ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು
IPL 2025: ಮಂಕಡ್ ರನೌಟ್ ಮತ್ತೆ ಚರ್ಚಾ ವಿಷಯವಾಗಿದೆ. ಐಪಿಎಲ್ನ 70ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ದಿಗ್ವೇಶ್ ರಾಥಿ, ಆರ್ಸಿಬಿ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಮಂಕಂಡಿಂಗ್ ಮಾಡಿದ್ದರು. ಇದರ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮಂಕಡ್ ರನೌಟ್ ಮನವಿಯನ್ನು ಹಿಂಪಡೆದು ಗಮನ ಸೆಳೆದಿದ್ದರು.

ಕ್ರಿಕೆಟ್ ಅಂಗಳದಲ್ಲಿ ಕ್ರೀಡಾ ಸ್ಫೂರ್ತಿ ಮೆರೆಯಲು ಒಂದು ನಿಯಮವಿದೆಯೇ? ಈ ಪ್ರಶ್ನೆಗೆ ಅಂತಹದೊಂದು ನಿಯಮವಿರಲು ಸಾಧ್ಯವೇ? ಎಂದು ನೀವು ಮರು ಪ್ರಶ್ನಿಸಬಹುದು. ಆದರೆ ಮಂಕಡ್ ರನೌಟ್ ಅಥವಾ ಮಂಕಡಿಂಗ್ ರನೌಟ್ ವಿಷಯದಲ್ಲಿ ಆಗುತ್ತಿರುವುದೇ ಅದು. ಐಸಿಸಿಯೇ ಅನುಮತಿಸಿದ ನಿಯಮವನ್ನು ಮರೆತು ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದಾರೆ.
ಐಸಿಸಿ ನಿಯಮದ ಪ್ರಕಾರ ಬೌಲರ್ ಚೆಂಡೆಸೆಯುವ ಮುನ್ನ ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟರೆ ರನೌಟ್ ಮಾಡಲು ಅವಕಾಶವಿದೆ. 1947 ರಲ್ಲಿ ಆರಂಭವಾದ ಮಂಕಡ್ ರನೌಟ್ ಅನ್ನು 2019 ರಲ್ಲಿ ಅಧಿಕೃತಗೊಳಿಸಲಾಗಿದೆ. ಅಂದರೆ ಮಂಕಡ್ ರನೌಟ್ ಅನ್ನು ಕಾನೂನುಬದ್ಧಗೊಳಿಸಲಾಗಿದೆ.
ಇದಾಗ್ಯೂ ತಂಡದ ನಾಯಕ ಅಥವಾ ಇನ್ನಿತರ ಆಟಗಾರರು ಕ್ರೀಡಾ ಸ್ಫೂರ್ತಿಯ ಹೆಸರಿನಲ್ಲಿ ಹೀರೋಗಳಾಗುತ್ತಿರುವುದೇಕೆ ಎಂಬುದೇ ಪ್ರಶ್ನೆ. ಏಕೆಂದರೆ ಬೌಲರ್ ಕಾನೂನುಬದ್ಧವಾಗಿ ಔಟ್ ಮಾಡಿದರೂ, ಆ ಔಟ್ ಬೇಡವೆಂದು ನಾಯಕ ಹೀರೋ ಆಗುವ ಪರಿಪಾಠ ಮುಂದುವರೆದಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಒಬ್ಬ ಬ್ಯಾಟರ್ ರನ್ ಓಡುವಾಗ ರನೌಟ್ ಆಗಿ ಹೊರ ನಡೆದರೆ ಅವರನ್ನು ಕರೆದು ಮತ್ತೆ ಬ್ಯಾಟಿಂಗ್ ಮಾಡಿ ಎಂದು ಯಾರು ಸಹ ಕ್ರೀಡಾ ಸ್ಫೂರ್ತಿ ಮೆರೆಯಲ್ಲ. ಆದರೆ ಅದೇ ರನ್ಗಾಗಿ ಚೆಂಡೆಸೆಯುವ ಮುನ್ನ ಕ್ರೀಸ್ ಬಿಟ್ಟು ರನೌಟ್ ಆದರೆ ಇಲ್ಲಿ ಕ್ರೀಡಾ ಸ್ಫೂರ್ತಿಯ ಟ್ಯಾಗ್ ಲೈನ್ ನೀಡಲಾಗುತ್ತಿದೆ.
ಬೌಲರ್ಗೆ ಅನ್ವಯಿಸುವ ಈ ಕ್ರೀಡಾ ಸ್ಫೂರ್ತಿ ಬ್ಯಾಟರ್ಗೆ ಅನ್ವಯವಾಗುವುದಿಲ್ಲವೇ ಎಂಬುದೇ ದೊಡ್ಡ ಪ್ರಶ್ನೆ. ಬ್ಯಾಟರ್ ತನ್ನ ಅನುಕೂಲತೆಗಾಗಿ ಅಲ್ಲವೇ ಬೇಗನೆ ಕ್ರೀಸ್ ಬಿಡುತ್ತಿರುವುದು. ಹೀಗೆ ಮೊದಲೇ ಕ್ರೀಸ್ ಬಿಟ್ಟು ಲಾಭ ಪಡೆಯುತ್ತಿರುವುದು ಬ್ಯಾಟ್ಸ್ಮನ್ ಅಲ್ಲವೇ? ಆಗ ಅವರಿಗೆ ಈ ಕ್ರೀಡಾ ಸ್ಫೂರ್ತಿ ಅನ್ವಯವಾಗುದಿಲ್ಲವೇ?
ಇವೆಲ್ಲಕ್ಕಿಂತ ಹೆಚ್ಚಾಗಿ ಮಂಕಡ್ ರನೌಟ್ ಮಾಡಬಹುದು ಎಂದು ಐಸಿಸಿ ನಿಯಮವೇ ಹೇಳಿರುವಾಗ, ಇಲ್ಲಿ ಕ್ರೀಡಾ ಸ್ಫೂರ್ತಿಯ ವಿಷಯ ಎಲ್ಲಿ ಬರುತ್ತೆ. ಅದು ಬೌಲರ್ಗೆ ನೀಡಲಾದ ನ್ಯಾಯಬದ್ಧವಾದ ಅಧಿಕಾರವಲ್ಲವೇ.
ಏಕೆಂದರೆ ಬೌಲರ್ ಅದೇ ಕ್ರೀಸ್ ದಾಟಿದರೆ, ನೋ ಬಾಲ್ ಆಗುತ್ತದೆ. ಇಲ್ಲ ಸೈಡ್ ಲೈನ್ ಮೇಲೆ ಕಾಲಿಟ್ಟರೂ ನೋ ಬಾಲ್ ನೀಡಲಾಗುತ್ತದೆ. ಆದರೆ ಬ್ಯಾಟರ್ ಅದೇ ಕ್ರೀಸ್ ಅನ್ನು ಚೆಂಡೆಸೆಯುವ ಮುನ್ನ ದಾಟಿ ಮುಂದೆ ಹೋದರೆ ಯಾವುದೇ ರನ್ ಕಡಿತವಿಲ್ಲ. ಬ್ಯಾಟರ್ಗೆ ಸಿಗುವ ಇಂತಹ ಅನುಕೂಲತೆಯನ್ನು ತಪ್ಪಿಸಲು ಮಂಕಡ್ ರನೌಟ್ ಮಾಡಿದಾಗ ಕ್ರೀಡಾ ಸ್ಫೂರ್ತಿಯನ್ನು ಮುನ್ನಲೆಗೆ ತರಲಾಗುತ್ತದೆ.
ಬ್ಯಾಟರ್ಗೆ ನಿಜಕ್ಕೂ ಕ್ರೀಡಾ ಸ್ಫೂರ್ತಿ ಇದ್ದಿದ್ದರೆ, ಮೊದಲೇ ಕ್ರೀಸ್ ಬಿಡುತ್ತಿರಲಿಲ್ಲ ಅಲ್ಲವೇ. ಇಲ್ಲಿ ಔಟ್ ಮಾಡಿದಾಗ ಕೇಳಿ ಬರುವ ಕ್ರೀಡಾ ಸ್ಫೂರ್ತಿ, ಬ್ಯಾಟರ್ ಮೊದಲೇ ಕ್ರೀಸ್ ಬಿಟ್ಟು ಪಡೆಯುತ್ತಿರುವ ಲಾಭದ ವಿಷಯದಲ್ಲಿ ಏಕೆ ಕೇಳಿ ಬರುತ್ತಿಲ್ಲ?.
ಈ ಹಿಂದೆ ಅನೇಕ ಪಂದ್ಯಗಳಲ್ಲಿ ಹೀಗೆ ನಾನ್ ಸ್ಟ್ರೈಕ್ನಲ್ಲಿದ್ದ ಬ್ಯಾಟರ್ಗಳು ಮೊದಲೇ ಕ್ರೀಸ್ ಬಿಟ್ಟು ರನ್ ಓಡಿ ಸ್ಟ್ರೈಕ್ ಪಡೆದು ಪಂದ್ಯ ಗೆಲ್ಲಿಸಿದ ಉದಾಹರಣೆಗಳಿವೆ. ಬ್ಯಾಟರ್ಗಳು ಇಂತಹ ಲಾಭಗಳನ್ನು ಪಡೆಯುತ್ತಿದ್ದಾರೆ ಎಂದೇ ಮಂಕಡ್ ರನೌಟ್ ಅನ್ನು ಕಾನೂನುಬದ್ಧಗೊಳಿಸಲಾಗಿದೆ.
ಮಂಕಡ್ ರನೌಟ್ ವಿಷಯದಲ್ಲಿ ಬ್ಯಾಟರ್ಗಳಿಗೆ ಇಲ್ಲದ ಕ್ರೀಡಾ ಸ್ಫೂರ್ತಿ ಬೌಲರ್ಗಳಿಗೆ ಮಾತ್ರ ಏಕೆ? ಎಂಬುದನ್ನು ಈ ಹಿಂದೆಯೇ ಲೆಜೆಂಡ್ ಕಪಿಲ್ ದೇವ್ ಪ್ರಶ್ನಿಸಿದ್ದಾರೆ. ಅಲ್ಲದೆ ಐಸಿಸಿ, ಮಂಕಡ್ ರನೌಟ್ ನಿಯಮವನ್ನು ಜಾರಿಗೊಳಿಸಿದಾಗ ಅದನ್ನು ಸ್ವಾಗತಿಸಿದವರಲ್ಲಿ ಕಪಿಲ್ ದೇವ್ ಕೂಡ ಒಬ್ಬರು.
ಕಪಿಲ್ ದೇವ್ ಅಲ್ಲದೆ, ರವಿಚಂದ್ರ ಅಶ್ವಿನ್ ಕೂಡ ಈ ಹಿಂದೆಯೇ ಮಂಕಡ್ ರನೌಟ್ ಪರ ವಹಿಸಿ ಹೇಳಿಕೆಗಳನ್ನು ನೀಡಿದ್ದರು. ಇವೆಲ್ಲಕ್ಕಿಂತ ಕುತೂಹಲಕಾರಿ ವಿಷಯ ಎಂದರೆ ಮಂಕಡ್ ರನೌಟ್ ಅನ್ನು ಮುನ್ನಲೆಗೆ ತಂದಿದ್ದೇ ಭಾರತೀಯ ಆಟಗಾರ ಎಂಬುದು.
ಅಂದರೆ ಮಂಕಡ್ ರನೌಟ್ ಅಥವಾ ಮಂಕಡಿಂಗ್ ರನೌಟ್ಗೆ ಮಂಕಡ್ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮಂಕಡ್. 1947 ರಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ ಬಿಲ್ ಬ್ರೌನ್ ಅನ್ನು ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟ ಕಾರಣ ವಿನೂ ಮಂಕಡ್ ನಾನ್ ಸ್ಟ್ರೈಕ್ನಲ್ಲಿ ರನೌಟ್ ಮಾಡಿದ್ದರು.
ಭಾರತೀಯ ಆಟಗಾರ ಮಾಡಿದ ಹೊಸ ರೀತಿಯ ರನೌಟ್ ಹೊಸ ಚರ್ಚೆಯನ್ನು ಹುಟ್ಟು ಹಾಕಿತು. ಅಂದು ವಿನೂ ಮಂಕಡ್ ಮಾಡಿದ ರನೌಟ್ ನಂತರ ಮಂಕಡ್ ರನೌಟ್ ಅಥವಾ ಮಂಕಡಿಂಗ್ ಎಂದೇ ಪ್ರಸಿದ್ಧಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮಂಕಡಿಂಗ್ ರನೌಟ್ ಎಂದು ಕರೆಯಲಾಯಿತು.
ಈ ಹಿಂದೆ ಮಂಕಡ್ ರನೌಟ್ ಮಾಡುವ ಮೊದಲು ಬ್ಯಾಟರ್ಗೆ 1 ಬಾರಿ ಎಚ್ಚರಿಕೆ ನೀಡಬೇಕೆಂಬ ನಿಯಮವಿತ್ತು. ಆದರೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಮಂಕಡಿಂಗ್ ರನೌಟ್ ಅನ್ನು ಸಾಮಾನ್ಯ ರನೌಟ್ನಂತೆ ಪರಿಗಣಿಸಿದ್ದಾರೆ. ಅದರಂತೆ ಚೆಂಡೆಸೆಯುವ ಮುನ್ನ ನಾನ್ ಸ್ಟ್ರೈಕರ್ ಬ್ಯಾಟರ್ ಕ್ರೀಸ್ ಬಿಟ್ಟರೆ ನೇರವಾಗಿ ರನೌಟ್ ಮಾಡುವ ಅವಕಾಶ ಬೌಲರ್ಗೆ ಇದೆ.
ಇದನ್ನೂ ಓದಿ: VIDEO: ದಿಗ್ವೇಶ್ ರಾಥಿ ಮಹಾ ಎಡವಟ್ಟು… ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ!
ಇದಾಗ್ಯೂ ಬೌಲರ್ಗಳ ಬೆಂಬಲಕ್ಕೆ ನಿಲ್ಲದೆ ನಾಯಕರುಗಳು ಕ್ರೀಡಾ ಸ್ಫೂರ್ತಿಯ ಟ್ಯಾಗ್ ಲೈನ್ನೊಂದಿಗೆ ಹೀರೋಗಳಾಗುತ್ತಿರುವುದು ಮಾತ್ರ ವಿಪರ್ಯಾಸ.
Published On - 11:18 am, Wed, 28 May 25