- Kannada News Photo gallery A special fair in Vijayapura district, The fair ends in just three hours, Kannada News
ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಜಾತ್ರೆ; ಕೇವಲ ಮೂರು ಗಂಟೆಗಳಲ್ಲಿ ಮುಕ್ತಾಯವಾಗೋ ಜಾತ್ರೆಯಿದು!
ಶ್ರಾವಣ ಮಾಸ, ಹಬ್ಬಗಳ ಮಾಸ ಎಂದೇ ಕರೆಯುತ್ತಾರೆ. ಸರಣಿ ಸಾಲುಗಳ ರೀತಿಯಲ್ಲಿ ವಿವಿಧ ಹಬ್ಬಗಳನ್ನು ಶ್ರಾವಣ ಮಾಸದಲ್ಲಿ ಆಚರಣೆ ಮಾಡುತ್ತೇವೆ. ಇದೇ ಶ್ರಾವಣದಲ್ಲಿ ಕೆಲ ಜಾತ್ರೆಗಳೂ ನಡೆಯುತ್ತವೆ. ಅಂಥವುಗಳ ಸಾಲಿಗೆ ನಾಗವಾಡ ಗ್ರಾಮದ ಜಾತ್ರೆಯೂ ಸೇರಿದೆ. ಬಲು ಅಪರೂಪದ ಜಾತ್ರೆಯೆಂದೇ ನಾಗವಾಡದ ಜಾತ್ರೆಯನ್ನು ಕರೆಯಲಾಗುತ್ತದೆ. ಕಾರಣ, ಇತರೆ ಜಾತ್ರೆಗಳಂತೆ ಇಲ್ಲಿ ರಥೋತ್ಸವ ಇಲ್ಲ, ಬಾಜಾ ಭಜಂತ್ರಿ ಸದ್ದು ಗದ್ದಲವಿಲ್ಲ. ಕೇವಲ ಮೂರು ಗಂಟೆಗಳಲ್ಲಿ ಇಡೀ ಜಾತ್ರೆಯೇ ಮುಗಿದು ಹೋಗುತ್ತದೆ. ಮೂರು ಗಂಟೆಯ ವಿಶೇಷ ಜಾತ್ರೆಯ ಕುರಿತ ವರದಿ ಇಲ್ಲಿದೆ.
Updated on: Sep 03, 2024 | 9:02 PM

ಪ್ರತಿ ವರ್ಷ ಶ್ರಾವಣ ಮಾಸದ ಕೊನೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಾಗವಾಡ ಗ್ರಾಮದ ಶ್ರೀ ಸಿದ್ದರಾಮೇಶ್ವರ ಜಾತ್ರೆ ನಡೆಯುತ್ತದೆ. ಇದನ್ನು ಬೆಟ್ಟದ ಸಿದ್ದರಾಮೇಶ್ವರನ ಜಾತ್ರೆಯೆಂದೇ ಕರೆಯುತ್ತಾರೆ. ಇತರೆ ಜಾತ್ರೆಗಳಂತೆ ಈ ಜಾತ್ರೆ ನಡೆಯಲ್ಲ, ಇಲ್ಲಿ ರಥೋತ್ಸವವಿಲ್ಲ, ಕಲಾ ತಂಡಗಳ ವೈಭವಗಳು ಕಂಡು ಬರಲ್ಲ.

ಬೆಟ್ಟದ ಮೇಲೆ ನೆಲಸಿರೋ ಶ್ರೀ ಸಿದ್ದರಾಮೇಶ್ವರನಿಗೆ ಜಾತ್ರೆಯ ಪ್ರಯುಕ್ತ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬೆಟ್ಟದ ಮೇಲಿರೋ ಸಿದ್ದರಾಮೇಶ್ವರ ದರ್ಶನಕ್ಕೆ ಯಾವುದೇ ಮಾರ್ಗವಿಲ್ಲ, ವಾಹನಗಳಿಗೆ ಇಲ್ಲಿ ದಾರಿಯಿಲ್ಲ. ಯಾರೇ ಭಕ್ತರೂ ಬಂದರೂ ಕಡಿದಾದ ಬೆಟ್ಟವನ್ನು ಹತ್ತಿಕೊಂಡೇ ಹೋಗಬೇಕಿದೆ.

ಪುಟ್ಟ ಮಕ್ಕಳಿಂದ ಹಿಡಿದು ಯುವಕ-ಯುವತಿಯರು, ಮಹಿಳೆಯರು, ಪುರುಷರು ಬೆಟ್ಟವನ್ನು ಹತ್ತಿ ದೇವರ ದರ್ಶನ ಮಾಡುತ್ತಾರೆ. ಇದೇ ನಾಗವಾಡ ಗ್ರಾಮದಿಂದ ಶ್ರೀ ಸಿದ್ದರಾಮೇಶ್ವರ ಪಲ್ಲಕ್ಕಿಯನ್ನು ಭಕ್ತರು ಹೊತ್ತು ತರುತ್ತಾರೆ. ಅಲಂಕಾರ ಮಾಡಿರೋ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಬೆಟ್ಟವನ್ನು ಏರುವುದರ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತದೆ.

ಪಲ್ಲಕ್ಕಿಯಲ್ಲಿರೋ ಸಿದ್ದರಾಮೇಶ್ವರ ಮೂರ್ತಿಯನ್ನು ದೇವಸ್ಥಾನದಲ್ಲಿಟ್ಟು ಪೂಜಿಸುವುದು ಹಾಗೂ ಹೊತ್ತು ತಂದ ಕಳಶವನ್ನು ದೇವಸ್ಥಾನದ ಗೋಪುರಕ್ಕೆ ಹಾಕುವ ಪದ್ದತಿ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ನಾಗವಾಡ ಗ್ರಾಮದ ಹೊರ ಭಾಗದಲ್ಲಿನ ಬೆಟ್ಟದ ಮೇಲಿರೀ ಶ್ರೀ ಸಿದ್ದರಾಮೇಶ್ವರ ದೇವರ ಜಾತ್ರೆ ಶ್ರದ್ದಾಭಕ್ತಿಯಿಂದ ನಡೆಯಿತು. ಮಧ್ಯಾಹ್ನದ ಬಳಿಕ 4 ಗಂಟೆಗೆ ಆರಂಭವಾದ ಜಾತ್ರೆ ಸಾಯಂಕಾಲ 7 ಗಂಟೆಗೆ ಸರಿಯಾಗಿ ಸಂಪನ್ನವಾಯಿತು.

ಇನ್ನು ಈ ಬೆಟ್ಟದ ಸಿದ್ದರಾಮೇಶ್ವರ ದೇವರು ಬೇಡಿದ ವರವನ್ನು ನೀಡುವ ದೇವರೆಂದು ಪ್ರತೀತಿ ಇದೆ. ಇದರ ಜೊತೆಗೆ ಇಲ್ಲಿ ನರಲಿ (Skin Tag)ಗೆ ಪರಿಹಾರವಿದೆ. ನರಲಿಯಿಂದ ಬಳಲುತ್ತಿರುವವರು ಸತತ ಐದು ಅಮಾವಾಸ್ಯೆ ಅಥವಾ ಐದು ಸೋಮವಾರ ನಾಗವಾಡದ ಬೆಟ್ಟದ ಮೇಲಿರೋ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ದರ್ಶನ ಮಾಡಬೇಕು.

ಬಳಿಕ ದೇವಸ್ಥಾನದಲ್ಲಿನ ತೀರ್ಥ ರೂಪದಲ್ಲಿರುವ ಜಲವನ್ನು ತೆಗೆದುಕೊಂಡು ಹೋಗಬೇಕು. ನಿತ್ಯ ನರಲಿ ಆಗಿರುವ ಜಾಗದಲ್ಲಿ ಆ ನೀರನ್ನು ಹಚ್ಚಿದರೆ, ಐದು ಸೋಮವಾರ ಅಥವಾ ಐದು ಅಮವಾಸ್ಯೆ ಆಗುವುದರ ಒಳಗೆ ನರಲಿ ಸಂಪೂರ್ಣ ಗುಣಮುಖವಾಗಿರುತ್ತದೆ. ನರಲಿ ರೋಗದಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಸೋಮವಾದ ಹಾಗೂ ಅಮಾವಾಸ್ಯೆಯಂದು ಇಲ್ಲಿ ಆಗಮಿಸುತ್ತಾರೆ.

ಶ್ರೀ ಸಿದ್ದರಾಮೇಶ್ವರ ಜಾತ್ರೆ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ನಡೆಯುತ್ತದೆ. ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಜಾತ್ರೆ ನಡೆದ ಉದಾಹರಣೆ ಇತಿಹಾಸದಲ್ಲೇ ಇಲ್ಲ, ಈ ಜಾತ್ರೆಗೆ ವಿಜಯಪುರ ಜಿಲ್ಲೆ ಹಾಗೂ ಇತರೆ ಸುತ್ತಮುತ್ತಲಿನ ಜನರು ನೆರೆ ರಾಜ್ಯ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ನಾಗವಾಡದ ಜಾತ್ರೆ ನಡೆಯುತ್ತದೆ.

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......
Read More



