
ಸಾಂಸ್ಕ್ರತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢದ ಮಾಸದ ಸಂಭ್ರಮ ಮನೆ ಮಾಡಿತ್ತು. ನಾಲ್ಕನೇ ಹಾಗೂ ಆಷಾಢ ಶುಕ್ರವಾರ ಹಿನ್ನೆಲೆ ವಿವಿಧ ಪುಷ್ಪಾಲಂಕಾರದಿಂದ ಸನ್ನಿಧಿ ಕಂಗೊಳಿಸುತಿತ್ತು. ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸಿಂಹವಾಹಿನಿ ಅಲಂಕಾರದಲ್ಲಿ ಭಕ್ತಗಣಕ್ಕೆ ದರ್ಶನ ನೀಡಿದ್ದಾರೆ.

ಆಷಾಢ ಶುಕ್ರವಾರ ಬಂದ್ರೆ ಸಾಕು ಚಾಮುಂಡಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಈ ಆಷಾಢ ಮಾಸದಲ್ಲಿ ಭಕ್ತರು ಭಕ್ತಿ ಪರಕಾಷ್ಠೆಯಲ್ಲಿ ಮಿಂದೇಳುತ್ತಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಲ್ಕನೇ ಕೊನೆ ಆಷಾಢ ಶುಕ್ರವಾರ ಹಿನ್ನೆಲೆ ಇಂದು ಸಹಸ್ರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದುಕೊಂಡಿದ್ದಾರೆ.

ಮುಂಜಾನೆ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಪೂಜೆ ಆರಂಭವಾಗಿದ್ದು, ದೇವಿಗೆ ಆಷಾಢದ ನಾಲ್ಕನೇ ಶುಕ್ರವಾರ ಹಿನ್ನಲೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಮಾಡಿ ಮಹಾಮಂಗಳಾರತಿ ನೆರವೇರಿಸಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆಷಾಡ ಶುಕ್ರವಾರದ ಪೂಜೆಗೆ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕಿರಿದಾದ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಬೆಟ್ಟಕ್ಕೆ ಹೋಗಲು ಭಕ್ತರಿಗೆ ಜಿಲ್ಲಾಡಳಿತ 50ಕ್ಕೂ ಕೆಎಸ್ಆರ್ಟಿಸಿ ಬಸ್ಸಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ತಾಯಿ ದರ್ಶನ ಪಡೆದು ಪ್ರಾರ್ಥನೆ ಮಾಡಿದ್ದಾರೆ.

ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 300 ಮತ್ತು 50 ರೂ. ಟಿಕೆಟ್ ನಿಗದಿಮಾಡಲಾಗಿತ್ತು. ಇನ್ನೂ ಮುಂಜಾನೆಯಿಂದಲೇ ಬೆಟ್ಟದ ಮೆಟ್ಟಿಲುಗಳ ಮೂಲಕ, ನಾಲ್ಕನೇ ವಾರದಲ್ಲಿ ಸಿಂಹರೂಪಿಣಿಯಾಗಿ ಕಂಗೊಳಿಸುತ್ತಿದ್ದ ದೇವಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ಭಕ್ತಗಣ ಪುನೀತವಾಗಿದೆ.