೆ. ಅಂತಿಮ ಉಡಾವಣೆಗೂ ಮುನ್ನ ಇತರ ಪರೀಕ್ಷೆಗಳನ್ನೂ ಅವರು ಕೈಗೊಳ್ಳಲಿದ್ದಾರೆ. ಗಗನಯಾತ್ರಿಗಳ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ ಎಂದು ಹಟ್ಟನ್ ಮಾಹಿತಿ ನೀಡಿದ್ದಾರೆ.

ಇದು ಗಗನಯಾನ ಯೋಜನೆಯ ನಾಲ್ಕು ಅಬಾರ್ಟ್ ಮಿಷನ್‌ಗಳ ಆರಂಭವಾಗಿರಲಿದೆ. ಭಾರತದ ಮಾನವ ಸಹಿತ ಬಾಹ್ಯಾಕಾಶ ನೌಕೆ ಮರಳಿ ಭೂಮಿಗೆ ಬಂದು, ಸಮುದ್ರದಲ್ಲಿ ಇಳಿದಾಗ, ಭಾರತೀಯ ನೌಕಾಪಡೆಯ ವಿಶೇಷ ಮರೈನ್ ಕಮಾಂಡೋ ಪಡೆಯಾದ ಮಾರ್ಕೋಸ್ ಅದನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸಲಿದೆ. ಇಸ್ರೋ ಈಗಾಗಲೇ ಸಿಬ್ಬಂದಿಗಳ ತರಬೇತಿಗಾಗಿ ಕ್ರ್ಯೂ ಮಾಡ್ಯುಲ್ ರಕ್ಷಣಾ ಮಾದರಿಯನ್ನು ನೌಕಾಪಡೆಗೆ ಒದಗಿಸಿದೆ.

ಮೊದಲ ಪರೀಕ್ಷಾ ವಾಹನವಾದ ಟೆಸ್ಟ್ ವೆಹಿಕಲ್ ಟಿವಿ-ಡಿ1 ಉಡಾವಣೆಯೊಡನೆ ಈ ಪರೀಕ್ಷಾ ಸರಣಿ ಆರಂಭಗೊಳ್ಳಲಿದೆ. ಇದರ ಬಳಿಕ, ಎರಡನೆಯ ಪರೀಕ್ಷಾ ವಾಹನ ಯೋಜನೆಯಾದ ಟಿವಿ-ಡಿ2, ಹಾಗೂ ಮೊದಲ ಮಾನವ ರಹಿತ ಗಗನಯಾನ ಯೋಜನೆಯಾದ ಎಲ್‌ವಿಎಂ3-ಜಿ1 ಉಡಾವಣೆಗೊಳ್ಳಲಿದೆ. ಇದು ಪೂರ್ಣಗೊಂಡ ಬಳಿಕ, ಇಸ್ರೋ ಎರಡನೆಯ ಹಂತದ ಪರೀಕ್ಷಾ ಯೋಜನೆಗಳನ್ನು ಕೈಗೊಳ್ಳಲಿದೆ. ಇದರಲ್ಲಿ ಟಿವಿ-ಡಿ3 ಹಾಗೂ ಡಿ4, ಹಾಗೂ ವ್ಯೋಮಮಿತ್ರ ಎಂಬ ಹ್ಯುಮನಾಯ್ಡ್ ಅನ್ನು ಒಳಗೊಂಡಿರುವ ಎಲ್‌ವಿಎಂ3-ಜಿ2 ಯೋಜನೆ ಸೇರಿವೆ.

ಗಗನಯಾನ ಯೋಜನೆ ಮೂವರು ಗಗನಯಾತ್ರಿಗಳು ಜೀವಿಸಬಲ್ಲ ಬಾಹ್ಯಾಕಾಶ ಕ್ಯಾಪ್ಸೂಲ್ ಅನ್ನು ನಿರ್ಮಿಸುವ ಗುರಿ ಹೊಂದಿದೆ. ಇದು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲಿ ಮೂರು ದಿನಗಳ ಅವಧಿಗೆ 400 ಕಿಲೋಮೀಟರ್‌ಗಳಷ್ಟು (250 ಮೈಲಿ) ಎತ್ತರಕ್ಕೆ ಒಯ್ದು, ಮರಳಿ ಸುರಕ್ಷಿತವಾಗಿ ಹಿಂದೂ ಮಹಾಸಾಗರದಲ್ಲಿ ಇಳಿಸಲಿದೆ.

ಗಗನಯಾನ ಯೋಜನೆಯ ಉಡಾವಣಾ ವಾಹನವೆಂದು ಪರಿಗಣಿಸಲಾಗಿರುವ, ಇಸ್ರೋದ ಶಕ್ತಿಶಾಲಿ, ನಂಬಿಕಾರ್ಹ ಎಲ್‌ವಿಎಂ3 ರಾಕೆಟ್ ಅನ್ನು ಮಾನವರ ಸುರಕ್ಷತೆಗೆ ಸೂಕ್ತವಾಗುವಂತೆ ಮಾರ್ಪಾಡು ಮಾಡಲಾಗಿದ್ದು, ಅದನ್ನು ಈಗ ಹ್ಯುಮನ್ ರೇಟೆಡ್ ಎಲ್‌ವಿಎಂ3 (ಎಚ್ಎಲ್‌ವಿಎಂ3) ಎಂದು ಕರೆಯಲಾಗುತ್ತದೆ.

ಎಚ್ಎಲ್‌ವಿಎಂ3 ಕ್ಷಿಪ್ರ ಪ್ರತಿಕ್ರಿಯೆಗಾಗಿ ಒಂದು ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಅನ್ನು ಹೊಂದಿದ್ದು, ಇದು ಅತ್ಯಂತ ಬಲಶಾಲಿಯಾದ ಮೋಟಾರ್‌ಗಳನ್ನು ಹೊಂದಿದೆ. ಒಂದು ವೇಳೆ ಉಡಾವಣಾ ವೇದಿಕೆಯಲ್ಲಿ, ಅಥವಾ ಉಡಾವಣೆಯ ಹಂತದಲ್ಲಿ ಏನಾದರೂ ಸಮಸ್ಯೆ ತಲೆದೋರಿದರೆ ಇದು ಕ್ರ್ಯೂ ಮಾಡ್ಯುಲ್ (ಸಿಎಂ) ಹಾಗೂ ಒಳಗಿರುವ ಸಿಬ್ಬಂದಿಗಳು ಸುರಕ್ಷಿತ ದೂರಕ್ಕೆ ಚಲಿಸುವಂತೆ ಮಾಡುತ್ತದೆ.

ಆರ್ಬಿಟಲ್ ಮಾಡ್ಯುಲ್ (ಒಎಂ) ಭೂಮಿಯ ಸುತ್ತಲೂ ಚಲಿಸುತ್ತಿದ್ದು, ಇದು ಕ್ರ್ಯೂ ಮಾಡ್ಯುಲ್ ಮತ್ತು ಸರ್ವಿಸ್ ಮಾಡ್ಯುಲ್ (ಎಸ್ಎಂ) ಗಳನ್ನು ಒಳಗೊಂಡಿದೆ. ಒಎಂ ಆಧುನಿಕ ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಹೊಂದಿದ್ದು, ಸಿಬ್ಬಂದಿಗಳ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಕ್ರ್ಯೂ ಮಾಡ್ಯುಲ್ ಬಾಹ್ಯಾಕಾಶದಲ್ಲಿ ವಾಸಯೋಗ್ಯ ಸ್ಥಳವಾಗಿದ್ದು, ಗಗನಯಾತ್ರಿಗಳಿಗೆ ಭೂಮಿಯ ವಾತಾವರಣದಂತಹ ಪರಿಸ್ಥಿತಿಯನ್ನು ಒದಗಿಸುತ್ತದೆ.

ಇಸ್ರೋ ಭಾರತದ ಆರಂಭಿಕ ಮಾನವ ಸಹಿತ ಗಗನಯಾತ್ರೆಯ ಸಲುವಾಗಿ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ನೀಡುತ್ತಿದ್ದು, ಭವಿಷ್ಯದ ಮಾನವ ಸಹಿತ ಯೋಜ‌ನೆಗಳಿಗಾಗಿ ಈ ತಂಡವನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದೆ.

ಈ ಯೋಜನೆಗಾಗಿ ಭಾರತ 90,000 ಕೋಟಿ ರೂಪಾಯಿ (ಅಥವಾ 1.1 ಬಿಲಿಯನ್ ಡಾಲರ್) ಮೊತ್ತವನ್ನು ಮೀಸಲಾಗಿಟ್ಟಿದೆ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸೇಫ್ ಲ್ಯಾಂಡಿಂಗ್ ನಡೆಸಿದ ಬಳಿಕ ಈ ಮೊತ್ತವನ್ನು ಒದಗಿಸಲಾಗಿದೆ.

ಆರಂಭಿಕ ಉಡಾವಣಾ ಯೋಜನೆಗಾಗಿ ನಿಗದಿತ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಭಾರತದ ಪ್ರಾಥಮಿಕ ಬಾಹ್ಯಾಕಾಶ ಕೇಂದ್ರವಾದ ಶ್ರೀಹರಿಕೋಟಾದಿಂದ 2024ಕ್ಕೂ ಮೊದಲೇ ಉಡಾವಣೆಗೊಳ್ಳುವ ನಿರೀಕ್ಷೆಗಳಿವೆ.

ಈ ಯೋಜನೆಯಲ್ಲಿ, ಮೂರು ಗಗನಯಾತ್ರಿಗಳ ತಂಡವನ್ನು 400 ಕಿಲೋಮೀಟರ್‌ಗಳಷ್ಟು ಎತ್ತರದ ಕಕ್ಷೆಗೆ ಮೂರು ದಿನಗಳ ಅವಧಿಗೆ ಕಳುಹಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸಿಬ್ಬಂದಿಗಳು ತಮ್ಮ ಗಗನ ಯಾತ್ರೆಯನ್ನು ಪೂರ್ಣಗೊಳಿಸಿ, ಅಂತಿಮವಾಗಿ ಹಿಂದೂ ಮಹಾಸಾಗರದಲ್ಲಿ ಇಳಿಯಲಿದ್ದಾರೆ.

ಈ ಯೋಜನೆಗಾಗಿ, ಮಾನವರನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಒಯ್ಯುವ ರಾಕೆಟ್ ಅಭಿವೃದ್ಧಿ, ಭೂಮಿಯ ಮಾದರಿಯಲ್ಲೇ ಮಾನವರಿಗೆ ವಾಸಯೋಗ್ಯ ವಾತಾವರಣ ಒದಗಿಸುವ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಪಾರಾಗುವ ಯೋಜನೆಗಳು, ಹಾಗೂ ಇತರ ಪ್ರಮುಖ ತಾಂತ್ರಿಕ ಬಿಡಿಭಾಗಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಇದನ್ನೂ ಓದಿ:ಆಳ ಸಮುದ್ರದ ಅನ್ವೇಷಣೆ: ಸಾಗರ ರಹಸ್ಯಗಳ ಅನಾವರಣಕ್ಕೆ ಸನ್ನದ್ಧವಾದ ಭಾರತದ ಮತ್ಸ್ಯ-6000

ಗಗನಯಾನ ಯೋಜನೆಗಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದು ಹಲವು ಕಾರಣಗಳಿಗಾಗಿ ಮಹತ್ತರವಾಗಿದೆ:

1. ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆ ಎಂದು ಖಾತ್ರಿಪಡಿಸಲಾಗುತ್ತದೆ. ಇದು ಗಗನಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

2. ತಂತ್ರಜ್ಞಾನದ ಖಚಿತತೆ: ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

3. ಅಪಾಯಗಳನ್ನು ತಗ್ಗಿಸುವುದು: ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ.

4. ಸಿಬ್ಬಂದಿ ತರಬೇತಿ: ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗಳಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ ಮತ್ತು ಎಲ್ಲ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

5. ಯೋಜನಾ ಯಶಸ್ಸು: ಎಲ್ಲ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿಪಡಿಸಿಕೊಳ್ಳುವುದರಿಂದ, ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ.

ಒಟ್ಟಾರೆಯಾಗಿ, ಈ ಪರೀಕ್ಷೆಗಳು ಗಗನಯಾನ ಯೋಜನೆಯ ಸುರಕ್ಷತೆ ಮತ್ತು ಯಶಸ್ಸಿಗೆ ಅತ್ಯಂತ ಮಹತ್ತರವಾಗಿದ್ದು, ಮಾನವ ಸಹಿತ ಗಗನಯಾತ್ರೆ ನಡೆಸುವಲ್ಲಿ ಮತ್ತು ಬಾಹ್ಯಾಕಾಶ ಅನ್ವೇಷಣೆ ನಡೆಸುವಲ್ಲಿ ಭಾರತದ ಸಾಮರ್ಥ್ಯವನ್ನು ವೃದ್ಧಿಸಲಿವೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ