ಸಿಟಿ ರವಿಗೆ ಕಬ್ಬಿನ ಗದ್ದೆ ತೋರಿಸಿದ ಅಧಿಕಾರಿಗಳು ಕಾಮಖೆಡ್ಡಾ ಮತ್ತು ರಾಜೇಂದ್ರ ಕೊಲೆ ಯತ್ನದ ಸೂತ್ರಧಾರಿಯನ್ನು ಹಿಡಿಯುವರೇ?
ಕಾಮಖೆಡ್ಡಾ ಮತ್ತು ಮಂತ್ರಿ ಕೆನ್ ರಾಜಣ್ಣ ಅವರ ಮಗ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಕೊಲೆ ಸಂಚಿನ ಹಿಂದಿರುವ ಸೂತ್ರಧಾರ ಒಬ್ಬರೇ ಎಂಬ ಆರೋಪದ ಬಗ್ಗೆ ಎರಡೂ ಸದನಗಳ ಪೀಠಾಸೀನ ಅಧಿಕಾರಿಗಳು ಮುಂದೆ ನಿಂತು ಸದನದ ಹಕ್ಕು ಮತ್ತು ಮರ್ಯಾದೆ ಎತ್ತಿ ಹಿಡಿಯುವ ಕೆಲಸ ಮಾಡಲೇಬೇಕಾಗಿದೆ.

ಈ ಬಾರಿಯ ಕರ್ನಾಟಕ ವಿಧಾನ ಮಂಡಲದ ಮುಂಗಡಪತ್ರ ಅಧಿವೇಶನ (Budget session) ಒಣ ಭಾಷಣದಲ್ಲಿ ಮುಗಿದು ಹೋಗುತ್ತದೆ ಎಂದುಕೊಂಡಿದ್ದವರಿಗೆ ಶಾಕ್ ನೀಡುವಂತೆ ಬಂದ ಕಾಮಖೆಡ್ಡಾ (Honeytrap) ಪ್ರಕರಣದ ಮತ್ತೊಂದು ಮಜಲು ಈಗ ತೆರೆದುಕೊಳ್ಳುತ್ತಿದೆ. ವಿಧಾನ ಸಭೆಯಲ್ಲಿ ಮಾತಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮಗೆ ಆದ ಅನುಭವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ರಾಜ್ಯವನ್ನು ಅಕ್ಷರಶಃ ಬೆಚ್ಚಿ ಬೀಳಿಸಿದರು. ವಿಧಾನ ಮಂಡಲದ ಎರಡೂ ಸದನಗಳಲ್ಲಿ ಚರ್ಚೆ ಆಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಖಡಕ್ ಉತ್ತರ ನೀಡುವುದರೊಂದಿಗೆ ಅಧಿವೇಶನಕ್ಕೆ ತೆರೆಬಿತ್ತು. ತಾವು ಸದನಕ್ಕೆ ಮಾತು ಕೊಟ್ಟಂತೆ, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತನಿಖೆಗೆ ಆದೇಶಿಸಿದರು ಮತ್ತು ಆ ಪ್ರಕಾರವಾಗಿ ಕಾಮಖೆಡ್ಡಾ ಘಟನೆಯಲ್ಲಿ, ಸಿಐಡಿ (CID) ತನಿಖೆ ಆರಂಭವಾಗಿದೆ.
ಹೊಸ ಟ್ವಿಸ್ಟ್ ಏನು?
ಕಾಮಖೆಡ್ಡಾ ಘಟನೆಯ ಸಂತ್ರಸ್ತ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಅವರ ಮಗ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಕೊಲೆ ಮಾಡಲು ಸಂಚು ಹೂಡಲಾಗಿದೆ ಎನ್ನುವುದು ಹೊಸ ಬೆಳವಣಿಗೆ ಅಲ್ಲ. ಅದೀಗ ಹಳೇ ಸುದ್ದಿ. ಹೊಸ ತಿರುವು ಏನೆಂದರೆ, ಈ ಎರಡು ಬೆಳವಣಿಗೆಯ ಹಿಂದಿನ ಸೂತ್ರಧಾರ ಒಬ್ಬನೇ ಎಂಬುದು. ಇದು ಶಾಕಿಂಗ್!
ಸದನ ಫೇಲಾಯ್ತೆ?
ಇಡೀ ಬೆಳವಣಿಗೆಗಳನ್ನು ಹಿಂತಿರುಗಿ ನೋಡಿದಾಗ ಎರಡು ಪ್ರಮುಖ ಅಂಶಗಳು ಗಮನಕ್ಕೆ ಬರುತ್ತವೆ. ಆಶ್ಚರ್ಯ ಎಂದರೆ, ಈ ವಿಚಾರವನ್ನು ರಾಜಕಾರಣಿಗಳಾಗಲೀ, ವಿರೋಧ ಪಕ್ಷದ ನಾಯಕರು ಮತ್ತು ಮಾಧ್ಯಮಗಳು ಎತ್ತಿ ಚರ್ಚೆ ಮಾಡಲೇ ಇಲ್ಲ. ಮೊದಲನೆಯದು – ಈ ಎರಡೂ ವಿಚಾರಗಳು ಹೊರಬರುತ್ತಿದ್ದಂತೆಯೇ, ಸ್ವತಃ ತಾವೇ ಮುಂದೆ ನಿಂತು ಇಡೀ ಸಭೆಯ ಮರ್ಯಾದಿ, ಮಾನ ಮತ್ತು ಸದಸ್ಯರ ಹಕ್ಕು ಕಾಪಾಡುವ ಕೆಲಸವನ್ನು ಸಭಾಧ್ಯಕ್ಷರು ಮತ್ತು ಸಭಾಪತಿಗಳು ಮಾಡಬೇಕಾಗಿತ್ತು. ಅದು ಯಾಕೋ, ಅವರು ಅದಕ್ಕೆ ಮುಂದಾಗಲಿಲ್ಲ. ಇನ್ನೊಂದು ವಿಚಾರ: ಇಂತಹ ಪ್ರಮುಖ ವಿಚಾರ ಹೊರ ಬಂದಮೇಲೂ, ವಿರೋಧ ಪಕ್ಷ ಬಿಜೆಪಿ, ರಾಜ್ಯಪಾಲರಿಗೆ ಒಂದು ಪತ್ರ ನೀಡಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡದೇ ಇರುವುದು. ಇದನ್ನು ನೋಡಿದರೆ, ಈ ಘಟನೆಯ ಸೂತ್ರಧಾರ ಯಾರೇ ಇರಲಿ, ಅವರ ಬಗ್ಗೆ ಬಿಜೆಪಿ ರಾಜ್ಯ ಘಟಕ ಮತ್ತು, ಬಿಜೆಪಿ ಶಾಸಕಾಂಗ ಪಕ್ಷಕ್ಕೆ ತುಂಬಾ ಸಹಾನುಭೂತಿ ಇದ್ದಂತೆ ಕಾಣುತ್ತಿದೆ.
ರಾಜಣ್ಣ ಮತ್ತು ರಾಜೇಂದ್ರ ಇಬ್ಬರೂ ವಿಧಾನಮಂಡಲದ ಎರಡು ಮನೆಗಳ ಸದಸ್ಯರು. ಹಿಂದೆಂದೂ ಈ ರೀತಿಯ ಆರೋಪ ಬಂದಿರಲಿಲ್ಲ. ಅದೂ ಕೂಡ, ರಾಜಣ್ಣ ಕೆಳಮನೆಯಲ್ಲಿ ದಾಖಲೆಗೆ ಹೋಗುವಂತೆ ಸವಿವರವಾಗಿ ಮಾತನಾಡಿದ್ದಾರೆ. ಇಡೀ ಮನೆಯ ಮರ್ಯಾದಿ, ಸದಸ್ಯರ ಹಕ್ಕಿನ ಪ್ರಶ್ನೆ ಉದ್ಭವಿಸುವ ಸಂದರ್ಭದಲ್ಲಿ, ಈ ವಿಚಾರವನ್ನು ಸ್ವತಃ ಸಭಾಧ್ಯಕ್ಷರು ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡು (suo moto) ತೆಗೆದುಕೊಂಡು ತಾವೇ ನಿಂತು ಸರಕಾರಕ್ಕೆ ನಿರ್ದೇಶನ ನೀಡಬೇಕಿತ್ತು. ಅಷ್ಟೇ ಅಲ್ಲ, ಈಗ ನಡೆಯುತ್ತಿರುವ ತನಿಖೆ ಗಂಭೀರತೆ ಕಳೆದುಕೊಂಡು, ಯಾರನ್ನೋ ಉಳಿಸುವ ಹುನ್ನಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಸಭಾಧ್ಯಕ್ಷರದ್ದಾಗಿದೆ. ಈಗ ಕೊಲೆ ಕೇಸಿನ ರೂವಾರಿ ಮತ್ತು ಕಾಮಖೆಡ್ಡಾ ರೂಪಿಸಿದವರೂ ಇಬ್ಬರೂ ಒಬ್ಬನೇ ವ್ಯಕ್ತಿ ಎಂಬ ಅಂಶ ಹೊರ ಬಂದಿರುವ ಹಿನ್ನೆಲೆಯಲ್ಲಿ, ಎರಡೂ ಸದನಗಳ ಪೀಠಾಧಿಪತಿಗಳ ಪಾತ್ರ ಇನ್ನೂ ಹೆಚ್ಚಿನದ್ದಾಗಿದೆ. ಈ ಸಂದರ್ಭದಲ್ಲಿ ಸಭಾಧ್ಯಕ್ಷರಿಗೆ ಪತ್ರ ಬರೆದು, ವಿರೋಧ ಪಕ್ಷ ಬಿಜೆಪಿ ಎಚ್ಚರಿಸಬೇಕಾಗಿತ್ತು. ಈ ಹಿಂದೆ, ಸಭಾ ಮರ್ಯಾದೆಗೆ ಮತ್ತು ಸದಸ್ಯರ ಹಕ್ಕಿಗೆ ಕಂಟಕ ಬಂದಾಗ, ಪೀಠಾಸೀನ ಅಧಿಕಾರಿಗಳು ಹೇಗೆಲ್ಲ ನಿರ್ಣಯ ತೆಗೆದುಕೊಂಡಿದ್ದರು, ಹೋರಾಡಿದ್ದರು ಎಂಬುದನ್ನು ಎತ್ತಿಕೊಂಡು ಹೋರಾಡುವುದನ್ನು ಬಿಟ್ಟು ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದುದನ್ನು ನೋಡಿದರೆ ರಾಜ್ಯ ಬಿಜೆಪಿ ನಾಯಕರ ನಡೆ ಬಗ್ಗೆ ಸಂಶಯ ಬರುತ್ತಿದೆ.
ಅಷ್ಟೇ ಅಲ್ಲ, ರಾಜಕೀಯ ಮೊಗಸಾಲೆಯಿಂದ ಬರುತ್ತಿರುವ ಮಾಹಿತಿಯನ್ನು ಪರಾಮಿರ್ಶಸಿದರೆ, ಒಂದಂತೂ ಹೇಳಬಹುದು. ಪ್ರಾಯಶಃ, ಕಾಮಖೆಡ್ಡಾ ತನಿಖೆ ಮುಂದೆ ಹೋಗದೇ ಮಣ್ಣಲ್ಲಿ ಸೇರುವ ಲಕ್ಷಣ ಕಾಣುತ್ತಿದೆ. ರಾಜೇಂದ್ರ ಅವರ ಹೇಳಿಕೆ ಪ್ರಕಾರ ಎರಡೂ ಕೇಸಿನ ಸೂತ್ರಧಾರ ಒಬ್ಬರೇ ಅಂತಾದರೆ, ರಾಜೇಂದ್ರ ಅವರನ್ನು ಕೊಲೆ ಮಾಡಲು ಸುಪಾರಿ ಕೊಡಲಾಗಿದೆ ಎನ್ನುವ ಕೇಸಿನ ಸೂತ್ರಧಾರ (mastermind) ಯಾರು ಎನ್ನುವ ವಿಚಾರ ಕೂಡ ಹೊರಗೆ ಬರುವ ಸಾಧ್ಯತೆ ಕೂಡ ಕಡಿಮೆ! ಅಂದರೆ ಕೊಲೆ ಪ್ರಯತ್ನದ ಪ್ರಕರಣ ಕೂಡ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಕಡಿಮೆ ಎನ್ನುವುದು.
ಇದನ್ನೂ ಓದಿ: ಕಾಮಖೆಡ್ಡಾ ಕೇಸಿನ ಸೂತ್ರಧಾರ ತಪ್ಪಿಸಿಕೊಳ್ಳುವುದು ಗ್ಯಾರೆಂಟಿ
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ, ಒಂದು ಕೇಸಿಗೆ ಸಂಬಂಧಿಸಿದಂತೆ, ಮೇಲ್ಮನೆ ಸದಸ್ಯ ಸಿ.ಟಿ. ರವಿ ಅವರನ್ನು ಕಬ್ಬಿನಗದ್ದೆಗೆ ಕರೆದುಕೊಂಡು ಹೋಗಿದ್ದ ಪೊಲೀಸರ ನಡೆಯ ಮುಂದಿನ ಅಂಕವನ್ನು ರಾಜಣ್ಣ ಮತ್ತು ರಾಜೇಂದ್ರ ಕೇಸಿನಲ್ಲಿ ನೋಡಬಹುದು. ಈ ಎರಡೂ ಕೇಸುಗಳ ವಿಚಾರಣೆಯ ಗತಿ ತಪ್ಪಿದರೆ, ತಮ್ಮ ಮನೆಗಳ ಸದಸ್ಯರ ಮಾನ, ಮರ್ಯಾದಿ ಮತ್ತು ಹಕ್ಕನ್ನು ಕಾಪಾಡುವಲ್ಲಿ, ಎರಡೂ ಸದನಗಳು ವಿಫಲವಾದಂತಾಗುತ್ತದೆ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Sat, 29 March 25