ಜೀವ ಉಳಿಸುವ ಆಸ್ಪತ್ರೆಯೆದುರೇ ಇದೆ ಹಲವರ ಪ್ರಾಣಕ್ಕೆ ಮಾರಕವಾದ ಗೋಡೆ! ಶಿಥಿಲಗೊಂಡ ಕಲ್ಲು ಗೋಡೆಗಳು ಹೇಗಿವೆ ನೋಡಿ

Updated on: May 08, 2026 | 12:27 PM

ಬೆಂಗಳೂರಿನ ಮಿಂಟೋ ಆಸ್ಪತ್ರೆ ಆವರಣದ ಶಿಥಿಲಗೊಂಡ ಗೋಡೆ ಈಗ ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದಿದೆ. ಬೌರಿಂಗ್ ಆಸ್ಪತ್ರೆ ದುರಂತದ ನಂತರವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಸಾವಿರಾರು ಜನರು ಓಡಾಡುವ ನ್ಯೂ ತರಗುಪೇಟೆ ರಸ್ತೆಯ ಈ ಡೆಡ್ಲಿ ಸ್ಪಾಟ್‌ನ ದೃಶ್ಯಗಳು ಇಲ್ಲಿವೆ.

1 / 6
ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಸಂಭವಿಸಿದ ದುರಂತದ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಅಪಾಯಕಾರಿ ಸ್ಥಳ ಪತ್ತೆಯಾಗಿದೆ. ಇಷ್ಟೆಲ್ಲಾ ಸಾವು-ನೋವುಗಳು ಸಂಭವಿಸಿದರೂ ಬಿಬಿಎಂಪಿ (GBA) ಅಧಿಕಾರಿಗಳು ಮಾತ್ರ ಇಂದಿಗೂ ಅಮಾಯಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಸಂಭವಿಸಿದ ದುರಂತದ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಅಪಾಯಕಾರಿ ಸ್ಥಳ ಪತ್ತೆಯಾಗಿದೆ. ಇಷ್ಟೆಲ್ಲಾ ಸಾವು-ನೋವುಗಳು ಸಂಭವಿಸಿದರೂ ಬಿಬಿಎಂಪಿ (GBA) ಅಧಿಕಾರಿಗಳು ಮಾತ್ರ ಇಂದಿಗೂ ಅಮಾಯಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2 / 6

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ನ್ಯೂ ತರಗುಪೇಟೆ ಮುಖ್ಯರಸ್ತೆಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ಮಿಂಟೋ ಕಣ್ಣಿನ ಆಸ್ಪತ್ರೆಯ ಕಲ್ಲಿನ ಗೋಡೆ ಸಂಪೂರ್ಣ ಶಿಥಿಲಗೊಂಡಿದೆ. ದಶಕಗಳಷ್ಟು ಹಳೆಯದಾದ ಈ ಕಲ್ಲಿನ ಗೋಡೆ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದ್ದು, ಹಾದಿಹೋಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.

3 / 6

ಜೀವ ಉಳಿಸಬೇಕಾದ ಆಸ್ಪತ್ರೆಯ ಆವರಣದಲ್ಲೇ ಜೀವ ತೆಗೆಯುವ ಗೋಡೆ ಇದ್ದರೂ, ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಇದನ್ನು ಸರಿಪಡಿಸಲು ಯಾವುದೇ ಆಸಕ್ತಿ ತೋರುತ್ತಿಲ್ಲ. ಅಪಾಯದ ಅರಿವಿದ್ದರೂ ಸಹ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತಿದೆ.

4 / 6

ಸದರಿ ಗೋಡೆಯು ಪಕ್ಕದಲ್ಲೇ ಇರುವ ಮರವೊಂದಕ್ಕೆ ತಾಕಿಕೊಂಡು ವಾಲಿದ ಸ್ಥಿತಿಯಲ್ಲಿದೆ. ಮರದ ಆಸರೆಯಲ್ಲೇ ಗೋಡೆ ನಿಂತಂತಿದ್ದು, ಗಾಳಿ ಅಥವಾ ಮಳೆಗೆ ಮರವೇನಾದರೂ ಅಲುಗಾಡಿದರೆ ಇಡೀ ಗೋಡೆ ರಸ್ತೆಯ ಮೇಲೆ ಬೀಳುವ ಸಾಧ್ಯತೆ ಇದೆ. ಇದು ರಸ್ತೆಯಲ್ಲಿ ಸಂಚರಿಸುವವರ ಪಾಲಿಗೆ ‘ಡೆಡ್ಲಿ ಸ್ಪಾಟ್’ ಆಗಿ ಮಾರ್ಪಟ್ಟಿದೆ.

5 / 6

ಈ ಗೋಡೆ ಇರುವ ನ್ಯೂ ತರಗುಪೇಟೆ ರಸ್ತೆಯು ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು, ಅವರ ಸಂಬಂಧಿಕರು ಹಾಗೂ ವ್ಯಾಪಾರ ವಹಿವಾಟಿಗೆ ಬರುವ ಸಾವಿರಾರು ಜನರು ಪ್ರತಿನಿತ್ಯ ಇದೇ ರಸ್ತೆಯನ್ನು ಬಳಸುತ್ತಾರೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಈ ಗಂಡಾಂತರದ ನಡುವೆಯೇ ಜನ ಸಂಚರಿಸುತ್ತಿದ್ದಾರೆ.

6 / 6

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂತಹ ಹತ್ತಾರು ಅಪಾಯಕಾರಿ ತಾಣಗಳಿವೆ. ಅಧಿಕಾರಿಗಳು ಮತ್ತೊಂದು ಜೀವ ಬಲಿಯಾಗುವವರೆಗೆ ಕಾಯುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗೋಡೆಯನ್ನು ತೆರವುಗೊಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಬೇಕಿದೆ.

Published On - 12:16 pm, Fri, 8 May 26

Loading...
Unable to load recommendations.
Follow Us