- Kannada News Photo gallery A special fair in Vijayapura district, The fair ends in just three hours, Kannada News
ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಜಾತ್ರೆ; ಕೇವಲ ಮೂರು ಗಂಟೆಗಳಲ್ಲಿ ಮುಕ್ತಾಯವಾಗೋ ಜಾತ್ರೆಯಿದು!
ಶ್ರಾವಣ ಮಾಸ, ಹಬ್ಬಗಳ ಮಾಸ ಎಂದೇ ಕರೆಯುತ್ತಾರೆ. ಸರಣಿ ಸಾಲುಗಳ ರೀತಿಯಲ್ಲಿ ವಿವಿಧ ಹಬ್ಬಗಳನ್ನು ಶ್ರಾವಣ ಮಾಸದಲ್ಲಿ ಆಚರಣೆ ಮಾಡುತ್ತೇವೆ. ಇದೇ ಶ್ರಾವಣದಲ್ಲಿ ಕೆಲ ಜಾತ್ರೆಗಳೂ ನಡೆಯುತ್ತವೆ. ಅಂಥವುಗಳ ಸಾಲಿಗೆ ನಾಗವಾಡ ಗ್ರಾಮದ ಜಾತ್ರೆಯೂ ಸೇರಿದೆ. ಬಲು ಅಪರೂಪದ ಜಾತ್ರೆಯೆಂದೇ ನಾಗವಾಡದ ಜಾತ್ರೆಯನ್ನು ಕರೆಯಲಾಗುತ್ತದೆ. ಕಾರಣ, ಇತರೆ ಜಾತ್ರೆಗಳಂತೆ ಇಲ್ಲಿ ರಥೋತ್ಸವ ಇಲ್ಲ, ಬಾಜಾ ಭಜಂತ್ರಿ ಸದ್ದು ಗದ್ದಲವಿಲ್ಲ. ಕೇವಲ ಮೂರು ಗಂಟೆಗಳಲ್ಲಿ ಇಡೀ ಜಾತ್ರೆಯೇ ಮುಗಿದು ಹೋಗುತ್ತದೆ. ಮೂರು ಗಂಟೆಯ ವಿಶೇಷ ಜಾತ್ರೆಯ ಕುರಿತ ವರದಿ ಇಲ್ಲಿದೆ.
Updated on: Sep 03, 2024 | 9:02 PM

ಪ್ರತಿ ವರ್ಷ ಶ್ರಾವಣ ಮಾಸದ ಕೊನೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಾಗವಾಡ ಗ್ರಾಮದ ಶ್ರೀ ಸಿದ್ದರಾಮೇಶ್ವರ ಜಾತ್ರೆ ನಡೆಯುತ್ತದೆ. ಇದನ್ನು ಬೆಟ್ಟದ ಸಿದ್ದರಾಮೇಶ್ವರನ ಜಾತ್ರೆಯೆಂದೇ ಕರೆಯುತ್ತಾರೆ. ಇತರೆ ಜಾತ್ರೆಗಳಂತೆ ಈ ಜಾತ್ರೆ ನಡೆಯಲ್ಲ, ಇಲ್ಲಿ ರಥೋತ್ಸವವಿಲ್ಲ, ಕಲಾ ತಂಡಗಳ ವೈಭವಗಳು ಕಂಡು ಬರಲ್ಲ.

ಬೆಟ್ಟದ ಮೇಲೆ ನೆಲಸಿರೋ ಶ್ರೀ ಸಿದ್ದರಾಮೇಶ್ವರನಿಗೆ ಜಾತ್ರೆಯ ಪ್ರಯುಕ್ತ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬೆಟ್ಟದ ಮೇಲಿರೋ ಸಿದ್ದರಾಮೇಶ್ವರ ದರ್ಶನಕ್ಕೆ ಯಾವುದೇ ಮಾರ್ಗವಿಲ್ಲ, ವಾಹನಗಳಿಗೆ ಇಲ್ಲಿ ದಾರಿಯಿಲ್ಲ. ಯಾರೇ ಭಕ್ತರೂ ಬಂದರೂ ಕಡಿದಾದ ಬೆಟ್ಟವನ್ನು ಹತ್ತಿಕೊಂಡೇ ಹೋಗಬೇಕಿದೆ.

ಪುಟ್ಟ ಮಕ್ಕಳಿಂದ ಹಿಡಿದು ಯುವಕ-ಯುವತಿಯರು, ಮಹಿಳೆಯರು, ಪುರುಷರು ಬೆಟ್ಟವನ್ನು ಹತ್ತಿ ದೇವರ ದರ್ಶನ ಮಾಡುತ್ತಾರೆ. ಇದೇ ನಾಗವಾಡ ಗ್ರಾಮದಿಂದ ಶ್ರೀ ಸಿದ್ದರಾಮೇಶ್ವರ ಪಲ್ಲಕ್ಕಿಯನ್ನು ಭಕ್ತರು ಹೊತ್ತು ತರುತ್ತಾರೆ. ಅಲಂಕಾರ ಮಾಡಿರೋ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಬೆಟ್ಟವನ್ನು ಏರುವುದರ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತದೆ.

ಪಲ್ಲಕ್ಕಿಯಲ್ಲಿರೋ ಸಿದ್ದರಾಮೇಶ್ವರ ಮೂರ್ತಿಯನ್ನು ದೇವಸ್ಥಾನದಲ್ಲಿಟ್ಟು ಪೂಜಿಸುವುದು ಹಾಗೂ ಹೊತ್ತು ತಂದ ಕಳಶವನ್ನು ದೇವಸ್ಥಾನದ ಗೋಪುರಕ್ಕೆ ಹಾಕುವ ಪದ್ದತಿ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ನಾಗವಾಡ ಗ್ರಾಮದ ಹೊರ ಭಾಗದಲ್ಲಿನ ಬೆಟ್ಟದ ಮೇಲಿರೀ ಶ್ರೀ ಸಿದ್ದರಾಮೇಶ್ವರ ದೇವರ ಜಾತ್ರೆ ಶ್ರದ್ದಾಭಕ್ತಿಯಿಂದ ನಡೆಯಿತು. ಮಧ್ಯಾಹ್ನದ ಬಳಿಕ 4 ಗಂಟೆಗೆ ಆರಂಭವಾದ ಜಾತ್ರೆ ಸಾಯಂಕಾಲ 7 ಗಂಟೆಗೆ ಸರಿಯಾಗಿ ಸಂಪನ್ನವಾಯಿತು.

ಇನ್ನು ಈ ಬೆಟ್ಟದ ಸಿದ್ದರಾಮೇಶ್ವರ ದೇವರು ಬೇಡಿದ ವರವನ್ನು ನೀಡುವ ದೇವರೆಂದು ಪ್ರತೀತಿ ಇದೆ. ಇದರ ಜೊತೆಗೆ ಇಲ್ಲಿ ನರಲಿ (Skin Tag)ಗೆ ಪರಿಹಾರವಿದೆ. ನರಲಿಯಿಂದ ಬಳಲುತ್ತಿರುವವರು ಸತತ ಐದು ಅಮಾವಾಸ್ಯೆ ಅಥವಾ ಐದು ಸೋಮವಾರ ನಾಗವಾಡದ ಬೆಟ್ಟದ ಮೇಲಿರೋ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ದರ್ಶನ ಮಾಡಬೇಕು.

ಬಳಿಕ ದೇವಸ್ಥಾನದಲ್ಲಿನ ತೀರ್ಥ ರೂಪದಲ್ಲಿರುವ ಜಲವನ್ನು ತೆಗೆದುಕೊಂಡು ಹೋಗಬೇಕು. ನಿತ್ಯ ನರಲಿ ಆಗಿರುವ ಜಾಗದಲ್ಲಿ ಆ ನೀರನ್ನು ಹಚ್ಚಿದರೆ, ಐದು ಸೋಮವಾರ ಅಥವಾ ಐದು ಅಮವಾಸ್ಯೆ ಆಗುವುದರ ಒಳಗೆ ನರಲಿ ಸಂಪೂರ್ಣ ಗುಣಮುಖವಾಗಿರುತ್ತದೆ. ನರಲಿ ರೋಗದಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಸೋಮವಾದ ಹಾಗೂ ಅಮಾವಾಸ್ಯೆಯಂದು ಇಲ್ಲಿ ಆಗಮಿಸುತ್ತಾರೆ.

ಶ್ರೀ ಸಿದ್ದರಾಮೇಶ್ವರ ಜಾತ್ರೆ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ನಡೆಯುತ್ತದೆ. ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಜಾತ್ರೆ ನಡೆದ ಉದಾಹರಣೆ ಇತಿಹಾಸದಲ್ಲೇ ಇಲ್ಲ, ಈ ಜಾತ್ರೆಗೆ ವಿಜಯಪುರ ಜಿಲ್ಲೆ ಹಾಗೂ ಇತರೆ ಸುತ್ತಮುತ್ತಲಿನ ಜನರು ನೆರೆ ರಾಜ್ಯ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ನಾಗವಾಡದ ಜಾತ್ರೆ ನಡೆಯುತ್ತದೆ.



