- Kannada News Photo gallery AI technology entered agriculture: Many farmers in Koppal benefits from weather watch
ಕೃಷಿಗೂ ಕಾಲಿಟ್ಟ ಎಐ ಟೆಕ್ನಾಲಜಿ: ವೆದರ್ ವಾಚ್ನಿಂದ ರೈತರಿಗೆ ಹತ್ತಾರು ಪ್ರಯೋಜನ
ಕೊಪ್ಪಳ, ಜನವರಿ 23: ಇದೀಗ ಎಲ್ಲಡೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಜೋರಾಗಿ ಸದ್ದು ಮಾಡುತ್ತಿದೆ. ಸುದ್ದಿ ನಿರೂಪಣೆಯಿಂದ ಹಿಡಿದು ಜನರ ಅನೇಕ ಕೆಲಸಗಳಿಗೆ ಎಐ ಟೆಕ್ನಾಲಜಿ ಬಳಕೆಯಾಗುತ್ತಿದೆ. ಇದೀಗ ಕೃಷಿಗೂ ಕೂಡಾ ಎಐ ಟೆಕ್ನಾಲಜಿ ಬಂದಿದೆ. ರೈತರು ತಮ್ಮ ಜಮೀನಿನಲ್ಲಿ ಪುಟ್ಟ ಮಷಿನ್ ಅಳವಡಿಸಿದ್ರೆ ಸಾಕು, ತಮ್ಮ ಬೆಳೆಗಳಿಗೆ ಎಷ್ಟು ನೀರು ಕೊಡಬೇಕು, ಗೊಬ್ಬರದ ಅವಶ್ಯಕತೆ ಇದೆಯಾ? ರೋಗರುಜಿನಗಳು ಬರುವ ಸಾಧ್ಯತೆ ಏನು, ಹವಾಮಾನ ಹೇಗಿದೆ ಎಂಬುದೂ ಸೇರಿದಂತೆ ಅನೇಕ ಮಾಹಿತಿ ರೈತರ ಮೊಬೈಲ್ಗೆ ಬರುತ್ತದೆ. ಹದಿನೈದು ದಿನದ ಹವಾಮಾನ ಮಾಹಿತಿ ರೈತರಿಗೆ ಮೊದಲೇ ಗೊತ್ತಾಗುತ್ತದೆ!
Updated on:Jan 23, 2025 | 1:02 PM

ಆರ್ಟಿಪಿಷಿಯಲ್ ಇಂಟಲಿಜನ್ಸ್ ಎಂದು ಕರೆಯುವ ಎಐ ಟೆಕ್ನಾಲಜಿ ಇದೀಗ ಹೆಚ್ಚು ಚಾಲ್ತಿಯಲ್ಲಿದ್ದು, ಅನೇಕ ರಂಗಗಳಲ್ಲಿ ಬಳಕೆ ಹೆಚ್ಚಾಗುತ್ತಿದೆ. ಇದೀಗ ರೈತರು ಕೂಡಾ ಎಐ ಟೆಕ್ನಾಲಜಿಯನ್ನು ಬಳಸಿಕೊಂಡು, ಕೃಷಿಯಲ್ಲಿ, ಅದರಲ್ಲೂ ತೋಟಗಾರಿಕೆ ಬೆಳೆಗಳಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಕೃಷಿ ಹಮಾಮಾನವನ್ನು ಅವಲಂಬಿಸಿದೆ.

ಹವಾಮಾನ ಬದಲಾವಣೆಯಾಗುವುದರಿಂದ ವಿಶೇಷವಾಗಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಮಾವು, ಬಾಳೆ ಸೇರಿದಂತೆ ಅನೇಕ ಬೆಳೆಗಳಿಗೆ ರೋಗಗಳು ಕೂಡಾ ಬರುತ್ತವೆ. ಜೊತೆಗೆ ಯಾವ ಬೆಳೆಗೆ ಯಾವಾಗ ಎಷ್ಟು ನೀರಬಿಡಬೇಕು, ಮುಂದೆ ಹವಾಮಾನ ಹೇಗಿದೆ ಎಂಬುದು ರೈತರಿಗೆ ಗೊತ್ತಾಗುವುದಿಲ್ಲ. ಅನೇಕ ಸಲ ಅವಶ್ಯಕತೆಗಿಂತ ಹೆಚ್ಚು ನೀರು ಬಿಟ್ಟರೆ, ಅನೇಕ ಸಲ ನೀರನ್ನೇ ಬಿಡುವುದಿಲ್ಲ. ಗೊಬ್ಬರ ಹಾಕುವಾಗ ಕೂಡಾ ಹೆಚ್ಚುಕಡಿಮೆ ಹಾಕುವುದರಿಂದ ಬೆಳೆಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಇನ್ನು ಬೆಳೆಗಳಿಗೆ ಬರುವ ರೋಗಗಳ ಬಗ್ಗೆ ಕೂಡಾ ಗಮನಹರಿಸೋದಿಲ್ಲ. ಹೀಗಾಗಿ ನಿರೀಕ್ಷಿತ ಫಸಲು ಬಾರದಂತಾಗುತ್ತದೆ. ಆದರೆ ಇದೆಲ್ಲವನ್ನು ತಪ್ಪಿಸುವ ಉದ್ದೇಶದಿಂದ ಇದೀಗ ರೈತರು ಎಐ ಟೆಕ್ನಾಲಜಿ ಬಳಕೆ ಮಾಡಿಕೊಂಡು, ತಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ರೈತರು ವೆದರ್ ವಾಚ್ ಎಂದು ಕರೆಯುವ ಪುಟ್ಟ ವೆದರ್ ಸ್ಟೇಷನ್ ಅನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡರೆ ಸಾಕು, ತಾವು ತಮ್ಮ ಜಮೀನಿನಲ್ಲಿ ಹಾಕಿರುವ ಬೆಳೆಗೆ ಬೇಕಾದ ನೀರು, ಗೊಬ್ಬರ, ಹವಾಮಾನ ಮಾಹಿತಿ ರೈತರ ಮೊಬೈಲ್ಗೆ ಬರುತ್ತದೆ. ವೆದರ್ ವಾಚ್ ನಿರ್ಮಾಣದ ಅನೇಕ ಕಂಪನಿಗಳು ಇದೀಗ ಆರಂಭವಾಗಿದ್ದು, ಎಲ್ಲಡೆ ಸುಲಭವಾಗಿ ವೆದರ್ ವಾಚ್ಗಳು ಸಿಗುತ್ತವೆ. ಇನ್ನು ಸೋಲಾರ್ ಆಧಾರದಲ್ಲಿ ಕೆಲಸ ಮಾಡುವ ವೆದರ್ ವಾಚ್ ಅನ್ನು ರೈತರ ಜಮೀನಿನಲ್ಲಿ ಅಳವಡಿಸಲಾಗುತ್ತದೆ. ಬೆಳೆಗಳ ಸಮೀಪ ಪುಟ್ಟ ಸಾಧನಗಳನ್ನು ಅಳವಡಿಸಲಾಗುತ್ತದೆ. ಅದು, ಭೂಮಿಯಲ್ಲಿನ ತೇವಾಂಶ, ಗೊಬ್ಬರದ ಅವಶ್ಯತೆಯ ಮಾಹಿತಿ ನೀಡುತ್ತದೆ.

ರೈತರು ತಮ್ಮ ಮೊಬೈಲ್ನಲ್ಲಿ ವೆದರ್ ವಾಚ್ ಪೂರೈಕೆ ಮಾಡಿರುವ ಕಂಪನಿ ಸೂಚಿಸುವ ಆ್ಯಪ್ಇನಸ್ಟಾಲ್ ಮಾಡಿಕೊಂಡು, ಅದರಲ್ಲಿ ಬೆಳೆ ಸೇರಿದಂತೆ ಕೆಲ ಮಾಹಿತಿಗಳನ್ನು ಅಪ್ಡೇಟ್ ಮಾಡಿದರೆ, ನಿರಂತರವಾಗಿ ರೈತರಿಗೆ ಮಾಹಿತಿ ಬರುತ್ತಲೇ ಇರುತ್ತದೆ.

ತೋಟಗಾರಿಕೆ ಇಲಾಖೆಯಿಂದ ಸಹಾಯಧನ: ಇನ್ನು ಸ್ವತಃ ತೋಟಗಾರಿಕೆ ಇಲಾಖೆಯೇ ಇಂತಹ ಎಐ ಟೆಕ್ನಾಲಜಿ ಹೊಂದಿರುವ ವೆದರ್ ವಾಚ್ಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರೇರಿಪಿಸುತ್ತಿದೆ. ಕೊಪ್ಪಳದಲ್ಲಿ ಇನೋವೇಟಿವ್ ಸ್ಕೀಮ್ ಯೋಜನೆಯಡಿ, ನೂರು ವೆದರ್ ವಾಚ್ಗಳನ್ನು ಅಳವಡಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೆಲ ರೈತರು ತಮ್ಮ ಜಮೀನಿನಲ್ಲಿ ವೆದರ್ ವಾಚ್ಗಳನ್ನು ಅಳವಡಿಸಿಕೊಂಡಿದ್ದಾರೆ. ಇನ್ನು ರೈತರು ಈ ವೆದರ್ ವಾಚ್ ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಕೂಡಾ ನೀಡಲಾಗುತ್ತಿದೆ.

ಒಂದು ವೆದರ್ ವಾಚ್ ಬೆಲೆ ನಲವತ್ತು ಸಾವಿರ ರೂ. ಇದೆ. ಆದರೆ, ಅದಕ್ಕೆ ಇಪ್ಪತ್ತು ಸಾವಿರ ಸಬ್ಸಿಡಿಯನ್ನು ತೋಟಗಾರಿಕೆ ಇಲಾಖೆ ನೀಡುತ್ತದೆ. ಹೀಗಾಗಿ ರೈತರು ಇಪ್ಪತ್ತು ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು, ತಮ್ಮ ಜಮೀನಿನಲ್ಲಿ ವೆದರ್ ವಾಚ್ ಅಳವಡಿಸಿಕೊಳ್ಳಬಹುದಾಗಿದೆ. ಇದಕ್ಕೆ ರೈತರು ತೋಟಗಾರಿಕೆ ಇಲಾಖೆಗ ಅರ್ಜಿ ಹಾಕಿ ಸಹಾಯಧನವನ್ನು ಪಡೆಯಬಹುದಾಗಿದೆ.

ಕೃಷಿಯಲ್ಲಿ ಕೂಡಾ ತಂತ್ರಜ್ಞಾನ ಬಳಸಿಕೊಂಡರೆ, ಕಡಿಮೆ ಖರ್ಚಿನಲ್ಲಿ ರೈತರು ಕೂಡಾ ಹೆಚ್ಚಿನ ಆಧಾಯ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ತಿಳಿದು, ಅದನ್ನು ಬಳಕೆ ಮಾಡುವುದರತ್ತ ಒಲವು ಹೊಂದಬೇಕಿದೆ.
Published On - 12:56 pm, Thu, 23 January 25
























